ಬೆಂಗಳೂರು: ಭಾರತ-ಪಾಕಿಸ್ತಾನ ಯುದ್ಧ ತಣ್ಣಗಾದ ಬೆನ್ನಲ್ಲೆ ಕರ್ನಾಟಕದಲ್ಲಿ ರಾಜಕೀಯ ಕೆಸರೆರಚಾಟ ಜೋರಾಗಿದೆ. ಯುದ್ಧ ಬೇಕು, ಬೇಡಗಳ ಮಧ್ಯೆ ಕಾಂಗ್ರೆಸ್ ನಾಯಕರೊಬ್ಬರು ನಮ್ಮ ಸೈನಿಕರು ಪಾಕಿಸ್ತಾನಕ್ಕೆ ನುಗ್ಗಿ ಹೊಡೆಯುವಾಗ, ಗುರಿಸಾಧನೆಯತ್ತ ಯೋಧಕರು ಮುನ್ನುಗ್ಗುವಾಗ ದಿಢೀರ್ ಕದನ ವಿರಾಮ್ ಘೋಷಿಸಿದ್ದೇಕೆ?, ಪ್ರಧಾನಿ ಉತ್ತರಿಸಲಿ ಎಂದೆಲ್ಲ ಟೀಕಾ ಪ್ರಹಾರ ನಡೆಸಿದ್ದಾರೆ. ಟೀಕಿಸಿದವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿರುಗೇಟು ನೀಡಿದ್ದಾರೆ.

ಅವಕಾಶ ಇದ್ದರೂ ಸಹಿತ ಪಾಕ್ ಆಕ್ರಮಿತ ಕಾಶ್ಮೀರ ಆಕ್ರಮಿಸಿಕೊಳ್ಳದೇ ಕೈಚೆಲ್ಲಿದವರಾರು? ಕಾಂಗ್ರೆಸ್ ಹಾಗೂ ಅದರ ಸ್ವಾರ್ಥ ಆಡಳಿತ ಇದಕ್ಕೆಲ್ಲ ಕಾರಣ ಎನ್ನುವುದು ದೇಶದ ಜನತೆಗೆ, ಜಗತ್ತಿಗೇ ತಿಳಿದ ಸತ್ಯ ಎಂದು ತಿಳಿಸುವ ಮುಖೇನ ಬಿ.ವೈ.ವಿಜಯೇಂದ್ರ ಅವರು ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡುವ ಮೂಲಕ ಪ್ರಧಾನಿ ಟೀಕಿಸಿದ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರಿಗೆ ಟಾಂಗ್ ಕೊಟ್ಟರು.
ಭಾರತದ ಸಿರಿ ಕಿರೀಟ ಕಾಶ್ಮೀರವನ್ನು ಅಸ್ಥಿರಗೊಳಿಸಿದ್ದು ಯಾರು?. ರಕ್ಷಣೆ ಇಲ್ಲದ ಅಸಹಾಯಕ ಪರಿಸ್ಥಿತಿಯಲ್ಲಿ ಬಹುತೇಕ ನಿವಾಸಿ ಕಾಶ್ಮೀರಿ ಪಂಡಿತರ ಕುಟುಂಬಗಳ ಕೊಲೆ,ಅತ್ಯಾಚಾರದ ದೌರ್ಜನ್ಯಗಳನ್ನು ಅನುಭವಿಸಿ ಕಾಶ್ಮೀರ ತೊರೆಯಲು ಕಾರಣರಾದವರು?. ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು (ಪಿಯೋಕೆ) ಬಿಟ್ಟುಕೊಟ್ಟವರು? ಅವಕಾಶವಿದ್ದರೂ POK ಆಕ್ರಮಿಸಿಕೊಳ್ಳದೇ ಕೈಚೆಲ್ಲಿದವರಾರು? ಎಂದು ಅವರು ಸರಣಿ ಪ್ರಶ್ನೆ ಮಾಡಿದ್ದಾರೆ. ನೆಹರು ಮನೆತನದವರೇ ಸುಪ್ರೀಂ.. ಪ್ರಜಾಪ್ರಭುತ್ವದಲ್ಲಿ ಗುಲಾಮಿ ಪದ್ಧತಿಯನ್ನು ನೆನಪಿಸುವ ರೀತಿಯಲ್ಲಿ ಜವಾಹರ್ ಲಾಲ್ ನೆಹರು ಮನೆತನದವರೇ ಸುಪ್ರೀಂ ಎಂದು ಪ್ರಜಾಪ್ರಭುತ್ವವನ್ನು ಅವಮಾನಿಸುವ ಭಟ್ಟಂಗಿ ಗರಡಿಯಿಂದ ಬಂದ ನೀವು (ಕಾಂಗ್ರೆಸ್ನವರು), ಭಾರತದ ಸಾರ್ವಭೌಮತೆಯ ಶಕ್ತಿ ಹಾಗೂ ಘನತೆಯನ್ನು ಜಾಗತಿಕ ಮಟ್ಟದಲ್ಲಿ ಎತ್ತಿ ಹಿಡಿದ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಪ್ರಶ್ನಿಸಲು ಹೊರಟಿದ್ದೀರಿ.ಇದು ‘ಆಕಾಶಕ್ಕೆ ಉಗುಳುವ’ ಮೂರ್ಖನ ವರ್ತನೆ ನೆನಪಿಸುತ್ತಿದೆ.
‘ತಿರಂಗಾ ಯಾತ್ರೆ’ ಬಗ್ಗೆ ಮಾತನಾಡಲು ನೈತಿಕತೆ ಇಲ್ಲ ಪಾಕಿಸ್ತಾನದ ಮೇಲೆ ಯುದ್ಧವೇ ಬೇಡ ಎಂದು ಪಾಕಿಸ್ತಾನಿ ಮಾಧ್ಯಮಗಳಿಂದ ಬೆನ್ನು ತಟ್ಟಿಸಿಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಸ್ಥಾನ ವಿದ್ವಾನ್ ರೀತಿ ಮಾತನಾಡುವ ನೀವು ರಾಷ್ಟ್ರ ಪ್ರೇಮ ಪ್ರತಿನಿಧಿಸುವ ‘ತಿರಂಗಾ ಯಾತ್ರೆ’ಯನ್ನು ವ್ಯಂಗ್ಯ ಮಾಡಿದ್ದೀರಿ. ವಿಧಾನಸೌಧದಲ್ಲಿ ‘ಪಾಕಿಸ್ತಾನ್ ಜಿಂದಾಬಾದ್’ ಎಂದು ಕೂಗುವ ನೀವು ಯಾವ ಮುಖ ಇಟ್ಟುಕೊಂಡು ‘ತಿರಂಗಾ ಯಾತ್ರೆ’ ಹಾಗೂ ಯುದ್ಧದ ಕುರಿತು ಮಾತನಾಡುತ್ತೀರಿ? ಎಂದು ಗುಡುಗಿದ್ದಾರೆ.
ಇಂದು ವಿಶ್ವಮಟ್ಟದಲ್ಲಿ ಭಾರತವನ್ನು ಮುಂಚೂಣಿ ಸ್ಥಾನಕ್ಕೆ ತಂದು ನಿಲ್ಲಿಸಿರುವ, ಭಾರತದಲ್ಲಿ ಭಯೋತ್ಪಾದನೆಯ ಬೇರು ಸಮೇತ ಕಿತ್ತೊಗೆಯುವ ಮಾದರಿ ವ್ಯೂಹಗಳನ್ನು ಭೇದಿಸಿ ನಿಂತಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಇಡೀ ವಿಶ್ವವೇ ಮೆಚ್ಚಿಕೊಂಡಿದೆ, ಶತಕೋಟಿ ಭಾರತೀಯರು ಒಪ್ಪಿಕೊಂಡಿದ್ದಾರೆ ಅವರ ನಾಯಕತ್ವವನ್ನು ಅಪ್ಪ ಮಾಡಿದ್ದಾರೆ. ಭಾರತವನ್ನು ದುಸ್ಥಿತಿಗೆ ತರಲು ಹೊರಟಿದ್ದ ಭಾರತ ಕಾಂಗ್ರೆಸ್ ಪಕ್ಷ ದೇಶದ ಜನತೆ ಇಂದು ದಯನೀಯ ಸ್ಥಿತಿಗೆ ತಲುಪಿದೆ. ಇಷ್ಟಾದರೂ ಬುದ್ಧಿ ಕಲಿಯದ ನೀವು ಕುಯುಕ್ತಿಯ ಮಾತನಾಡುವುದನ್ನು ನಿಲ್ಲಿಸುವುದೇ ಇಲ್ಲ. ಒಗ್ಗಟ್ಟಿನ ಮನೆಯಲ್ಲಿ ಒಡಕು ಮೂಡಿಸುವ, ಮತಬ್ಯಾಂಕ್ ರಾಜಕಾರಣವನ್ನು ಪೋಷಿಸಿಕೊಂಡು ಬರುವ ನಿಮ್ಮಿಂದ ಭಾರತೀಯ ಜನತಾ ಪಾರ್ಟಿ ಹಾಗೂ ಕಾರ್ಯಕರ್ತರು ಪಾಠ ಹೇಳಿಕೊಳ್ಳುವ ಪರಿಸ್ಥಿತಿ ಈ ಶತಮಾನದಲ್ಲಂತೂ ಬರುವುದಿಲ್ಲ ಎಂಬ ಸತ್ಯ ಪ್ರಚಾರಕ್ಕಾಗಿ ಒಟಗುಟ್ಟುವ ನಿಮಗೆ ತಿಳಿದಿರಲಿ ಎಂದು ವಿಜಯೇಂದ್ರ ಎಚ್ಚರಿಸಿದ್ದಾರೆ.
ಸಂತೋಷ್ ಲಾಡ್ ಹೇಳಿದ್ದೇನು? ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಇಂಡೋ ಪಾಕ್ ಯುದ್ಧ ವೇಳೆ ಗುರಿ ಸಾಧನೆಯತ್ತ ತಲುಪುವ ವೇಳೆ ಕದನವಿರಾಮ ಘೋಷಣೆ ಆಗಿದ್ದನ್ನು ಪ್ರಶ್ನಿಸಿದರು. ಈ ಬಗ್ಗೆ ಪ್ರಧಾನಿ ಮೋದಿಯವರು ಸುಪ್ರೀಂ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಸರ್ವ ಪಕ್ಷ ಸಭೆಗೆ ಬರುತ್ತಿಲ್ಲ. ಈ ಪ್ರಶ್ನೆಗಳಿಗೆ ಉತ್ತರಿಸುತ್ತಿಲ್ಲ ಎಂದು ಪ್ರಶ್ನಿಸಿ ಟೀಕಿಸಿದ್ದರು.