ಚಿಕ್ಕನಾಯಕನಹಳ್ಳಿ : ದಬ್ಬೆಘಟ್ಟ ಜಾಗ ಹೊನ್ನೆಬಾಗಿ ಗ್ರಾಮ ಪಂಚಾಯಿತಿಗೆ ಸೇರಿರುವುದರಿಂದ ಅಲೆಮಾರಿ ಭಾಗದಲ್ಲಿ ಗಣಿ ಹಣವಿರುವುದರಿಂದ ಆ ಹಣದಲ್ಲಿ ಅಲೆಮಾರಿ ಜನಾಂಗದವರಿಗೆ ಗುಂಪು ಮನೆ ನಿರ್ಮಿಸಿಕೊಳ್ಳಲು ಸಹಕರಿಸಲಾಗುವುದು. ಗುಂಡುತೋಪು ಜನಾಂಗಗಳಿಗೆ ನಿವೇಶನಗಳ ಹಕ್ಕುಪತ್ರ ವಿತರಿಸಲು ತಾಲ್ಲೂಕು ಆಡಳಿತವೂ ನಿರಂತರವಾಗಿ ಕೆಲಸ ಮಾಡಿದೆ ಎಂದು ಶಾಸಕ ಸಿ.ಬಿ.ಸುರೇಶ್ ಬಾಬು ತಿಳಿಸಿದರು.
ಅವರು 30 ವರ್ಷಗಳಿಂದ ಅಲೆಮಾರಿ ಜನಾಂಗದ ದಬ್ಬೇಘಟ್ಟದ ಸುಡುಗಾಡು ಸಿದ್ದ ಜನಾಂಗದವರಿಗೆ ಹಂಚಿಕೆಯಾಗಿದ್ದ ನಿವೇಶನಗಳ ಹಕ್ಕುಪತ್ರಗಳನ್ನು ಶಾಸಕ ಸಿ.ಬಿ.ಸುರೇಶ್ ಬಾಬು ವಿತರಿಸಿ, ತಮ್ಮ ಗೃಹ ಕಛೇರಿಯ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಅಲೆಮಾರಿ ಜನಾಂಗದ ಮುಖಂಡ ವೆಂಕಟೇಶಯ್ಯ ಮಾತನಾಡಿ, ಅಲೆಮಾರಿ ಜನಾಂಗದವರಾದ ನಾವು ಇಷ್ಟು ವರ್ಷಗಳ ಕಾಲ ಗುಂಡುತೋಪಿನಲ್ಲಿ ಇದ್ದರೂ ನಿವೇಶನದ ಹಕ್ಕು ಪತ್ರ ದೊರೆತಿರಲಿಲ್ಲ, ಶಾಸಕರು ಮುಂದಾಳತ್ವ ವಹಿಸಿಕೊಂಡು ನಿವೇಶನದ ಹಕ್ಕು ಪತ್ರ ವಿತರಿಸಿರುವುದನ್ನು ನಾವು ನಿರಂತರ ಸ್ಮರಿಸುತ್ತೇವೆ ಎಂದರು.
ಪುರಸಭೆ ವ್ಯಾಪ್ತಿ ಎಂದು ಪರಿಗಣಿಸಿ ಈ ಹಿಂದೆ ಮಂಜೂರು ಮಾಡಿದ್ದ ನಿವೇಶನಗಳ ಹಕ್ಕುಪತ್ರಗಳನ್ನು ವಿತರಿಸಲಾಗಿತ್ತು. ಆದರೆ, ನಿವೇಶನ ಹಂಚಿಕೆ ಮಾಡಲಾಗಿರುವ ೧೨೨ ನೆ ಸರ್ವೆ ನಂಬರ್ ಪುರಸಭೆ ವ್ಯಾಪ್ತಿಗಲ್ಲದೆ ಹೊನ್ನೇಬಾಗಿ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಸೇರಿದ್ದು ಎಂದಾದ ಮೇಲೆ ಹಕ್ಕುಪತ್ರಗಳನ್ನು ಮತ್ತೆ ತಿದ್ದಿ ಹೊಸದಾಗಿ ವಿತರಿಸಲಾಗಿದೆ.
ಈ ಸಂದರ್ಭದಲ್ಲಿ ತಹಸೀಲ್ದಾರ್ ಕೆ ಪುರಂದರ್, ಪುರಸಭಾ ಅಧ್ಯಕ್ಷ ಸಿ.ಹೆಚ್ ದಯಾನಂದ್ ಹಾಗೂ ಉಪಾಧ್ಯಕ್ಷ ರಾಜಶೇಖರ್ ಮತ್ತು ಸಮಾಜ ಕಲ್ಯಾಣಾಧಿಕಾರಿ ಶ್ರೀಧರಮೂರ್ತಿ ಮತ್ತು ವಿಷಯ ನಿರ್ವಾಹಕ ಅದೀಬ್ ಉಪಸ್ಥಿತರಿದ್ದರು.