ವಿಜಯಪುರ: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಗಳಿಗೆ ಹಿಂದೂ ಸಂಘಟನೆ ಮುಖಂಡರಿಂದ ಭರ್ಜರಿ ಸನ್ಮಾನ ಮಾಡಿ, ಸ್ವಾಗತ ಕೋರಿರುವ ಘಟನೆ ವರದಿಯಾಗಿದೆ. ಬೆಂಗಳೂರು ಸೆಸನ್ಸ್ ನ್ಯಾಯಾಲಯದಿಂದ ಷರತ್ತುಬದ್ಧ ಜಾಮೀನು ಸಿಕ್ಕ ಬೆನ್ನಲ್ಲೇ ಇಬ್ಬರು ಆರೋಪಿಗಳು ವಿಜಯಪುರಕ್ಕೆ ಆಗಮಿಸಿದ್ದರು.
ಆರೋಪಿಗಳಾದ ಪರಶುರಾಮ್ ವಾಗ್ಮೋಡೆ ಹಾಗೂ ಮನೋಹರ್ ಯಡವೆ ಅವರಿಗೆ ಜಾಮೀನು ಹಿಂದೂ ಸಂಘಟನೆ ಮುಖಂಡರು ಅದ್ಧೂರಿ ಸ್ವಾಗತ ಕೋರಿದ್ದಾರೆ. ಆರೋಪಿಗಳು ನಗರದ ಕಾಳಿಕಾದೇವಿ ಮಂದಿರದಲ್ಲಿ ಪೂಜೆಯಲ್ಲಿ ಪಾಲ್ಗೊಂಡು, ಶಿವಾಜಿ ಮೂರ್ತಿಗೆ ಹೂಮಾಲೆ ಹಾಕಿದರು. ಕಾಳಿಕಾ ಮಂದಿರದಲ್ಲಿ ತೆಂಗಿನಕಾಯಿ, ಕರ್ಪೂರ ಹಿಡಿದು ಆರತಿ ಬೆಳಗಿದ್ದಾರೆ.
ಈ ವೇಳೆ, ಹಿಂದೂ ಮುಖಂಡ ಉಮೇಶ ವಂದಾಲ್, ನೀಲಕಂಠ ಕಂದಗಲ್ ಆರೋಪಿಗಳಿಗೆ ಶಾಲು ಹೊದಿಸಿ, ಸನ್ಮಾನ ಮಾಡಿದರು. ಕಾರ್ಯಕರ್ತರು ಭಾರತ್ ಮಾತಾ ಕೀ ಜೈ, ಸನಾತನ ಧರ್ಮಕ್ಕೆ ಜೈ ಎಂಬ ಘೋಷಣೆ ಕೂಗಿದರು.
ಇದಕ್ಕೂ ಮುನ್ನ ನಗರಕ್ಕೆ ಆಗಮಿಸುತ್ತಿದ್ದಂತೆ ಶಿವಾಜಿ ವೃತ್ತದಲ್ಲಿ ಶಿವಾಜಿ ಮಹಾರಾಜರ ಮೂರ್ತಿಗೆ ಹೂವಿನ ಹಾರ ಹಾಕಿದರು. ಈ ವೇಳೆ, ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ಆರೋಪಿಗಳು ನಿರಾಕರಿಸಿದರು.