ತುಮಕೂರು || ಬಿರುಗಾಳಿ ಸಹಿತ ಮಳೆಗೆ ರೈಲ್ವೆ ಹಳಿ ಮೇಲೆ ಉರುಳಿದ ತೆಂಗಿನ ಮರಗಳು: ರೈಲು ಸಂಚಾರದಲ್ಲಿ ವ್ಯತ್ಯಯ

ತುಮಕೂರು || ಬಿರುಗಾಳಿ ಸಹಿತ ಮಳೆಗೆ ರೈಲ್ವೆ ಹಳಿ ಮೇಲೆ ಉರುಳಿದ ತೆಂಗಿನ ಮರಗಳು: ರೈಲು ಸಂಚಾರದಲ್ಲಿ ವ್ಯತ್ಯಯ

ತುಮಕೂರು:-  ಬಿರುಗಾಳಿ ಸಹಿತ ಮಳೆಗೆ ಜಿಲ್ಲೆಯ ಗುಬ್ಬಿ ತಾಲೂಕಿನ ನಂದಿಹಳ್ಳಿ ಗ್ರಾಮದಲ್ಲಿ ಹಾದುಹೋಗಿರುವ ರೈಲು ಹಳಿ ಮೇಲೆ ತೆಂಗಿನ ಮರಗಳು ಬಿದ್ದ ಪರಿಣಾಮ ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು.

ರೈಲ್ವೆ ಅಧಿಕಾರಿಗಳು, ಸಿಬ್ಬಂದಿ ಹಳಿ ಮೇಲಿದ್ದ ಮೂರ್ನಾಲ್ಕು ಮರಗಳನ್ನು ತೆರವುಗೊಳಿಸಿದರು. ರೈಲು ಹಳಿ ಮೇಲೆ ಮರಬಿದ್ದಿದ್ದ ಪರಿಣಾಮ ಶಿವಮೊಗ್ಗ ಶತಾಬ್ ಜಿ ಎಕ್ಸ್‌ಪ್ರೆಸ್‌ ಮತ್ತು ಶಿವಮೊಗ್ಗ ಟೌನ್ ಎಕ್ಸ್‌ಪ್ರೆಸ್‌ ರೈಲುಗಳ ಸಂಚಾರ ಸುಮಾರು 1 ಗಂಟೆ ತಡವಾಗಿ ಸಂಚರಿಸಿದವು. ಮರ ಬಿದ್ದ ಕಾರಣ ಒಮ್ಮೆಲೆ‌ 2 ರೈಲುಗಳ ಸಂಚಾರ ವ್ಯತ್ಯಯವಾಗಿತ್ತು ಎಂದು ತಿಳಿದುಬಂದಿದೆ.

ಇನ್ನೂ ಗುಬ್ಬಿ ತಾಲೂಕಿನ ಕೆಲವು ಕಡೆ ಭಾಗದಲ್ಲಿ ಭಾರಿ ಬಿರುಗಾಳಿ ಸಹಿತ ಮಳೆಯಾಗಿದ್ದು, ಅಪಾರ ನಷ್ಟ ಉಂಟಾಗಿದೆ.  ಅಮ್ಮನಘಟ್ಟ, ಬಾಗೂರು, ಹೇರೂರು, ಚೆನ್ನಶೆಟ್ಟಿಹಳ್ಳಿ, ಜಿ. ಅರಿವೆಸಂದ್ರ, ಕೆ.ಬಿ.ಕ್ರಾಸ್, ನಿಟ್ಟೂರು ಸೇರಿದಂತೆ ಇನ್ನೂ ಹಲವು ಭಾಗಗಲ್ಲಿ ಗುಡುಗು, ಮಿಂಚು, ಬಿರುಗಾಳಿ ಸಹಿತ ಮಳೆ ಅಬ್ಬರಿಸಿದೆ. ಶುಕ್ರವಾರ ಸಂಜೆ ಆರಂಭವಾದ ಮಳೆ ರಾತ್ರಿ 8ರಿಂದ 9 ಗಂಟೆಯವರೆಗೆ ಸುರಿದಿದೆ. ಬಿರುಗಾಳಿಗೆ ಅಪಾರ ನಷ್ಟ ಉಂಟಾಗಿದೆ.

20ಕ್ಕೂ ಹೆಚ್ಚು ಮನೆಗಳಿಗೆ ಹಾನಿ:- ಬಿರುಗಾಳಿ ಸಹಿತ ಸುರಿದ ಮಳೆಗೆ ಗುಬ್ಬಿ ತಾಲೂಕಿನ ಅಮ್ಮನಘಟ್ಟ, ಜಿ. ಅರಿವೇಸಂದ್ರ, ಬಾಗೂರು ಸೇರಿದಂತೆ ಹಲವು ಗ್ರಾಮಗಳಲ್ಲಿನ ಮನೆಗಳ ಶೀಟು, ಹೆಂಚು ಹಾರಿಹೋಗಿವೆ. ಇಡೀ ಮನೆಗೆ ಮನೆಯ ಶೀಟುಗಳೇ ಹಾರಿಹೋಗಿದ್ದು, ಮನೆಹಾನಿಯಾಗಿರುವ ಕುಟುಂಬಸ್ಥರು ಕಣ್ಣೀರಾಕುತ್ತಿದ್ದಾರೆ. ತಾಲೂಕು ಆಡಳಿತ ನಮಗೆ ಪರಿಹಾರ ಕೊಡಬೇಕು ಎಂದು ಮನೆಕಳೆದುಕೊಂಡ ಕುಟುಂಬಸ್ಥರು ಒತ್ತಾಯ ಮಾಡುತ್ತಿದ್ದಾರೆ.

ನೂರಾರು ಅಡಿಕೆ, ತೆಂಗು ಹಾನಿ:-  ಬಿರುಗಾಳಿಗೆ ನೂರಾರು ಅಡಿಕೆ, ತೆಂಗಿನ ಮರಗಳು ಧರೆಗೆ ಉರುಳಿದ್ದರೆ, ಬಾಳೆ ತೋಟಗಳು ನೆಲಕಚ್ಚಿವೆ. ರಭಸವಾಗಿ ಬೀಸಿದ ಬಿರುಗಾಳಿಗೆ ಅಡಿಕೆ ಮರಗಳು ತುಂಡು, ತುಂಡಾಗಿ ಮುರಿದು ಬಿದ್ದಿದ್ದು, ರೈತರಿಗೆ ಅಪಾರ ನಷ್ಟ ಉಂಟಾಗಿದೆ‌. ಅಮ್ಮನಘಟ್ಟ, ಬಾಗೂರು, ಹೇರೂರು, ಚೆನ್ನಶೆಟ್ಟಿಹಳ್ಳಿ ಬಳಿಯೇ ಹೆಚ್ಚು ತೋಟಗಳಿಗೆ ಹಾನಿಯುಂಟಾಗಿದೆ‌.

Leave a Reply

Your email address will not be published. Required fields are marked *