ಕೊರಟಗೆರೆ: ಬೇಸಿಗೆ ಪ್ರಾರಂಭಕ್ಕೆ ಮುನ್ನವೆ ಬೆಂಕಿ ಅವಘಡಗಳು ಹೆಚ್ಚಾಗುತ್ತಿದ್ದು, ರೈತರ ಗುಡಿಸಲಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ನಾಲ್ಕು ಮೇಕೆಗಳು ಸುಟ್ಟು ಭಸ್ಮವಾಗಿದ್ದರೆ, ಮೇಕೆಗಳನ್ನು ಬದುಕಿಸಲು ಹೋಗಿ ಅತ್ತೆ ಸೊಸೆ ಇಬ್ಬರಿಗೂ ಸಣ್ಣ ಪುಟ್ಟ ಸುಟ್ಟ ಗಾಯಗಳಾಗಿ, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ತಾಲೂಕಿನಲ್ಲಿ ಜರುಗಿದೆ.
ಕೊರಟಗೆರೆ ತಾಲೂಕಿನ ಬಿ.ಡಿ ಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಚಿಟ್ಟಿಪಟ್ಟೆಪಾಳ್ಯದ ಶಿಲ್ಪ ಜಯರಾಮ್ ಎಂಬುವರ ಗುಡಿಸಿಲಿಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು, 4 ಮೇಕೆಗಳು, ದವಸ ಧಾನ್ಯ ಸೇರಿದಂತೆ ಎಲ್ಲವೂ ಸುಟ್ಟು ಭಸ್ಮವಾಗಿ ರೈತ ಕುಟುಂಬ ದಿಕ್ಕು ಕಾಣದಂತೆ ಕೈ ಹೊತ್ತು ಕುಳಿತಿರುವಂತಹ ಘಟನೆ ಜರುಗಿದೆ.
ಸ್ಥಳೀಯ ಮುಖಂಡ ಬಾಲರಾಜು ಮಾತನಾಡಿ, ಆಕಸ್ಮಿಕವಾಗಿ ಗುಡಿಸಲಿಗೆ ಬೆಂಕಿ ತಗುಲಿ ೮ ಮೇಕೆಯಲ್ಲಿ ೪ ಮೇಕೆ ಸತ್ತಿವೆ. ಇದರ ಜೊತೆಯಲ್ಲಿ ಜೋಳ, ಹುರುಳಿ ಸೇರಿದಂತೆ ದವಸ ಧಾನ್ಯಗಳು ಬೆಂಕಿಗೆ ಸುಟ್ಟು ಹೋಗಿದೆ. ಮೇಕೆಗಳನ್ನು ಕಾಪಾಡಲು ಹೋದ ಅತ್ತೆ ಸೊಸೆಗೆ ಬೆಂಕಿ ತಗುಲಿ ಸಣ್ಣಪುಟ್ಟ ಗಾಯಗಳಾಗಿವೆ. ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಬಡ ಕುಟುಂಬವಾದ ಕಾರಣ ಸರ್ಕಾರದಿಂದ ಇವರಿಗೆ ಸಹಾಯಧನ ನೀಡಲು ಕೋರಲಾಗಿದೆ ಎಂದರು.

ಬೆಂಕಿಯಿಂದ ಗುಡಿಸಲು ಹಾಗೂ ಮೇಕೆ ಕಳೆದುಕೊಂಡ ರೈತ ಜಯರಾಮ್ ಮಾತನಾಡಿ, ನಾವು ಕೆಲಸಕ್ಕೆ ಹೋದಂತಹ ಸಂದರ್ಭದಲ್ಲಿ ಬೆಂಕಿ ಕಾಣಿಸಿಕೊಂಡು ಗುಡಿಸಲು ಸುಟ್ಟು ಕರಕಲಾಗಿದ್ದು, ನಾಲ್ಕು ಮೇಕೆಗಳು ಸುಟ್ಟು ಸತ್ತಿವೆ. ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಮೇಕೆ ಉಳಿಸಿಕೊಳ್ಳಲು ನನ್ನ ಹೆಂಡತಿ ಹಾಗೂ ನನ್ನ ತಾಯಿ ಪ್ರಯತ್ನಪಟ್ಟು ಬೆಂಕಿಯಿಂದ ಸುಟ್ಟ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದಯವಿಟ್ಟು ಸರ್ಕಾರದಿಂದ ಪರಿಹಾರ ನೀಡಬಾಕಾಗಿ ಮನವಿ ಮಾಡಿದರು.
ಗುಡಿಸಲು ಕಳೆದುಕೊಂಡ ಸಂತ್ರಸ್ತ ಮಹಿಳೆ ಶಿಲ್ಪ ಮಾತನಾಡಿ, ಮನೆ ಪಕ್ಕದಲ್ಲಿ ಹತ್ತಾರು ಮೂಟೆ ಉರುಳಿ ಬೆಂಕಿಗೆ ಆಹುತಿಯಾಗಿವೆ. ಗುಡಿಸಲಿಗೆ ಬೆಂಕಿ ತಗುಲಿದಾಗ ಮೇಕೆಗಳನ್ನು ಕಾಪಾಡಲು ಗುಡಿಸಲಿಗೆ ಹೋದ ಸಂದರ್ಭದಲ್ಲಿ ಸುಟ್ಟ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ.