ರೈತರ ಕಣ್ಣಲ್ಲಿ ನೀರು ತರಿಸಿದ ಈರುಳ್ಳಿ; ಪಾತಾಳಕ್ಕಿಳಿದ ಬೆಲೆ.
ಬೀದರ್ : ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮವಾಗಿ ದೇಶ ಸೇರಿದಂತೆ ರಾಜ್ಯದ ಹಲವು ಉದ್ಯಮಗಳು ಈಗಾಗಲೇ ತತ್ತರಿಸಿ ಹೋಗಿವೆ. ಈ ನಡುವೆ ವಾರ್ ಎಫೆಕ್ಟ್ ಅನ್ನದಾತರ ಕೈಸುಡಲೂ ಆರಂಭಿಸಿದ್ದು, ಬೀದರ್ನಲ್ಲಿ ರೈತರು ಬೆಳೆದಿದ್ದ ಈರುಳ್ಳಿ ಬೆಳೆ ಅವರ ಕಣ್ಣಲ್ಲೇ ಈಗ ನೀರು ತರಿಸುತ್ತಿದೆ. ಯುದ್ಧದ ಹಿನ್ನೆಲೆ ಗಲ್ಫ್ ರಾಷ್ಟ್ರಗಳಿಗೆ ರಫ್ತಾಗುತ್ತಿದ್ದ ಈರುಳ್ಳಿ ರಫ್ತು ನಿಂತಿರುವ ಕಾರಣ ಬೆಲೆ ಪಾತಾಳಕ್ಕೆ ಕುಸಿದಿದೆ. ಪ್ರತಿ ಕೆ.ಜಿ. ಈರುಳ್ಳಿ 4ರಿಂದ 6 ರೂಪಾಯಿವರೆಗೆ ಮಾರಾಟವಾಗುತ್ತಿರುವ ಕಾರಣ ಬೆಳೆಗಾರರು ಭಾರಿ ನಷ್ಟ ಅನುಭವಿಸುತ್ತಿದ್ದಾರೆ.
ಭಾಲ್ಕಿ ತಾಲೂಕಿನ ಹಾಲಹಿಪ್ಪಾರ್ಗಾ ಗ್ರಾಮದಲ್ಲಿ ಅತಿ ಹೆಚ್ಚು ಈರುಳ್ಳಿ ಬೆಳೆಯುವ ರೈತರಿದ್ದು, ಒಂದೇ ಗ್ರಾಮದಲ್ಲಿ 300 ಎಕರೆಗೂ ಅಧಿಕ ಜಾಗದಲ್ಲಿ ಬೆಳೆ ಬೆಳೆಯಲಾಗುತ್ತೆ. ಪ್ರತಿವರ್ಷ 3 ಸಾವಿರಕ್ಕೂ ಅಧಿಕ ಕ್ವಿಂಟಾಲ್ ಈರುಳ್ಳಿ ಹೈದ್ರಾಬಾದ್ ಮೂಲಕ ವಿದೇಶಗಳಿಗೆ ರಫ್ತಾಗುತ್ತಿತ್ತು. ಆದರೆ ಈಗ ಯುದ್ಧ ಇದರ ಮೇಲೆ ಪರಿಣಾಮ ಬೀರಿದ್ದು, ಲಾಭ ಹಾಗಿರಲಿ ಕಟಾವು ಮಾಡಿದ ಕರ್ಚೂ ಸಿಗದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಚುನಾವಣೆಯ ಸಮಯದಲ್ಲಿ ಮನೆ ಮನೆಗೆ ಮತ ಕೇಳಲು ಬರುವ ರಾಜಕಾರಣಿಗಳಿಗೆ ರೈತರ ಸಂಕಷ್ಟ ಕೇಳಿಸುತ್ತಿಲ್ಲ. ನಮ್ಮ ಗ್ರಾಮದಲ್ಲಿ ಬಹುತೇಕ ರೈತರು ಈರುಳ್ಳಿ ಬೆಳೇಯನ್ನೇ ನಂಬಿ ಬದುಕಿದ್ದೇವೆ. ಬೆಲೆ ಏರಬಹುದೆಂಬ ನಿರೀಕ್ಷೆಯಲ್ಲಿ ಹಲವು ರೈತರು ಬೆಳೆಯನ್ನು ಹಾಗೆಯೇ ಇಟ್ಟುಕೊಂಡಿದ್ದು, ಮುಂದೇನು ಎಂಬುದು ತಿಳಿಯದಂತಾಗಿದೆ. ಒಂದು ಎಕರೆ ಪ್ರದೇಶದಲ್ಲಿ ಈರುಳ್ಳಿ ಬೆಳೆಯಬೇಕಾದರೆ 50 ರಿಂದ 55 ಸಾವಿರ ರೂಪಾಯಿ ವೆಚ್ಚವಾಗುತ್ತದೆ. ಆದರೆ ಮಾರುಕಟ್ಟೆಯಲ್ಲಿ ಕ್ವಿಂಟಾಲ್ಗೆ 400-600 ರೂಪಾಯಿಗೆ ಈರುಳ್ಳಿಯನ್ನು ಖರೀದಿಸುತ್ತಿದ್ದಾರೆ. ಮೂರುವರೆ ತಿಂಗಳುಗಳ ಕಾಲ ಹಗಲು-ರಾತ್ರಿ ಎನ್ನದೆ ದುಡಿದು ಎಕರೆಗೆ ಸಾವಿರಾರು ರೂಪಾಯಿ ಖರ್ಚು ಮಾಡಿದ್ದೇವೆ ಎಂಬುದು ರೈತರ ಅಳಲು.
For More Updates Join our WhatsApp Group :




