ರಾಯಚೂರು: ಮಂತ್ರಾಲಯ ಶ್ರೀರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಹಾಗೂ ಉತ್ತರಾದಿ ಮಠ ಪೀಠಾಧಿಪತಿ ಶ್ರೀ ಸತ್ಯಾತ್ಮ ತೀರ್ಥರು ಇಬ್ಬರು ಭೇಟಿಯಾಗಿರುವುದು ಉಭಯ ಮಠದ ಭಕ್ತರಿಗೆ ಹೊಸ ಆಶಾಭವನೆ ಮೂಡಿಸಿದೆ.

ರಾಯರಮಠ ಹಾಗೂ ಉತ್ತರಾದಿ ಮಠದ ನಡುವೆ ಹಲವು ವರ್ಷಗಳಿಂದ ಕಾನೂನು ಸಂಘರ್ಷ ನಡೆಯುತ್ತಿತ್ತು. ಆದರೆ, ಈ ಸಂಘರ್ಷವನ್ನು ಸೌಹರ್ದಯುತವಾಗಿ ಮಾತುಕತೆ ನಡೆಸುವ ಮೂಲಕ ಬಗೆಹರಿಸಿಕೊಳ್ಳುವಂತೆ ಸುಪ್ರೀಂಕೋರ್ಟ್ ಸೂಚಿಸಿದ್ದು, ಉಭಯ ಶ್ರೀಗಳು ಸಮಗಮವಾಗಿದೆ. ಸರ್ವೋಚ್ಚ ನ್ಯಾಯಾಲಯ ಸೂಚಿಸಿದಂತೆ ಚೆನ್ನೈನಲ್ಲಿ ಗುರುವಾರ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳಾದ ಸಂಜಯ್ ಕೌಲ್ ಮಧ್ಯಸ್ಥಿಕೆಯಲ್ಲಿ ಎರಡು ಮಠಗಳ ಪೀಠಾಧಿಪತಿಗಳು ಭೇಟಿಯಾಗಿ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು ಉಭಯ ಮಠಗಳ ಅಸಂಖ್ಯಾತ ಭಕ್ತ ಗಣದ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿದ್ದೇವೆ. ಸಮಾಜದ ಹಿತದ ದೃಷ್ಠಿಯಿಂದ ಒಳ್ಳೆಯ ರೀತಿಯಲ್ಲಿ ವಿವಾದಗಳನ್ನು ಬೇಗನೆ ಪರಿಹಾರ ಕಂಡುಕೊಡು ಸಮಾಜಕ್ಕೆ ಉತ್ತಮ ಸಂದೇಶ ನೀಡಬೇಕಾಗಿದೆ.ಎಲ್ಲರೂ ಒಟ್ಟಾಗಿ ಪರಿಹಾರ ಪ್ರಯತ್ನಿಸಲಾಗುವುದು. ಉಭಯರ ನಡುವೆ ಇರುವ ವಿವಾದಗಳು ಶೀಘ್ರದಲ್ಲಿ ಇತ್ಯರ್ಥವಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುವುದಾಗಿ ತಿಳಿಸಿದ್ದಾರೆ.
ರಾಯರಮಠ – ಉತ್ತರಾದಿ ಮಠದ ನಡುವೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿಯ ನವಬೃಂದಾವನ ಗಡ್ಡೆಯಲ್ಲಿನ ಯತಿಗಳ ಬೃಂದಾವನ ಪೂಜೆ ಮಾಡುವ ವಿಚಾರಕ್ಕೆ ಹಲವು ವರ್ಷಗಳಿಂದ ಎರಡು ಮಠಗಳ ಭಿನ್ನಾಭಿಪ್ರಾಯವಿದ್ದು, ಇದರ ಸಂಘರ್ಷವಿದೆ. ಯತಿಗಳ ಆರಾಧನೆ ಸಮಯದಲ್ಲಿ ನವಬೃಂದಾವನ ಗಡ್ಡೆಯಲ್ಲಿ ಬಹಳ ಗೊಂದಲ ವಾತಾವರಣ ಸೃಷ್ಟಿಯಾಗುತ್ತಿತ್ತು. ಪೂಜೆ ಮಾಡುವ ವಿಚಾರಕ್ಕೆ ಇಬ್ಬರು ನಮಗೆ ಅವಕಾಶ ನೀಡಬೇಕು ಎನ್ನುವುದು ಬಹುಬೇಡಿಕೆಯಾಗಿತ್ತು. ಇದರ ವಿಚಾರವಾಗಿ ಕಾನೂನು ಹೋರಾಟದ ಮೋರೆ ಹೋಗಿದ್ದಾಗ, ಒಂದೂವರೆ ದಿನದ ಆಧಾರದ ಮೇಲೆ ಪೂಜೆ ಮಾಡಲು ಅವಕಾಶ ನೀಡಿದರೂ, ವಿವಾದ ಇತ್ಯರ್ಥವಾಗಿರಲಿಲ್ಲ.
ಈಗ ಉಭಯ ಮಾತುಕತೆಯಿಂದ ಸಮಸ್ಯೆಯನ್ನು ಪರಿಹಾರಿಸಿಕೊಂಡು ಸುಪ್ರೀಂಕೋರ್ಟ್ ಸೂಚಿಸಿರುವುದು ಭಕ್ತರಲ್ಲಿ ಹೊಸ ಹರ್ಷ ತರಿಸಿದ್ದು, ಉಭಯ ಭೇಟಿ, ಮಾತನಾಡಿರುವ ಬಗ್ಗೆ ರಾಯರ ಮಠ ಸಹ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.