ಭಾರತಕ್ಕೆ ಶಾಕ್ ನೀಡಲಿದೆಯೇ ರಷ್ಯಾ? ಏಪ್ರಿಲ್ 1 ರಿಂದ ಕಚ್ಚಾ ತೈಲ ರಫ್ತು ಸ್ಥಗಿತ!
ನವದೆಹಲಿ: ಇರಾನ್-ಇಸ್ರೇಲ್-ಅಮೆರಿಕ ಯುದ್ಧ ಮುಗಿಯುವ ಲಕ್ಷಣ ಗೋಚರಿಸುತ್ತಿಲ್ಲ. ಮತ್ತೊಂದೆಡೆ, ಎಲ್ಪಿಜಿ ಗ್ಯಾಸ್ ಹಾಗೂ ಪೆಟ್ರೋಲಿಯಂ ಉತ್ಪನ್ನಗಳ ಕೊರತೆ ಹಾಗೂ ಜಾಗತಿಕ ಬಿಕ್ಕಟ್ಟು ಎದುರಾಗಿದೆ. ಈ ಎಲ್ಲ ಬೆಳವಣಿಗೆಗಳ ಮಧ್ಯೆಯೇ ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸುವಂತಹ ನಿರ್ಧಾರವೊಂದನ್ನು ರಷ್ಯಾ ಕೈಗೊಂಡಿದೆ. ಏಪ್ರಿಲ್ 1 ರಿಂದ ಕಚ್ಚಾ ತೈಲ ರಫ್ತನ್ನು ಸ್ಥಗಿತಗೊಳಿಸಲು ರಷ್ಯಾ ಮುಂದಾಗಿದ್ದು, ಜುಲೈ 31 ರ ವರೆಗೆ ಇದು ಜಾರಿಯಲ್ಲಿರಲಿದೆ. ರಷ್ಯಾದ ಈ ನಿರ್ಧಾರ ಭಾರತದ ಮೇಲೆ ಎಂತಹ ಪರಿಣಾಮ ಬೀರಲಿದೆ ಎಂಬ ಚರ್ಚೆ ಈಗ ಶುರುವಾಗಿದೆ.
ಉಕ್ರೇನ್ ಯುದ್ಧದ ನಂತರ ಭಾರತಕ್ಕೆ ರಿಯಾಯಿತಿ ದರದಲ್ಲಿ ತೈಲ ನೀಡುತ್ತಿದ್ದ ರಷ್ಯಾದ ಈ ನಡೆ ಕುತೂಹಲ ಮೂಡಿಸಿದೆ. ಅಷ್ಟೇ ಅಲ್ಲದೆ, ಹಾರ್ಮುಜ್ ಜಲಸಂಧಿಯಲ್ಲಿ ಯುದ್ಧ ಭೀತಿಯಿಂದ ಭಾರತಕ್ಕೆ ಕಚ್ಚಾ ತೈಲ ಸಾಗಾಟಕ್ಕೆ ಅಡ್ಡಿಯಾದಾಗಲೂ ರಷ್ಯಾ ಆಪತ್ಬಾಂಧವನಂತೆ ಭಾರತಕ್ಕೆ ತೈಲ ಪೂರೈಕೆ ಮಾಡಿದೆ.
ಭಾರತದ ಮೇಲೆ ಆಗುವ ಪರಿಣಾಮಗಳೇನು?
- ರಿಯಾಯಿತಿ ತೈಲಕ್ಕೆ ಬ್ರೇಕ್: ಉಕ್ರೇನ್ ಯುದ್ಧದ ಬಳಿಕ ರಷ್ಯಾ ಭಾರತದ ಅತಿದೊಡ್ಡ ತೈಲ ಪೂರೈಕೆದಾರ ರಾಷ್ಟ್ರವಾಗಿ ಹೊರಹೊಮ್ಮಿತ್ತು. ಕಡಿಮೆ ದರದಲ್ಲಿ ಸಿಗುತ್ತಿದ್ದ ತೈಲ ಪೂರೈಕೆ ಈಗ ಇಲ್ಲವಾಗುವ ಆತಂಕ ಎದುರಾಗಿದೆ.
- ಪೆಟ್ರೋಲ್, ಡೀಸೆಲ್ ದರ ಏರಿಕೆ ಸಾಧ್ಯತೆ: ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಪೂರೈಕೆ ಕಡಿಮೆಯಾದರೆ ಬೆಲೆ ಏರಿಕೆಯಾಗುವುದು ಸಹಜ. ಇದು ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ಮೇಲೆ ನೇರ ಪರಿಣಾಮ ಬೀರಬಹುದು.
- ಬದಲಿ ಮಾರ್ಗಗಳ ಹುಡುಕಾಟ: ರಷ್ಯಾದಿಂದ ಪೂರೈಕೆ ಕಡಿಮೆಯಾದರೆ ಭಾರತ ಮತ್ತೆ ಇರಾಕ್, ಸೌದಿ ಅರೇಬಿಯಾದಂತಹ ಪಶ್ಚಿಮ ಏಷ್ಯಾ ರಾಷ್ಟ್ರಗಳ ಮೇಲೆ ಅವಲಂಬಿತವಾಗಬೇಕಾಗುತ್ತದೆ. ಇದು ಆಮದು ವೆಚ್ಚವನ್ನು ಹೆಚ್ಚಿಸಬಹುದು.
ಆದರೆ, ಭಾರತವು ಈಗಾಗಲೇ ರಷ್ಯಾದೊಂದಿಗೆ ದೀರ್ಘಾವಧಿಯ ಒಪ್ಪಂದಗಳನ್ನು ಮಾಡಿಕೊಂಡಿರುವುದರಿಂದ ತಕ್ಷಣಕ್ಕೆ ಯಾವುದೇ ದೊಡ್ಡ ಬಿಕ್ಕಟ್ಟು ಎದುರಾಗಲಾರದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
For More Updates Join our WhatsApp Group :



