ಮೈಸೂರು || ನೀತಿ ಆಯೋಗದ ಸಭೆಗೆ ಗೈರಾಗಲು ಕಾರಣ ತಿಳಿಸಿ: Vijayendra ಒತ್ತಾಯ

3 ಶಾಸಕರ ಉಚ್ಚಾಟನೆಗೆ ಕೇಂದ್ರ ವರಿಷ್ಠರಿಗೆ ಕೋರ್ ಕಮಿಟಿ ಅಭಿನಂದನೆ: Vijayendra

ಮೈಸೂರು: ಮುಖ್ಯಮಂತ್ರಿಗಳೇ, ನೀತಿ ಆಯೋಗದ ಸಭೆಗೆ ಗೈರಾಗಲು ಕಾರಣವನ್ನು ನೀವು ರಾಜ್ಯದ ಜನರಿಗೆ ತಿಳಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ಒತ್ತಾಯಿಸಿದ್ದಾರೆ.

ಇಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಜೀ ಅವರು ನಿನ್ನೆ ದೆಹಲಿಯಲ್ಲಿ ಮಹತ್ವದ ನೀತಿ ಆಯೋಗದ ಸಭೆ ಕರೆದಿದ್ದರು. ಆ ಸಭೆಯಲ್ಲಿ ಪ್ರಮುಖವಾಗಿ ಭಾರತವು 20247ನೇ ಇಸವಿಗೆ ಒಂದು ಅಭಿವೃದ್ಧಿ ಹೊಂದಿದ ದೇಶವಾಗಿ ಪರಿವರ್ತನೆ ಆಗಬೇಕೆಂಬ ನಿಟ್ಟಿನಲ್ಲಿ ವಿವಿಧ ರಾಜ್ಯಗಳ ಅಭಿಪ್ರಾಯಗಳು, ಆ ರಾಜ್ಯಗಳ ದೂರದೃಷ್ಟಿತ್ವ- ಇವೆಲ್ಲವನ್ನೂ ಸಮಗ್ರವಾಗಿ ಚರ್ಚಿಸಲು ಉದ್ದೇಶಿಸಲಾಗಿತ್ತು ಎಂದು ವಿವರಿಸಿದರು.

ಆ ಸಭೆಯಲ್ಲಿ ಕಾಂಗ್ರೆಸ್ ಆಡಳಿತವಿರುವ ತೆಲಂಗಾಣ, ಹಿಮಾಚಲ ಪ್ರದೇಶ ರಾಜ್ಯಗಳ ಮುಖ್ಯಮಂತ್ರಿಗಳು, ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್ ಅವರೂ ಭಾಗವಹಿಸಿದ್ದರು. ಆದರೆ, ನಮ್ಮ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆ ಸಭೆಯಲ್ಲಿ ಪಾಲ್ಗೊಳ್ಳದೆ ಇರುವುದು ದುರದೃಷ್ಟದ ವಿಚಾರ ಎಂದು ನುಡಿದರು. ಸಿದ್ದರಾಮಯ್ಯನವರು ಆ ಸಭೆಗೆ ಯಾಕೆ, ಯಾವ ಕಾರಣಕ್ಕಾಗಿ ಹೋಗಿಲ್ಲ? ಬಹಿಷ್ಕಾರ ಹಾಕಿದರೇ? ಯಾವ ಕಾರಣಕ್ಕೆ ಸಭೆಯಲ್ಲಿ ಭಾಗವಹಿಸಬೇಕೆಂದು ಮುಖ್ಯಮಂತ್ರಿಗಳಿಗೆ ಅನಿಸಿಲ್ಲ ಎಂದು ಕೇಳಿದರು.

ಕಾಂಗ್ರೆಸ್ ಸರಕಾರದ ಶಾಸಕರನ್ನು ದೆಹಲಿಗೆ ಕರೆದುಕೊಂಡು ಹೋಗಿ ಕೇಂದ್ರ ಸರಕಾರದ ವಿರುದ್ಧ ಪ್ರತಿಭಟನೆ ಮಾಡಿದ್ದರು. ಆದರೆ, ಇಂಥ ಮಹತ್ವದ ಸಭೆಯಲ್ಲಿ ಪಾಲ್ಗೊಂಡಿಲ್ಲವೆಂದಾದರೆ ಎಲ್ಲೋ ಒಂದು ಕಡೆ ರಾಜ್ಯದ ಮುಖ್ಯಮಂತ್ರಿಗಳು ರಾಜ್ಯದ ಅಭಿವೃದ್ಧಿ ಬದಿಗಿಟ್ಟು, ರಾಜಕಾರಣ ಮಾಡುವುದೇ ಇವರಿಗೆ ಆದ್ಯತೆ ಆಗಿದೆ ಎಂದು ಆಕ್ಷೇಪಿಸಿದರು. ಇದು ರಾಜ್ಯಕ್ಕೆ ಮಾಡುವ ಅನ್ಯಾಯ ಎಂದು ಟೀಕಿಸಿದರು.

ಸಂಘರ್ಷದ ಹಾದಿಯಿಂದ ರಾಜ್ಯಕ್ಕೆ ಒಳಿತಾಗದು..

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಧಿಕಾರಕ್ಕೆ ಬಂದಾಗಿನಿಂದ ಕೇಂದ್ರ ಸರಕಾರದ ವಿರುದ್ಧ ಸಂಘರ್ಷದ ಹಾದಿಯನ್ನು ತಳೆದಿದ್ದಾರೆ; ತುಳಿಯುತ್ತಿದ್ದಾರೆ. ಈ ಸಂಘರ್ಷದ ಹಾದಿ ರಾಜ್ಯಕ್ಕೆ ಒಳಿತು ನೀಡದು ಎಂದು ವಿಜಯೇಂದ್ರ ಅವರು ಎಚ್ಚರಿಸಿದರು.

ಈ ವಿಷಯವನ್ನು ಹಲವು ಬಾರಿ ಪ್ರಸ್ತಾಪ ಮಾಡಿದ್ದೇವೆ. ಮುಖ್ಯಮಂತ್ರಿಗಳ ಈ ನಿಲುವಿನಿಂದ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ. ಯಾವ ಕಾರಣಕ್ಕೆ ಸಭೆಗೆ ಹೋಗಿಲ್ಲವೆಂದು ಸಿದ್ದರಾಮಯ್ಯನವರು ರಾಜ್ಯದ ಜನರಿಗೆ ತಿಳಿಸಬೇಕು ಎಂದು ಆಗ್ರಹಿಸಿದರು.

ಬ್ರಾಂಡ್ ಅಂಬಾಸಿಡರ್ ಆಗಿ ಕರ್ನಾಟಕದವರು ಸಿಗಲಿಲ್ಲವೇ?

ಕೆಎಸ್ಡಿಎಲ್ನ ಮೈಸೂರು ಸ್ಯಾಂಡಲ್ ಸಾಬೂನಿಗೆ 6.20 ಕೋಟಿ ಕೊಟ್ಟು ನಟಿ ತಮನ್ನಾ ಭಾಟಿಯರನ್ನು ರಾಯಭಾರಿಯಾಗಿ ತರಲು ರಾಜ್ಯ ಸರಕಾರ ತೀರ್ಮಾನಿಸಿದೆ. ಇದು ಗಂಭೀರ ವಿಚಾರ. ನಾಡಿನ ನೆಲ, ಜಲ, ಭಾಷೆ, ಪರಂಪರೆಯನ್ನು ಉಳಿಸಿ ಬೆಳೆಸುವುದು ರಾಜ್ಯದ ಕರ್ತವ್ಯ. ಕೆಎಸ್ಡಿಎಲ್ ಸಂಸ್ಥೆಯನ್ನು ಕಾಂಗ್ರೆಸ್ ಸರಕಾರ ಹುಟ್ಟು ಹಾಕಿಲ್ಲ. 1916ರಲ್ಲಿ ಅಂದಿನ ಮಹಾರಾಜರ ದೂರದೃಷ್ಟಿ- ಕನಸಿನ ಕೂಸಿದು ಎಂದು ಗಮನ ಸೆಳೆದರು.

ಈ ಸಂಸ್ಥೆಗೆ ಬ್ರಾಂಡ್ ಅಂಬಾಸಿಡರ್ ಆಗಿ ಕರ್ನಾಟಕದವರು ಯಾರೂ ಸಿಗಲಿಲ್ಲವೇ? ರಾಜ್ಯದಲ್ಲಿ ಅಂಥ ಉತ್ತಮ ನಟ, ನಟಿ, ಕನ್ನಡಿಗರು ಸಿಗಲೇ ಇಲ್ಲವೇ? ಎಂದು ಪ್ರಶ್ನಿಸಿದರು. ಪರಿಣಿತರ ಸಲಹೆ ಪಡೆದುಕೊಂಡರೆಂಬ ಸಚಿವರ ಹೇಳಿಕೆಯನ್ನೂ ಗಮನಿಸಿದ್ದೇನೆ. ಇದಕ್ಯಾಕ್ರೀ ಬೇಕು ಪರಿಣಿತರ ಸಲಹೆ ಎಂದು ಪ್ರಶ್ನೆಯನ್ನು ಮುಂದಿಟ್ಟರು. ಯಾರು ಪರಿಣಿತರು, ಯಾವುದರಲ್ಲಿ ಪರಿಣಿತರು ಎಂದು ಕೇಳಿದರಲ್ಲದೆ, ರಾಜ್ಯ ಸರಕಾರ ಈ ವಿಷಯದಲ್ಲಿ ಸ್ವೇಚ್ಛಾಚಾರದಿಂದ ನಡೆದುಕೊಳ್ಳುವುದು ಸರಿಯಲ್ಲ ಎಂದು ಆಕ್ಷೇಪಿಸಿದರು. ಇದು ಮಹಾರಾಜರಿಗೆ ಮಾಡುವ ಅವಮಾನ ಎಂದು ಖಂಡಿಸಿದರು.

ಶಿವಕುಮಾರರಿಗೆ ರಾಮನಗರ ಹೆಸರಿನ ಕುರಿತು ಕೀಳರಿಮೆಯೇ?

ರಾಮನಗರ ಜಿಲ್ಲೆಯ ಹೆಸರು ಬದಲಿಸುವ ವಿಚಾರದಲ್ಲಿ ರಾಜ್ಯದ ಉಪ ಮುಖ್ಯಮಂತ್ರಿಗಳು ಎನ್ನುವುದನ್ನೂ ಮರೆತ ಡಿ.ಕೆ.ಶಿವಕುಮಾರ್ ಅವರು, ರಿಯಲ್ ಎಸ್ಟೇಟ್ ಏಜೆಂಟ್ ಆಗಿ ವರ್ತಿಸುತ್ತಿದ್ದಾರೆ ಎಂದು ರಾಮನಗರ ಜಿಲ್ಲೆಯವರೂ, ರಾಜ್ಯದ ಜನತೆಯೂ ಪ್ರಶ್ನಿಸುತ್ತಿದ್ದಾರೆ ಎಂದು ಹೇಳಿದರು.

ಡಿ.ಕೆ.ಶಿವಕುಮಾರ್ ಅವರಿಗೆ ರಾಮನಗರ ಹೆಸರಿನ ಕುರಿತು ಕೀಳರಿಮೆ ಇದೆಯೇ? ಅಥವಾ ರಾಮನಗರಕ್ಕೆ ಬೆಂಗಳೂರು ದಕ್ಷಿಣ ಎಂದು ಹೆಸರು ಸೇರಿಸದೇ ಇದ್ದಲ್ಲಿ ಅಭಿವೃದ್ಧಿಯೇ ಆಗಲಾರದೇ? ಎಂದು ಪ್ರಶ್ನಿಸಿದರು. ಇತಿಹಾಸ ಇರುವ ರಾಮನಗರ ಜಿಲ್ಲೆಯ ಹೆಸರು ಬದಲಿಸುತ್ತಾರೆ ಎಂದರೆ ಆ ಜಿಲ್ಲೆಯ ಜನರಿಗೆ ಮಾಡುವ ಅವಮಾನ ಎಂದು ಆಕ್ಷೇಪಿಸಿದರು. ರಿಯಲ್ ಎಸ್ಟೇಟ್ ಎಂದರೆ ಮಾತ್ರ ಅಭಿವೃದ್ಧಿಯೇ? ರಾಜ್ಯ ಸರಕಾರ ಇರುವುದೇ ರಿಯಲ್ ಎಸ್ಟೇಟ್ ಮಾಡಲೆಂದೇ ಎಂದು ವಾಗ್ದಾಳಿ ನಡೆಸಿದರು.

ಹೆದ್ದಾರಿಗೆ ಭೂಸ್ವಾಧೀನ ವಿಷಯದಲ್ಲಿ ನಿರಾಸಕ್ತಿ

ಹೆದ್ದಾರಿಗಳ ಅಭಿವೃದ್ಧಿ ಎಂಬುದು ಪ್ರಧಾನಿಯವರ ಕನಸಿನ ಕೂಸು. ಅದು ರಾಜ್ಯದ ಅಭಿವೃದ್ಧಿಗೂ ಪೂರಕ ಎಂಬ ಚಿಂತನೆ ಅವರದು. ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ ವಿಷಯದಲ್ಲಿ ಇಡೀ ದೇಶದಲ್ಲಿ ಕರ್ನಾಟಕ ರಾಜ್ಯವು ಹಿಂದುಳಿದಿದೆ. ರಾಜ್ಯ ಸರಕಾರವು ಭೂಸ್ವಾಧೀನದ ವಿಷಯದಲ್ಲಿ ಆಸಕ್ತಿ ತೋರುತ್ತಿಲ್ಲ. ಇದರಿಂದಾಗಿ ರಾಜ್ಯದಲ್ಲಿ ಹೆದ್ದಾರಿಗಳ ಅಭಿವೃದ್ಧಿ ವೇಗದಿಂದ ಸಾಗುತ್ತಿಲ್ಲ ಎಂದರು.

ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯ ಸರಕಾರಕ್ಕೆ ಹಣಕಾಸಿನ ಕೊರತೆ ಕಾಡುತ್ತಿದೆ. ವಿಧಾನಸೌಧವನ್ನು ಪ್ರವಾಸಿಗರು ದುಡ್ಡುಕೊಟ್ಟು ನೋಡುವಂಥ ತೀರ್ಮಾನವನ್ನೂ ರಾಜ್ಯ ಸರಕಾರ ತೆಗೆದುಕೊಳ್ಳುತ್ತಿದೆ. ರಾಜ್ಯದಲ್ಲಿ ಅಭಿವೃದ್ಧಿ ಇಲ್ಲ. ಅಭಿವೃದ್ಧಿಗೆ ಬೇಕಾದ ಹಣಕಾಸನ್ನು ಹೊಂದಿಸಲು ಹಣಕಾಸು ಸಚಿವರೂ ಆದ ಮುಖ್ಯಮಂತ್ರಿಗಳಿಗೆ ಸಾಧ್ಯವಾಗುತ್ತಿಲ್ಲ; ಬೆಂಗಳೂರು ನಗರದಲ್ಲಿ ಕಸಕ್ಕೂ ತೆರಿಗೆ ಹಾಕುತ್ತಿದ್ದಾರೆ. ಮುಖ್ಯಮಂತ್ರಿಗಳು ಸತ್ಯವನ್ನು ಮರೆಮಾಚುತ್ತಿದ್ದಾರೆ. ಗ್ಯಾರಂಟಿಗಳಿಗೆ ಹಣ ಕ್ರೋಡೀಕರಿಸಲು ಸಾಧ್ಯವಾಗುತ್ತಿಲ್ಲ. ಶಾಸಕರ ಕ್ಷೇತ್ರಗಳ ಅಭಿವೃದ್ಧಿಗೆ ರಾಜ್ಯ ಸರಕಾರ ಹಣ ನೀಡುತ್ತಿಲ್ಲ ಎಂದು ಟೀಕಿಸಿದರು.

ಅಭಿವೃದ್ಧಿ ಅನುದಾನದ ಚರ್ಚೆಗೆ ಬರಲು ಸವಾಲು..

ಕಾಂಗ್ರೆಸ್ ಸರಕಾರ- ಸಿದ್ದರಾಮಯ್ಯರನ್ನು ಖುಷಿ ಪಡಿಸಲು ನಾವು ಚಾರ್ಜ್ಶೀಟ್ ಬಿಡುಗಡೆ ಮಾಡಿಲ್ಲ ಎಂದು ಪ್ರಶ್ನೆಗೆ ಉತ್ತರ ಕೊಟ್ಟರು. ಹಿಂದೆ ಬಿಜೆಪಿ ಸರಕಾರ ಅಧಿಕಾರದಲ್ಲಿ ಇದ್ದಾಗ ಮೈಸೂರಿನ ಅಭಿವೃದ್ಧಿಗೆ ನಾವೆಷ್ಟು ಸಾವಿರ ಕೋಟಿ ಅನುದಾನ ಕೊಟ್ಟಿದ್ದೇವೆ? ನೀವೆಷ್ಟು ಕೊಟ್ಟಿದ್ದೀರೆಂದು ಚರ್ಚೆ ಮಾಡೋಣ ಬನ್ನಿ ಎಂದು ಸವಾಲು ಹಾಕಿದರು.

Leave a Reply

Your email address will not be published. Required fields are marked *