ಕನ್ನಡ ಚಿತ್ರರಂಗದ ಕ್ರೇಜಿ ಸ್ಟಾರ್, ಕನಸುಗಾರ ಹೀಗೆ ಹಲವು ಬಿರುದುಗಳಿಂದ ಗುರುತಿಸಿಕೊಂಡಿರುವ ನಟ ವಿ. ರವಿಚಂದ್ರನ್ ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಳ್ಳುವುದನ್ನು ಕಡಿಮೆ ಮಾಡಿದ್ದಾರಾ.? ಅನ್ನೋ ಪ್ರಶ್ನೆ ಎದ್ದಿದೆ. 2022ರಲ್ಲಿ ತೆರೆಕಂಡ ರವಿ ಬೋಪಣ್ಣ ಅವರು ನಿರ್ದೇಶಿಸಿದ ಕೊನೆಯ ಸಿನಿಮಾ. ‘ದಿ ಜಡ್ಜ್ ಮೆಂಟ್’ ಸಿನಿಮಾ ಬಳಿಕ ರಿಯಾಲಿಟಿ ಶೋನಲ್ಲಿ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ಎಐ ತಂತ್ರಜ್ಞಾನ ಬಳಸಿಕೊಂಡು ‘ಐ ಆಮ್ ಗಾಡ್-ದಿ ಕ್ರೇಜಿ’ ಎಂಬ ಸಿನಿಮಾ ಮಾಡುತ್ತಿದ್ದು, ಶೂಟಿಂಗ್ ನಡೆಯುತ್ತಿದೆ. ಈ ಬಗ್ಗೆ ನಾದಬ್ರಹ್ಮ ಹಂಸಲೇಖ ಅವರ ‘ಓಕೆ’ ಸಿನಿಮಾ ಲಾಂಚ್ ಈವೆಂಟ್ನಲ್ಲಿ ಹಂಚಿಕೊಂಡರು.

ಕನ್ನಡ ಚಿತ್ರರಂಗದಲ್ಲಿ ಸೂಪರ್ ಹಿಟ್ ಹಾಡುಗಳನ್ನು ಕೊಟ್ಟಿರುವ ನಾದಬ್ರಹ್ಮ ಹಂಸಲೇಖ ‘ಓಕೆ’ ಅನ್ನೋ ಟೈಟಲ್ ಇಟ್ಟು ಸಿನಿಮಾ ಮಾಡುತ್ತಿದ್ದಾರೆ. ಸಿನಿಮಾ ಲಾಂಚ್ ಸಂದರ್ಭ ಹಂಸಲೇಖ ಅವರ 74ನೇ ಹುಟ್ಟುಹಬ್ಬವನ್ನು ಆಚರಿಸಲಾಯಿತು. ಈ ಕಾರ್ಯಕ್ರಮಕ್ಕೆ ಆಗಮಿಸಿದ್ದ ರವಿಚಂದ್ರನ್ ತಮ್ಮ ಚಿತ್ರದ ಬಗ್ಗೆ ಸಣ್ಣ ಸುಳಿವು ಬಿಟ್ಟುಕೊಟ್ಟರು.
‘ಐ ಆಮ್ ಗಾಡ್-ದಿ ಕ್ರೇಜಿ’ ಎಂಬ ಸಿನಿಮಾ ಮಾಡುತ್ತಿದ್ದು, ಶೂಟಿಂಗ್ ನಡೆಯುತ್ತಿದೆ. ಸದ್ಯದಲ್ಲೇ ಸಿನಿಮಾ ಬರಲಿದೆ. ಆಮೇಲೆ ನನ್ನ ಮಾರ್ಕೆಟ್ ಕೂಡಾ ಹೆಚ್ಚಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಜೊತೆಗೆ ತಮ್ಮ ಚಿತ್ರದಲ್ಲಿ ಪುತ್ರ ಮನೋರಂಜನ್ ಕೂಡಾ ನಟಿಸುತ್ತಿರುವುದಾಗಿ ಹೇಳಿದರು.
ಕಾರ್ಯಕ್ರಮದಲ್ಲಿ ಹಂಸಲೇಖ ಅವರ ಬಗ್ಗೆ ಮಾತನಾಡಿದ ರವಿಚಂದ್ರನ್, ನನ್ನ ಹೃದಯದಲ್ಲಿ ನೀವಿದ್ದೀರಿ. ನನ್ನನ್ನು ತೆರೆಮೇಲೆ ರಾಜನಾಗಿ ಮೆರವಣಿಗೆ ಮಾಡಿಸಿದ್ದು ನೀವೇ. ಕನ್ನಡದಲ್ಲಿ ಸಿನಿಮಾ ಓಡ್ತಿಲ್ಲ ಓಡ್ತಿಲ್ಲ ಅಂತಾ ಹೇಳ್ತಾರೆ. ಪ್ರತೀ ವಾರ ಸಕ್ಸಸ್ ಮೀಟ್ ಮಾಡ್ತಾನೆ ಇದ್ದಾರೆ. 1986ರಲ್ಲಿ ಮಾಡಿದ್ವಲ್ಲ ಅದು ನಿಜವಾದ ಸಕ್ಸಸ್. ನಮಗೆ ಸಿನಿಮಾ ಸಕ್ಸಸ್ ಮೀಟ್ ಮಾಡೋಕೆ ಸಮಯವೇ ಇರಲಿಲ್ಲ. ಲೆಕ್ಕಾಚಾರ ಹಾಕದೇ ಕೆಲಸ ಮಾಡಿದವ್ರು ನಾವು.
ನನ್ನ ಹಾಗೂ ರಾಜ್ (ಹಂಸಲೇಖ/ಗಂಗರಾಜ್) ಮಧ್ಯೆ ಯಾವ ಲೆಕ್ಕಾಚಾರವೂ ಇರಲಿಲ್ಲ. ಯಾವ ಸಿನಿಮಾದ ಲಾಭ ಎಷ್ಟು ಅಂತಾ ನನಗೆ ಗೊತ್ತಿಲ್ಲ. ಎನ್ ಎಸ್ ರಾವ್ ನನ್ನನ್ನು ಪರಿಚಯಿಸಿದ್ರು. ನನ್ನ ಹಾಗೂ ರಾಜ್ ಅವರ ಸ್ನೇಹ ನಿಷ್ಕಲ್ಮಶವಾದದ್ದು ಎಂದು ತಿಳಿಸಿದರು.