ಬೆಂಗಳೂರು: ಆರ್ಸಿಬಿ ತಂಡದ ವಿರಾಟ್ ಕೊಹ್ಲಿ ಸಹ ಮಾಲೀಕತ್ವದ ಬೆಂಗಳೂರಿನಲ್ಲಿ ಇರುವ ಒನ್ 8 ಕಮ್ಯೂನ್ ಬಾರ್ & ಪಬ್ಗೆ ಬಿಬಿಎಂಪಿ ನೋಟಿಸ್ ನೀಡಿದೆ.
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಇರುವ ಬೆಂಗಳೂರಿನ ಬಾರ್ ಮತ್ತು ಪಬ್ಗೆ ಬಿಬಿಎಂಪಿ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ಫೈರ್ ಸೇಫ್ಟಿ ಎನ್ಒಸಿ ಪಡೆಯದ ಹಿನ್ನೆಲೆ ಪಾಲಿಕೆ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ವಿರಾಟ್ ಕೊಹ್ಲಿ ಮಾಲೀಕತ್ವದ ಒನ್ 8 ಕಮ್ಯೂನ್ ಬಾರ್ ಅಂಡ್ ರೆಸ್ಟೋರೆಂಟ್ಗೆ ನೋಟಿಸ್ ನೀಡಲಾಗಿದ್ದು, ಬಾರ್ನಲ್ಲಿ ಅಗ್ನಿ ಸುರಕ್ಷತೆ ಅಳವಡಿಕೆ ಮಾಡಿಲ್ಲ ಹಾಗೂ ಅಗ್ನಿಶಾಮಕ ದಳದ ಪ್ರಮಾಣ ಪತ್ರ ಪಡೆಯದೇ ಕಾನೂನು ಉಲ್ಲಂಘಿಸಿದ ಹಿನ್ನೆಲೆ ನೋಟಿಸ್ ನೀಡಲಾಗಿದೆ. ಈ ಸಂಬಂಧ ಸಾಮಾಜಿಕ ಕಾರ್ಯಕರ್ತ ವೆಂಕಟೇಶ್ ಎಂಬುವವರು ಪಾಲಿಕೆಗೆ ದೂರು ನೀಡಿದ್ದರು. ಈ ದೂರಿನ ಅನ್ವಯ ಶಾಂತಿನಗರ ಪಾಲಿಕೆ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ ಎಂದು ತಿಳಿದುಬಂದಿದೆ. ಈ ಹಿಂದೆ ಕೂಡ ವಿರಾಟ್ ಕೊಹ್ಲಿ ಅವರಿಗೆ ನೀಟಿಸ್ ಜಾರಿ ಮಾಡಲಾಗಿತ್ತು. ಆಗ ಉತ್ತರಿಸದೇ ನಿರ್ಲಕ್ಷ್ಯ ತೋರಿಸಿದ್ವದರು. ಇದೀಗ 7 ದಿನದೊಳಗೆ ಸಮಜಾಯಿಸಿ ನೀಡದಿದ್ರೆ, ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದೆ. ಬೆಂಗಳೂರು ನಗರದಲ್ಲಿ ಇರುವಂತಹ ಹಲವಾರು ರೆಸ್ಟೋರೆಂಟ್ ಬಾರ್ ಹಾಗೂ ಪಬ್ಗಳು ಅಗ್ನಿ ಶಾಮಕ ದಳದ ಯಾವುದೇ ಸುರಕ್ಷಿತೆಗಳು ಇಲ್ಲ. ಈ ಹಿಂದೆ ಬೆಂಗಳೂರಿನಲ್ಲಿ ಅಗ್ನಿ ಅವಘಡಗಳು ನಡೆದಾಗ ಹಲವಾರು ಜನ ಸಾವು ನೋವು ಅನುಭವಿಸಿದ್ದಾರೆ.
ಕಾರ್ಲ್ಟನ್ ಭವನದಲ್ಲಿ ಶಾರ್ಟ್ ಸರ್ಕ್ಯೂಟ್ ಆದಾಗ ಅಗ್ನಿ ಅವಘಡದಿಂದ ಜೀವ ಉಳಿಸಿಕೊಳ್ಳಲು ಮಹಡಿಯಿಂದ ಜನ ಜಿಗಿದಿದ್ದರು. ಇಂತಹ ಅವಘಡಗಳು ಮರುಕಳಿಸಬಾರದು ಎಂದು ಬಿಬಿಎಂಪಿ ಹಾಗೂ ಅಗ್ನಿ ಶಾಮಕದಳ ಅಗ್ನಿ ಸುರಕ್ಷತೆ ಕಡ್ಡಾಯಗೊಳಿಸಿದೆ ಎಂದು ಸಾಮಾಜಿಕ ಕಾರ್ಯಕರ್ತ ವೆಂಕಟೇಶ್ ಹೇಳುತ್ತಾರೆ. ಸುಮಾರು ಕಟ್ಟಡಗಳಲ್ಲಿ ಅಗ್ನಿ ಶಾಮಕ ಸುರಕ್ಷತೆ ಕ್ರಮಗಳು ಇಲ್ಲದಿರುವುದರಿಂದ ಅಂತಹ ಕಟ್ಟಡಗಳಿಗೆ ಲೈಸೆನ್ಸ್ ಕೊಡಬಾರದು. ಅಗ್ನಿ ಸುರಕ್ಷತೆ ಇರದ ಕಟ್ಟಡಗಳಲ್ಲಿ ಕಾರ್ಯಚಟುವಟಿಕೆ ಮಾಡದಂತೆ ನಿಯಮ ತರಲಾಗಿದೆ. ಆದರೆ, ನಿಯಮಗಳನ್ನು ಮೀರಿ ಪಬ್ಗಳನ್ನು ನಡೆಸಲಾಗುತ್ತಿದೆ ಎಂದರು. ಇದೇ ರೀತಿಯಾಗಿ ಎಂಜಿ ರಸ್ತೆಯ ರತ್ನ ಕಂಪ್ಲೇಕ್ಸ್ನಲ್ಲಿರುವ ಹೈ ರೈಸ್ ಬಿಲ್ಡಿಂಗ್ನಲ್ಲಿರುವ ರೆಸ್ಟೋರೆಂಟ್ನಲ್ಲಿ ಅಗ್ನಿಶಾಮಕ ದಳದ ಸುರಕ್ಷಿತ ಕ್ರಮ ತಗೆದುಕೊಂಡಿಲ್ಲ. ಈ ವಿಚಾರವಾಗಿ ನಾವು ಹೋರಾಟ ನಡೆಸಿದ್ದೇವೆ. ಬಿಬಿಎಂಪಿ ಗಮನಕ್ಕೆ ತಂದಿದ್ದೇವೆ. ಇದೀಗ ಅವರು ನೋಟಿಸ್ ಜಾರಿ ಮಾಡಿದ್ದಾರೆ. ಸುರಕ್ಷತೆ ಕಾಪಾಡುವಲ್ಲಿ ಬಿಬಿಎಂಪಿ ಹಾಗೂ ಅಗ್ನಿಶಾಮಕ ದಳ ಎಷ್ಟಮಟ್ಟಿಗೆ ಮುಂದಾಗುತ್ತಾರೆ ಕಾದು ನೋಡಬೇಕಿದೆಯೆಂದು ಹೇಳಿದರು.