1.25 ಲಕ್ಷ ನೌಕರರ ಹೋರಾಟಕ್ಕೆ ಸಜ್ಜು; ಜನಸಾರಿಗೆ ಸೇವೆಗೆ ಹೊಡೆತ ಸಾಧ್ಯತೆ
ಬೆಂಗಳೂರು : ಕರ್ನಾಟಕದ ಜನಸಾಮಾನ್ಯರ ಜೀವನಾಡಿಯಾಗಿರುವ ಸಾರಿಗೆ ಬಸ್ಗಳು ಮೇ 20ರಿಂದ ರಸ್ತೆಗಿಳಿಯುವುದು ಅನುಮಾನವಾಗಿದೆ. ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿಯು ಮೇ 20ರ ಬೆಳಿಗ್ಗೆ 6 ಗಂಟೆಯಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ಮುಂದಾಗಿದೆ. ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳ ಸುಮಾರು 1.25 ಲಕ್ಷ ನೌಕರರು ಈ ಹೋರಾಟದಲ್ಲಿ ಭಾಗಿಯಾಗಲಿದ್ದು, ಸಾರಿಗೆ ಬಸ್ಗಳ ಸಂಚಾರ ಅನುಮಾನವಾಗಿದೆ.
ಸಾರಿಗೆ ನೌಕರರ ಪ್ರಮುಖ ಬೇಡಿಕೆಗಳೇನು?
- ವೇತನ ಹಿಂಬಾಕಿ: ಬಾಕಿ ಇರುವ 38 ತಿಂಗಳ ವೇತನದ ಹಿಂಬಾಕಿಯನ್ನು ಕೂಡಲೇ ನೀಡಬೇಕು.
- ವೇತನ ಹೆಚ್ಚಳ: 2024ರ ಜನವರಿ 1 ರಿಂದ ಅನ್ವಯವಾಗುವಂತೆ ಮೂಲ ವೇತನವನ್ನು ಶೇ 25ರಷ್ಟು ಏರಿಕೆ ಮಾಡಬೇಕು.
- ತುಟ್ಟಿಭತ್ಯೆ ವಿಲೀನ: ಶೇ 31ರಷ್ಟು ತುಟ್ಟಿಭತ್ಯೆಯನ್ನು ಮೂಲ ವೇತನದಲ್ಲಿ ವಿಲೀನಗೊಳಿಸಬೇಕು.
- ಒಂದೇ ಕಂತಿನಲ್ಲಿ ಪಾವತಿ: ಸರ್ಕಾರ ಒಪ್ಪಿರುವ 26 ತಿಂಗಳ ಬಾಕಿ ಹಣ 1272 ಕೋಟಿ ರೂಪಾಯಿಯನ್ನು ಒಂದೇ ಕಂತಿನಲ್ಲಿ ಬಿಡುಗಡೆ ಮಾಡಬೇಕು.
- ಇತರೆ ಭತ್ಯೆಗಳು: ಬಾಟಾ ಸೇರಿದಂತೆ ಇತರೆ ಭತ್ಯೆಗಳನ್ನು ಹೆಚ್ಚಿಸಬೇಕು ಹಾಗೂ ಕೋವಿಡ್ ಸಮಯದ ಬಾಕಿ ಹಣವನ್ನು ನೀಡಬೇಕು.
ಈ ಹಿಂದೆ ಕೂಡ ಹಲವು ಬಾರಿ ಸಾರಿಗೆ ನೌಕರರು ಮುಷ್ಕರಕ್ಕೆ ಮುಂದಾಗಿದ್ದರು. ಕೊನೇ ಘಳಿಗೆಯಲ್ಲಿ ಸರ್ಕಾರ ಮಾತುಕತೆ ನಡೆಸಿ ಅವರ ಮನವೊಲಿಸುತ್ತಿತ್ತು. ಆದರೆ, ಬೇಡಿಕೆಗಳನ್ನು ಇನ್ನೂ ಈಡೇರಿಸಿಲ್ಲ ಎಂದು ನೌಕರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
For More Updates Join our WhatsApp Group :




