ಮಂಗಳೂರು: ಧರ್ಮಸ್ಥಳ ತಲೆಬುರುಡೆ ಕೇಸ್ಗೆ ಮತ್ತೊಂದು ಹೊಸ ಟ್ವಿಸ್ಟ್ ಸಿಕ್ಕಿದೆ. 1995ರಿಂದ 2004ರ ವರೆಗಿನ ಪ್ರಕರಣಗಳ ತನಿಖೆಗೆ ಕೋರಿ ಸುಪ್ರೀಂ ಕೋರ್ಟ್ಗೆ ಸಲ್ಲಿಸಿದ್ದ PIL, 2025 ಮೇ5 ರಂದು ವಜಾಗೊಂಡಿರುವ ವಿಷಯವನ್ನೇ ಮರೆಮಾಚಿ ಚಿನ್ನಯ್ಯ ಹಿಂದಿದ್ದ ಟೀಂ ಸರ್ಕಾರಕ್ಕೆ ತನಿಖೆ ಬಗ್ಗೆ ಮನವಿ ಮಾಡಿತ್ತು ಎಂಬುದು ಈಗ ಬಹಿರಂಗಗೊಂಡಿದೆ. ತನಿಖೆಗೆ ಕೋರಿ ಸಲ್ಲಿಸಿದ್ದ PIL ವಜಾಗೊಳಿಸಿದ್ದ ಕೋರ್ಟ್, ಇಂತಹ ಪಿಐಎಲ್ ದಾಖಲಿಸಿರುವುದೇ ನಿಷ್ಫಲವೆಂದು ಅಭಿಪ್ರಾಯಪಟ್ಟಿತ್ತು. ಇದು ಪಬ್ಲಿಕ್ ಇಂಟರೆಸ್ಟ್ ಲಿಟಿಗೇಷನ್ ಅಲ್ಲ. ಬದಲಾಗಿ ಪಬ್ಲಿಸಿಟಿ ಇಂಟರೆಸ್ಟ್ ಲಿಟಿಗೇಷನ್, ಪೈಸಾ ಇಂಟರೆಸ್ಟ್ ಲಿಟಿಗೇಷನ್, ಪ್ರೈವೇಟ್ ಇಂಟರೆಸ್ಟ್ ಲಿಟಿಗೇಷನ್, ಪೊಲಿಟಿಕಲ್ ಇಂಟರೆಸ್ಟ್ ಲಿಟಿಗೇಷನ್ ಎಂದು ಸುಪ್ರೀಂಕೋರ್ಟ್ ಹೇಳಿತ್ತು. ನ್ಯಾ. ಬಿ.ವಿ. ನಾಗರತ್ನ ಮತ್ತು ನ್ಯಾ. ಸತೀಶ್ ಚಂದ್ರ ಶರ್ಮರಿದ್ದ ಪೀಠ, ವಕೀಲ ಕೆ.ವಿ.ಧನಂಜಯ ಸಲ್ಲಿಸಿದ್ದ PIL ವಜಾಗೊಳಿಸಿತ್ತು.
BNSS 183ರಡಿ ಚಿನ್ನಯ್ಯ ಹೇಳಿಕೆ ದಾಖಲು
ಧರ್ಮಸ್ಥಳದಲ್ಲಿ ಶವ ಹೂತಿದ್ದಾಗಿ ಹೇಳಿದ್ದ ಚಿನ್ನಯನನ್ನು ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಶಿವಮೊಗ್ಗ ಜೈಲಿನಿಂದ ಚಿನ್ನಯ್ಯನನ್ನ ಬೆಳ್ತಂಗಡಿಗೆ ಪೊಲೀಸರು ಕರೆದೊಯ್ದಿದ್ದು, BNSS 183ರಡಿ ಹೇಳಿಕೆ ದಾಖಲು ಪ್ರಕ್ರಿಯೆ ನಡೆದಿದೆ. ಡಿಟೇಲ್ ಆಗಿ ಸ್ವಇಚ್ಛಾ ಹೇಳಿಕೆಯನ್ನ ಚಿನ್ನಯ್ಯ ಈ ವೇಳೆ ನೀಡಿದ್ದಾನೆ.
SIT ತನಿಖೆ ಮತ್ತಷ್ಟು ಚುರುಕು
ಧರ್ಮಸ್ಥಳ ಶವ ಹೂತ ಪ್ರಕರಣ ವಿಚಾರವಾಗಿ SIT ತನಿಖೆ ಮುಂದುವರೆಸುವ ಒಲವನ್ನ ರಾಜ್ಯ ಸರ್ಕಾರ ಹೊಂದಿದೆ ಎನ್ನಲಾಗಿದೆ. ತನಿಖೆ ಪ್ರಗತಿ ಹಂತದಲ್ಲಿದ್ದು ಅದು ಸಂಪೂರ್ಣ ಆಗುವವರೆಗೆ ಕೇಸ್ ಕ್ಲೋಸ್ ಬೇಡ. ಬದಲಾಗಿ ತನಿಖೆಯನ್ನ ಮತ್ತಷ್ಟು ಚುರುಕುಗೊಳಿಸುವಂತೆ SIT ಮುಖ್ಯಸ್ಥ ಪ್ರಣವ್ ಮೊಹಾಂತಿಗೆ ಸೂಚನೆ ನೀಡಲಾಗಿದೆ. ಜೊತೆಗೆ ಷಡ್ಯಂತ್ರದ ಹಿಂದೆ ಇರುವವವರನ್ನ ಪತ್ತೆ ಹಚ್ಚುವಂತೆ ಮೌಖಿಕ ಸೂಚನೆಯನ್ನೂ ರಾಜ್ಯ ಸರ್ಕಾರ ನೀಡಿದೆಯಂತೆ.
’40 ವರ್ಷಗಳ ಹಿಂದೆಯೇ ಷಡ್ಯಂತ್ರ ನಡೆದಿತ್ತು’
ಬುರುಡೆ ಪ್ರಕರಣಕ್ಕೆ ಸಾಕ್ಷಿಗಳೆಂದು ಬರುವವರನ್ನ ಆರೋಪಿಗಳೆಂದು ಪರಿಗಣಿಸಿ ತನಿಖೆಮಾಡುವಂತೆ ಧರ್ಮಸ್ಥಳ ಕ್ಷೇತ್ರದ ಭಕ್ತ ಶಶಿರಾಜ್ ಶೆಟ್ಟಿ SIT ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಚಿನ್ನಯ್ಯ ತಾನು ಹೇಳಿದ್ದೆಲ್ಲ ಸುಳ್ಳು ಎಂದು ಒಪ್ಪಿಕೊಂಡಿದ್ದಾನೆ. ಈ ನಡುವೆ ಧರ್ಮಸ್ಥಳದ ವಿರುದ್ಧದ ಷಡ್ಯಂತ್ರಕ್ಕೆ ಸಾಕ್ಷಿಗಳಾಗಿ ಅನೇಕರು ಬರುತ್ತಿದ್ದಾರೆ. 40 ವರ್ಷಗಳ ಹಿಂದೆಯೇ ಈ ರೀತಿ ಬೇರೆ ಬೇರೆ ಷಡ್ಯಂತ್ರ ಮಾಡಲಾಗಿತ್ತು. ಕಾನೂನಿನಡಿ ನ್ಯಾಯ ಪಡೆಯದೇ ರಸ್ತೆ ಬದಿ ಹೋರಾಟ ಮಾಡಿ ನಿಂದಿಸುವ ಕೆಲಸ ಮಾಡಲಾಗ್ತಿದೆ. ಸಾಕ್ಷಿ ಎಂದು ಹೇಳಿಕೊಂಡು ಬರುವವರು ಆಮಿಷಕ್ಕೆ ಒಳಗಾಗಿ ಸುಳ್ಳು ಹೇಳೋ ಸಾಧ್ಯತೆ ಇರುವುದರಿಂದ ಅವರನ್ನೂ ವಿಚಾರಣೆ ಮಾಡಿ ಎಂದು ದೂರಲ್ಲಿ ಆಗ್ರಹಿಸಲಾಗಿದೆ.
For More Updates Join our WhatsApp Group :




