ತುಮಕೂರು : ಪ್ರಿಯಕರನೊಂದಿಗೆ ಪತ್ನಿ ಪರಾರಿ; ಮರ್ಯಾದೆಗೆ ಅಂಜಿ ಪತಿ ಆತ್ಮಹತ್ಯೆ

ತುಮಕೂರು: ಪತ್ನಿ ಪರ ಪುರುಷನೊಂದಿಗೆ ಓಡಿಹೋದ ಹಿನ್ನೆಲೆಯಲ್ಲಿ ಮರ್ಯಾದೆಗೆ ಅಂಜಿ ಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಹೊಸಹಳ್ಳಿ ಎಂಬಲ್ಲಿ ನಡೆದಿದೆ. ದೇವರಾಜ್​ ಆತ್ಮಹತ್ಯೆಗೆ ಮಾಡಿಕೊಂಡವರು.

ಪ್ರೇಮ ವಿವಾಹ: ಪ್ರೀತಿಸಿ ಮದುವೆಯಾಗಿ 18 ವರ್ಷಗಳ ಬಳಿಕ ಪತ್ನಿ ಮತ್ತೊಬ್ಬನ ಜೊತೆ ಸಂಬಂಧ ಹೊಂದಿದ್ದಾಳೆ. ಈ ವಿಷಯ ತಿಳಿದು ಹಲವು ಬಾರಿ ದೇವರಾಜ್‌ ಮನನೊಂದಿದ್ದರು. ಪ್ರೀತಿಸಿ ಮದುವೆಯಾದರೂ ಪರ ಪುರುಷನ ಮೇಲೆ ಪತ್ನಿಗೆ ವ್ಯಾಮೋಹ ಹೆಚ್ಚಾಗಿತ್ತು. ಮಕ್ಕಳು ಹಾಗು ತನ್ನನ್ನು ಬಿಟ್ಟು ಪರಾರಿಯಾದ ಪತ್ನಿ ನಡತೆಯಿಂದ ತೀವ್ರ ಆತಂಕಕ್ಕೊಳಗಾಗಿದ್ದರು. ಅಷ್ಟೇ ಅಲ್ಲದೇ, ಇಬ್ಬರು ಹೆಣ್ಣು ಮಕ್ಕಳೂ ತಬ್ಬಲಿಯಾಗಿದ್ದಾರೆ ಎಂಬ ಕೊರಗು ಕಾಡುತ್ತಿತ್ತು ಎನ್ನಲಾಗಿದೆ.

ದೇವರಾಜ್ ಹೊಸಹಳ್ಳಿಯಲ್ಲಿ ಅಂಗಡಿ ನಡೆಸಿಕೊಂಡು ಜೀವನ ಸಾಗಿಸುತ್ತಿದ್ದರು. 16 ಹಾಗೂ 12 ವರ್ಷದ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಪ್ರತಿನಿತ್ಯ ಅಂಗಡಿ ಬಳಿ ಬರುತ್ತಿದ್ದ ಆನಂದ್ ಕುಮಾರ್, ಪತ್ನಿಯೊಂದಿಗೆ ಸಲುಗೆ ಬೆಳೆಸಿಕೊಂಡಿದ್ದ. ಮೂರು ತಿಂಗಳ ಹಿಂದೆ ಪತಿ, ಮನೆ ಹಾಗೂ ಮಕ್ಕಳನ್ನು ಬಿಟ್ಟು ಆನಂದ್​ ಜೊತೆ ಮಹಿಳೆ ಹೋಗಿದ್ದಾಳೆ. ಬಳಿಕ ವಾಪಸ್‌ ಬಂದಿರಲಿಲ್ಲ. ಇದರಿಂದ ನೊಂದು ದೇವರಾಜ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕೂಡಲೇ ಅವರನ್ನು ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಬಗ್ಗೆ ಡೆತ್​ ನೋಟ್​ ಬರೆದಿಟ್ಟಿರುವ ದೇವರಾಜ್, ಇಬ್ಬರಿಗೂ ಕಠಿಣ ಶಿಕ್ಷೆ ಆಗುವಂತೆ ಆಗ್ರಹಿಸಿದ್ದಾರೆ. ಈ ಬಗ್ಗೆ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ. ಪ್ರಕರಣದಲ್ಲಿ ಮಹಿಳೆ ಹಾಗೂ ಆನಂದ್ ತಲೆಮರೆಸಿಕೊಂಡಿದ್ದು, ಇಬ್ಬರನ್ನೂ ಬಂಧಿಸುವಂತೆ ದೇವರಾಜ್ ಸಂಬಂಧಿಕರು ಮನವಿ ಮಾಡಿದ್ದಾರೆ

Leave a Reply

Your email address will not be published. Required fields are marked *