ಉತ್ತರ ಕರ್ನಾಟಕ ಭಾಗದಲ್ಲೇ ಹೆಚ್ಚು; ಕಾರಣ ಏನು?
ಬೆಂಗಳೂರು: 2021–2025ರ ಅವಧಿಯಲ್ಲಿ ರಾಜ್ಯದಲ್ಲಿ ಕಡಿಮೆ ತೀವ್ರತೆಯ ಭೂಕಂಪಗಳು ದಾಖಲಾಗಿದ್ದು, ವಿಶೇಷವಾಗಿ ಉತ್ತರ ಮತ್ತು ಉತ್ತರ-ಪೂರ್ವ ಜಿಲ್ಲೆಗಳಲ್ಲಿ ಹೆಚ್ಚು ದಾಖಲಾಗಿದೆ ಎಂದು ಭೂ ವಿಜ್ಞಾನ ಸಚಿವಾಲಯ ಲೋಕಸಭೆಯಲ್ಲಿ ಮಾಹಿತಿ ನೀಡಿದೆ.
2021ರಲ್ಲಿ 11, 2022ರಲ್ಲಿ 19, 2023ರಲ್ಲಿ 6, 2024ರಲ್ಲಿ 2 ಮತ್ತು 2025ರಲ್ಲಿ 7 ಭೂಕಂಪಗಳು ವಿಜಯಪುರದಲ್ಲಿ ದಾಖಲಾಗಿವೆ. ಬೀದರ್ನಲ್ಲೂ ಹಲವು ಬಾರಿ ಭೂಕಂಪನದ ಅನುಭವ ಆಗಿದ್ದು 2021 ಮತ್ತು 2022ರಲ್ಲಿ ತಲಾ 3, 2023ರಲ್ಲಿ 7, ನಂತರದ ವರ್ಷಗಳಲ್ಲಿ 2 ಮತ್ತು 3 ಘಟನೆಗಳು ದಾಖಲಾಗಿವೆ. 2021ರಲ್ಲಿ ಯಾವುದೇ ಕಂಪನವಾಗದ ಕಲಬುರಗಿಯಲ್ಲಿ 2023ರಲ್ಲಿ 5 ಮತ್ತು 2025ರಲ್ಲಿ 4 ಸಲ ಭೂಕಂಪದ ಅನುಭವ ಆಗಿದೆ. ಇತ್ತ ಬಳ್ಳಾರಿಯಲ್ಲಿ 2024ರಲ್ಲಿ ಅಚಾನಕ್ ಏರಿಕೆ ಕಂಡುಬಂದಿದ್ದು, 7 ಭೂಕಂಪಗಳು ದಾಖಲಾಗಿವೆ. ಮೈಸೂರು, ದಕ್ಷಿಣ ಕನ್ನಡ ಮತ್ತು ಕೋಲಾರ ಜಿಲ್ಲೆಗಳಲ್ಲಿ ಅತಿ ಕಡಿಮೆ ಅಥವಾ ವಿರಳ ಭೂಕಂಪ ಘಟನೆಗಳು ಮಾತ್ರ ವರದಿಯಾಗಿವೆ.
ಸುರತ್ಕಲ್ನ ಎನ್ಐಟಿಕೆ ನಾಗರಿಕ ಇಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಬಬ್ಲೂ ಚೌಧರಿ ಅವರು ಉತ್ತರ ಕರ್ನಾಟಕದಲ್ಲಿ ಹೆಚ್ಚು ಭೂಕಂಪ ಕಂಡುಬರುವುದಕ್ಕೆ ಮಳೆಗಾಲ ಹಾಗೂ ನಂತರದ ಅವಧಿಯಲ್ಲಿ ಉಂಟಾಗುವ ಹೈಡ್ರೋಸೀಸ್ಮಿಕ ಪ್ರತಿಕ್ರಿಯೆಗಳು ಮತ್ತು ದೊಡ್ಡ ಮಟ್ಟದ ಗಣಿಗಾರಿಕೆ ಚಟುವಟಿಕೆಗಳು ಕಾರಣವಾಗಿರಬಹುದು ಎಂದು ತಿಳಿಸಿದ್ದಾರೆ. 3.0 ಕ್ಕಿಂತ ಕಡಿಮೆ ತೀವ್ರತೆಯ ಭೂಕಂಪಗಳು ತಕ್ಷಣದ ಆತಂಕಕ್ಕೆ ಕಾರಣವಾಗುವುದಿಲ್ಲ ಎಂದರೂ, ಇವುಗಳ ಸಂಖ್ಯೆ ಅಥವಾ ತೀವ್ರತೆಯಲ್ಲಿ ಏರಿಕೆ ಕಂಡುಬಂದರೆ ವೈಜ್ಞಾನಿಕವಾಗಿ ಗಂಭೀರವಾಗಿ ಅಧ್ಯಯನ ಮಾಡಬೇಕೆಂದು ಅವರು ಎಚ್ಚರಿಕೆ ನೀಡಿರೋದಾಗಿ ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
For More Updates Join our WhatsApp Group :




