ಹುಳಿಯಾರು: ಪ್ರತಿದಿನ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿರುವ ಕರ್ನಾಟಕ ರಾಜ್ಯದ ಆರ್ಥಿಕ ಶೈಕ್ಷಣಿಕ ಸಾಮಾಜಿಕ ಪ್ರಗತಿಗಾಗಿ ನಡೆಸಿರುವ ಜಾತಿಗಣತಿ ಪಟ್ಟಿಯಲ್ಲಿ ಆರ್ಯವೈಶ್ಯ ಸಮಾಜದ ಹೆಸರೇ ಪ್ರಸ್ತಾಪವಾಗಿಲ್ಲ ಎಂದು ಕರ್ನಾಟಕ ಆರ್ಯವೈಶ್ಯ ಮಹಾಸಭಾ ತುಮಕೂರು ಜಿಲ್ಲಾಧ್ಯಕ್ಷ ಎಲ್.ಆರ್. ಚಂದ್ರಶೇಖರ್ ಹೇಳಿದರು.

ಕರ್ನಾಟಕದಲ್ಲಿ ಸುಮಾರು ಏಳರಿಂದ ಎಂಟು ಲಕ್ಷ ಜನ ಆರ್ಯವೈಶ್ಯ ಸಮಾಜದವರು ಇದ್ದೇವೆ. ಆರ್ಯವೈಶ್ಯ ಸಮಾಜದಲ್ಲೂ ಕೂಡ ಬಡತನ ರೇಖೆಗಿಂತ ಕೆಳಗಿರುವ ಸಾವಿರಾರು ಕುಟುಂಬಗಳಿವೆ. ಈ ಪಟ್ಟಿಯಲ್ಲಿ ಆರ್ಯವೈಶ್ಯ ಸಮಾಜದ ಹೆಸರು ಅವಶ್ಯಕತೆ ಇಲ್ಲವೆ? ಮಾಧ್ಯಮಗಳಲ್ಲಿ ಪ್ರಕಟವಾಗುವಾಗ ಎಲ್ಲೂ ಕೂಡ ಆರ್ಯವೈಶ್ಯ ಸಮಾಜದ ಹೆಸರು ಪ್ರಕಟವಾಗಿಲ್ಲ.
ಈ ಜನಗಣತಿ ಪಟ್ಟಿಯು ಪಾರದರ್ಶಕವಾಗಿಲ್ಲ. ದಯವಿಟ್ಟು ಸರ್ಕಾರ ಇದನ್ನು ಪರಿಗಣಿಸಿ ನಮ್ಮ ಸಂಖ್ಯಾಬಲವನ್ನು ಪ್ರಕಟಿಸಬೇಕು. ಕರ್ನಾಟಕ ಆರ್ಯವೈಶ್ಯ ಮಹಾಸಭಾ ಹೆಸರಿನಲ್ಲಿ ನಮ್ಮದೊಂದು ದೊಡ್ಡ ಸಂಘಟನೆ ಇದೆ. ಆರ್.ಪಿ. ರವಿಶಂಕರ್ ಈ ಸಮಾಜದ ರಾಜ್ಯಾಧ್ಯಕ್ಷರಾಗಿದ್ದು, ಅವರ ನಾಯಕತ್ವದಲ್ಲಿ ಈ ಸಂಘಟನೆಯು ನಮ್ಮ ಸಮಾಜದ ಹಲವಾರು ಧಾರ್ಮಿಕ, ಶೈಕ್ಷಣಿಕ ಹಾಗೂ ಆರ್ಥಿಕ ಜವಾಬ್ದಾರಿಗಳನ್ನು ನಿರ್ವಹಿಸಿಕೊಂಡು ಬರುತ್ತಿದೆ.
ಸರ್ಕಾರ ದಯವಿಟ್ಟು ಆರ್ಯವೈಶ್ಯ ಸಮಾಜವನ್ನು ನಿರ್ಲಕ್ಷಿಸಬಾರದು. ಸರ್ಕಾರ ತಕ್ಷಣ ಇದನ್ನು ಸರಿಪಡಿಸಿಕೊಂಡು ನಮ್ಮ ಜನಾಂಗದ ಗಣತಿಯನ್ನು ಪ್ರಕಟಿಸಬೇಕು. ಸರಿಪಡಿಸಿಕೊಳ್ಳದಿದ್ದಲ್ಲಿ ಈ ದೋಷಪೂರಿತ ಜನಗಣತಿ ಪಟ್ಟಿಯ ವಿರುದ್ಧ ನಮ್ಮದು ಕೂಡ ಆಕ್ಷೇಪಣೆ ಇರುತ್ತದೆ ಎಂದು ಸರ್ಕಾರವನ್ನು ಒತ್ತಾಯಿಸಿದರು.