ಬಳ್ಳಾರಿ: ಬಳ್ಳಾರಿ ಜಿಲ್ಲೆಯಲ್ಲಿ ಮೆಗಾ ಡೈರಿಯನ್ನು ಸ್ಥಾಪನೆ ಮಾಡುವ ವಿಚಾರ ಜಟಾಪಟಿಗೆ ಕಾರಣವಾಗಿದೆ. ಸುಮಾರು 100 ಕೋಟಿ ರೂ. ವೆಚ್ಚದಲ್ಲಿ ಮೆಗಾ ಡೈರಿ ಸ್ಥಾಪನೆ ಮಾಡಲಾಗುತ್ತದೆ ಎಂದು ಬಸವರಾಜ ಬೊಮ್ಮಾಯಿ ಬಜೆಟ್ನಲ್ಲಿ ಘೋಷಣೆ ಮಾಡಿದ್ದರು. ಈಗ ಸಚಿವ ಸಂಪುಟ ಒಪ್ಪಿಗೆಯೂ ಸಿಕ್ಕಿದೆ. ಆದರೆ ಸ್ಥಾಪಿಸಲಾಗುವುದು. ಆದರೆ ಈಗ ಈ ವಿಚಾರ ರೈತರು, ಕೆಎಂಎಫ್ ಅಧ್ಯಕ್ಷರ ನಡುವಿನ ಜಟಾಪಟಿಗೆ ಕಾರಣವಾಗಿದೆ.

ಕರ್ನಾಟಕದಲ್ಲಿ ಲಾಭದಲ್ಲಿರುವ ಹಾಲು ಒಕ್ಕೂಟಗಳಲ್ಲಿ ರಾಯಚೂರು, ಬಳ್ಳಾರಿ, ಕೊಪ್ಪಳ, ವಿಜಯನಗರ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ (ರಾಬಕೊವಿ) ಸಹ ಒಂದು. ಕಲ್ಯಾಣ ಕರ್ನಾಟಕದ ಭಾಗದಲ್ಲಿ ಹಾಲು ಉತ್ಪಾದನೆಯನ್ನು ಹೆಚ್ಚಿಸಲು, ಬಳ್ಳಾರಿ ಜಿಲ್ಲೆಯಲ್ಲಿ ಪ್ರತಿ ದಿನ 2 ಲಕ್ಷ ಲೀಟರ್ ಹಾಲು ಸಂಸ್ಕರಣಾ ಸಾಮರ್ಥ್ಯದ ಮೆಗಾ ಡೈರಿಯನ್ನು ಸ್ಥಾಪಿಸಲು ಸರ್ಕಾರ ಒಪ್ಪಿಗೆ ಕೊಟ್ಟಿದೆ.
ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳು ವಿಭಜನೆಯಾದ ಬಳಿಕ ಮೆಗಾ ಡೈರಿ ಸ್ಥಾಪನೆ ವಿಚಾರದಲ್ಲಿ ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ ಮತ್ತು ರೈತರ ನಡುವೆ ಜಟಾಪಟಿ ನಡೆಯುತ್ತಿದೆ. ಬಳ್ಳಾರಿಗೆ ಮಂಜೂರಾಗಿದ್ದ ಡೈರಿಯನ್ನು ಕೆಎಂಎಫ್ ಅಧ್ಯಕ್ಷರು ವಿಜಯನಗರಕ್ಕೆ ಸ್ಥಳಾಂತರ ಮಾಡಿಸಿಕೊಳ್ಳುತ್ತಿದ್ದಾರೆ ಎಂಬುದು ರೈತರ ಆರೋಪವಾಗಿದೆ.
ಮೆಗಾ ಡೈರಿ ಸ್ಥಾಪನೆ ಗೊಂದಲ: ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ ವಿಜಯನಗರ ಜಿಲ್ಲಾ ವ್ಯಾಪ್ತಿಗೆ ಸೇರುವ ಹಗರಿಬೊಮ್ಮಹಳ್ಳಿ ಕ್ಷೇತ್ರದ ಮಾಜಿ ಶಾಸಕರು. ಬಳ್ಳಾರಿಗೆ ಮಂಜೂರಾಗಿದ್ದ ಮೆಗಾ ಡೈರಿಯನ್ನು ಅವರು ವಿಜಯನಗರ ಜಿಲ್ಲಾ ಕೇಂದ್ರ ಹೊಸಪೇಟೆಯಲ್ಲಿ ಸ್ಥಾಪನೆ ಮಾಡಲು ಮುಂದಾಗಿದ್ದಾರೆ ಎಂಬುದು ರೈತರ ಆರೋಪವಾಗಿದೆ.
ಬಳ್ಳಾರಿ ಜಿಲ್ಲೆಯಲ್ಲಿ ಮೆಗಾ ಡೈರಿ ಸ್ಥಾಪನೆ ಮಾಡಲು ಎರಡು ಸ್ಥಳಗಳನ್ನು ಜಿಲ್ಲಾಡಳಿತ ಗುರುತು ಮಾಡಿದೆ. ಕೊಳಗಲ್ ಹಾಗೂ ಶ್ರೀಧರದ ಗಡ್ಡೆ 2 ಕಡೆ ಜಾಗ ಮೀಸಲಿಡಲಾಗಿದೆ. ಕೊಳಗಲ್ ಸಮೀಪ 15 ಎಕ್ರೆ ಜಾಗ ಈಗಾಗಲೇ ಜಿಲ್ಲಾಡಳಿತ ಗುರುತು ಮಾಡಿದೆ. ಆದರೆ ಈಗ ಮೆಗಾ ಡೈರಿ ಸ್ಥಳಾಂತರವಾಗಲಿದೆ ಎಂಬ ಸುದ್ದಿಗಳು ಹಬ್ಬಿವೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತರೂ ಆಗಿರುವ ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ ವಿಜಯನಗರ ಜಿಲ್ಲೆಗೆ ಮೆಗಾ ಡೈರಿ ಸ್ಥಳಾಂತರ ಮಾಡಿಸಿಕೊಳ್ಳುತ್ತಿದ್ದಾರೆ. ಒಂದು ವೇಳೆ ಬಳ್ಳಾರಿಯಲ್ಲಿ ಡೈರಿ ಸ್ಥಾಪನೆ ಮಾಡದಿದ್ದರೆ ಹೋರಾಟ ನಡೆಸುತ್ತೇವೆ ಎಂದು ರೈತರು ಎಚ್ಚರಿಕೆ ನೀಡಿದ್ದಾರೆ. ಬಸವರಾಜ ಬೊಮ್ಮಾಯಿ ಬಜೆಟ್ ಮಂಡಿಸಿದಾಗ ಬಳ್ಳಾರಿ ಮೆಗಾ ಡೈರಿ ಘೋಷಣೆ ಮಾಡಲಾಗಿತ್ತು. ಆದರೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ಬಳಿಕ ಯೋಜನೆಗೆ ರೂಪುರೇಷೆ ಅಂತಿಮಗೊಳಿಸಿ ಬಜೆಟ್ನಲ್ಲಿ ಮತ್ತೊಮ್ಮೆ ಘೋಷಣೆ ಮಾಡಿ, ಅನುದಾನವನ್ನು ಮೀಸಲಿಡಲಾಗಿದೆ. ರಾಯಚೂರು, ಬಳ್ಳಾರಿ, ಕೊಪ್ಪಳ, ವಿಜಯನಗರ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದಲ್ಲಿ ಪ್ರತಿದಿನ ವಿಜಯನಗರದಿಂದ 1.20-1.40 ಲಕ್ಷ ಲೀಟರ್, ಬಳ್ಳಾರಿ 8-10 ಸಾವಿರ ಲೀಟರ್, ರಾಯಚೂರು 28-30 ಲೀಟರ್ ಹಾಗೂ ಕೊಪ್ಪಳ ಜಿಲ್ಲೆಯಿಂದ 60-70 ಸಾವಿರ ಲೀಟರ್ ಹಾಲು ಸಂಗ್ರಹವಾಗುತ್ತದೆ. ಅತೀ ಕಡಿಮೆ ಹಾಲು ಉತ್ಪಾದನೆಯಾದರೂ ಸಹ ಅತಿ ಹೆಚ್ಚು ಹಾಲು ಮಾರಾಟವಾಗುವುದು ಬಳ್ಳಾರಿಯಲ್ಲಿ.
ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ ಬಳ್ಳಾರಿಯಲ್ಲಿ ಮೆಗಾ ಡೈರಿ ಸ್ಥಾಪನೆ ಮಾಡಲು ನಾನು ತಕರಾರು ಮಾಡಿಲ್ಲ. ಎಲ್ಲಾ ಜಿಲ್ಲೆಗಳಿಗೆ ಕೇಂದ್ರ ಸ್ಥಾನದಲ್ಲಿ ಡೈರಿ ಪ್ರಾರಂಭಿಸುವ ಮೂಲಕ ವೆಚ್ಚವನ್ನು ಕಡಿಮೆ ಮಾಡಬೇಕು ಎಂದು ಹೇಳಿದ್ದಾರೆ. ಆದರೆ ಡೈರಿ ಸ್ಥಳಾಂತರವಾಗಲಿದೆಯೇ? ಎಂಬ ಕುರಿತು ಯಾವುದೇ ಮಾಹಿತಿ ನೀಡಿಲ್ಲ.