ಬಾಂಗ್ಲಾದಲ್ಲಿ ‘ಮೀಸಲಾತಿ’ ಹಿಂಸಾಚಾರ : ಒಂದೇ ದಿನ 18 ಸಾವು

ಬಾಂಗ್ಲಾದೇಶ : ಬಾಂಗ್ಲಾದೇಶದಲ್ಲಿ ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿ ವ್ಯವಸ್ಥೆಯ ಸುಧಾರಣೆಗೆ ಒತ್ತಾಯಿಸಿ ವಿದ್ಯಾರ್ಥಿಗಳ ನಡೆಸುತ್ತಿರುವ ಪ್ರತಿಭಟನೆ ಭುಗಿಲೆದ್ದಿದೆ. ರಾಷ್ಟ್ರ ರಾಜಧಾನಿ ಢಾಕಾ ಸೇರಿದಂತೆ ಇತರೆಡೆ ಹಿಂಸಾಚಾರ ನಡೆಯುತ್ತಿದೆ. ಗುರುವಾರ ಒಂದೇ ದಿನ ದೇಶಾದ್ಯಂತ ನಡೆದ ಗಲಾಟೆ, ಗಲಭೆಗಳಲ್ಲಿ ಕನಿಷ್ಠ 18 ಜನರು ಸಾವನ್ನಪ್ಪಿದ್ದು, 2,500ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಪ್ರತಿಭಟನೆ ಉಲ್ಭಣಗೊಂಡ ನಂತರದಲ್ಲಿ ಒಟ್ಟಾರೆ ಸಾವಿನ ಸಂಖ್ಯೆ 25ಕ್ಕೆ ಏರಿಕೆಯಾಗಿದೆ.

1971ರಲ್ಲಿ ಪಾಕಿಸ್ತಾನದಿಂದ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಯೋಧರ ಸಂಬಂಧಿಕರ ಮೀಸಲಾತಿ ಸೇರಿದಂತೆ ಸಾರ್ವಜನಿಕ ವಲಯದ ಉದ್ಯೋಗಗಳಲ್ಲಿ ಮೀಸಲಾತಿ ಸಂಬಂಧ ಹೋರಾಟ ನಡೆಯುತ್ತಿದೆ. ಕಳೆದ ಒಂದು ವಾರದಿಂದ ಢಾಕಾ ಮತ್ತು ಇತರ ನಗರಗಳಲ್ಲಿನ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ನಿರಂತರವಾಗಿ ರ್‍ಯಾಲಿಗಳನ್ನು ನಡೆಸುತ್ತಿದ್ದಾರೆ. ಗುರುವಾರ ಇದು ಹಿಂಸಾಚಾರಕ್ಕೆ ತಿರುಗಿತು. ರಾಷ್ಟ್ರವ್ಯಾಪಿ ಘರ್ಷಣೆಗಳು ನಡೆದ ಕುರಿತು ವರದಿಯಾಗಿದೆ.

ಢಾಕಾದ ರಾಂಪುರ ಪ್ರದೇಶದಲ್ಲಿ ಸರ್ಕಾರಿ ‘ಭಾಬನ್‌’ ದೂರದರ್ಶನ ಕಚೇರಿಗೂ ಪ್ರತಿಭಟನಾಕಾರರು ಮುತ್ತಿಗೆ ಹಾಕಿ, ಕಚೇರಿಗೆ ಹಾನಿ ಮಾಡಿದ್ದಾರೆ. ಹಲವಾರು ವಾಹನಗಳಿಗೂ ಬೆಂಕಿ ಹಚ್ಚಿದ್ದಾರೆ. ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ರಬ್ಬರ್ ಬುಲೆಟ್‌ಗಳು, ಅಶ್ರುವಾಯು ಮತ್ತು ಧ್ವನಿ ಗ್ರೆನೇಡ್‌ಗಳನ್ನು ಬಳಸಿದ್ದಾರೆ. ಇತರ ಪ್ರದೇಶಗಳಲ್ಲೂ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಘರ್ಷಣೆಗಳು ಉಂಟಾಗಿವೆ. ಪರಿಣಾಮ, 18 ಜನರು ಸಾವನ್ನಪ್ಪಿದ್ದಾರೆ. ಮೃತರಲ್ಲಿ ಹೆಚ್ಚಿನವರು ವಿದ್ಯಾರ್ಥಿಗಳಾಗಿದ್ದಾರೆ.

ಮೇಘಾಲಯದತ್ತ ಭಾರತೀಯರು: ಹಿಂಸಾಚಾರದಿಂದಾಗಿ ಬಾಂಗ್ಲಾದೇಶದಲ್ಲಿ ಸಿಲುಕಿದ್ದ 202 ಭಾರತೀಯರು, 101 ನೇಪಾಳಿಗರು ಮತ್ತು ಭೂತಾನ್‌ನ 7 ಮಂದಿ ಸೇರಿ 310 ಜನರು ಮೇಘಾಲಯ ಪ್ರವೇಶಿಸಿದ್ದಾರೆ. ಇದರಲ್ಲಿ ಹೆಚ್ಚಿನವರು ವಿದ್ಯಾರ್ಥಿಗಳಾಗಿದ್ದಾರೆ. ಮತ್ತೊಂದೆಡೆ, ಬಾಂಗ್ಲಾದಲ್ಲಿ ಸಿಲುಕಿರುವ ತನ್ನ ಜನರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ವಿದೇಶಾಂಗ ವ್ಯವಹಾರಗಳ ಸಚಿವಾಲಯದೊಂದಿಗೆ ಸಂಪರ್ಕದಲ್ಲಿರುವುದಾಗಿ ಅಸ್ಸಾಂ ಸರ್ಕಾರ ಹೇಳಿದೆ. ಢಾಕಾದಲ್ಲಿರುವ ಭಾರತದ ರಾಯಭಾರ ಕಚೇರಿ ಅಧಿಕಾರಿಗಳು, ಭಾರತೀಯ ಪ್ರಜೆಗಳು ಮತ್ತು ವಿದ್ಯಾರ್ಥಿಗಳಿಗೆ ನೆರವಿಗಾಗಿ 24×7 ತುರ್ತು ದೂರವಾಣಿ ಕರೆಗಳನ್ನು ಆರಂಭಿಸಿವೆ.

Leave a Reply

Your email address will not be published. Required fields are marked *