ಬೆಂಗಳೂರು: ಬೆಂಗಳೂರಿನಲ್ಲಿ ತಡರಾತ್ರಿ ಬಿಬಿಎಂಪಿಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ಬಿಬಿಎಂಪಿಯ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಫೀಲ್ಡ್ಗೆ ಇಳಿದಿದ್ದರು.ಇವರೊಂದಿಗೆ ಮೆಟ್ರೋ ಅಧಿಕಾರಿಗಳು ಸಹ ಫೀಲ್ಡ್ಗೆ ಇಳಿದಿದ್ರು. ಇದಕ್ಕೆಲ್ಲ ಕಾರಣ ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ಉಸ್ತುವಾರಿ ಸಚಿವ ಡಿ.ಕೆ ಶಿವಕುಮಾರ್ ಅವರು ನೀಡಿದ ಡೋಸ್ (ಲಸಿಕೆ) ಕಾರಣ.
ನಿಮ್ಗೆಲ್ಲ ಸೆಪ್ಟೆಂಬರ್ 15ರ ವರೆಗೆ ಮಾತ್ರ ಡೆಡ್ಲೈನ್ ಅದರ ಒಳಗೆ ರಸ್ತೆಗುಂಡಿಗಳನ್ನು ಮುಚ್ಚದಿದ್ರೆ, ಸಸ್ಪೆಂಡ್ ಮಾಡ್ತೀನಿ ಹುಷಾರ್ ಎಂದು ಎಚ್ಚರಿಕೆ ನೀಡಿದ್ದರು. ಅದರ ಪರಿಣಾಮವಾಗಿ ಬೆಂಗಳೂರಿನ ರಸ್ತೆ ಗುಂಡಿಗಳನ್ನು ಹಗಲು – ರಾತ್ರಿ ಮುಚ್ಚುತ್ತಿದ್ದಾರೆ ಬಿಬಿಎಂಪಿ ಸಿಬ್ಬಂದಿ.
ಫೀಲ್ಡ್ಗೆ ಇಳಿದ ಬಿಬಿಎಂಪಿ ಸಿಬ್ಬಂದಿ, ಕಮಿಷನರ್
ಕಳೆದ ಮೂರ್ನಾಲ್ಕು ದಿನಗಳಿಂದ ಬೀದಿಗೆ ಇಳಿದಿರುವ ಬಿಬಿಎಂಪಿಯ ಸಿಬ್ಬಂದಿ ಹಾಗೂ ಅಧಿಕಾರಿಗಳು ರಸ್ತೆಗುಂಡಿಗಳನ್ನು ಮುಚ್ಚುವುದು, ಚರಂಡಿ ಸ್ವಚ್ಛತೆ ಹಾಗೂ ರಸ್ತೆ ಬದಿಯನ್ನು ಸ್ವಚ್ಛಪಡಿಸುತ್ತಿದ್ದಾರೆ. ಇದಕ್ಕೆಲ್ಲ ಕಾರಣ ಡಿಕೆ ಶಿವಕುಮಾರ್ ಅವರು ನೀಡಿದ ಎಚ್ಚರಿಕೆ. ನಾನು ಅಮೆರಿಕಾದಿಂದ ಬರುವುದರ ಒಳಗೆ ಎಲ್ಲ ಸರಿ ಮಾಡಿರಬೇಕು ಇಲ್ಲದಿದ್ದರೆ, ಸಸ್ಪೆಂಡ್ ಮಾಡ್ತೀನಿ ಅಂತ ಡಿ.ಕೆ ಶಿವಕುಮಾರ್ ಅವರು ಎಚ್ಚರಿಕೆ ನೀಡಿದ್ದರು. ಇದರಿಂದ ಎದ್ನೋ ಬಿದ್ನೋ ಎಂದು ಬಿಬಿಎಂಪಿ ಅಧಿಕಾರಿಗಳು ಫೀಲ್ಡ್ಗೆ ಇಳಿದಿದ್ದಾರೆ. ಇನ್ನು ರಸ್ತೆಗುಂಡಿಗಳನ್ನು ಅದಷ್ಟು ಬೇಗ ಮುಚ್ಚಬೇಕು. ಕಾಲಮಿತಿಯೊಳಗಾಗಿ ಮುಚ್ಚದಿದ್ದರೆ, ಆಯಾ ಅಧಿಕಾರಿಗಳಣ್ನೇ ಹೊಣೆ ಮಾಡಲಾಗುವುದು. ಆ ಅಧಿಕಾರಿಗಳನ್ನು ಯಾವುದೇ ಮುಲಾಜಿಲ್ಲದೆ ಅಮಾನತು ಮಾಡ್ತೀನಿ ಅಂತ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಎಚ್ಚರಿಕೆ ನೀಡಿದ್ದಾರೆ.
ಡಿಕೆ ಶಿವಕುಮಾರ್ ಸೂಚನೆ ಬೆನ್ನಲ್ಲೇ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಮಂಗಳವಾರ ರಾತ್ರಿ ಜಾಗರಣೆಯನ್ನೇ ಮಾಡಿದ್ರು. ಬೆಂಗಳೂರಿನ ವಿವಿಧ ಕಾಮಗಾರಿ ಸ್ಥಳಗಳಿಗೆ ಭೇಟಿ ನೀಡಿದ ಆಯುಕ್ತರು ಅಧಿಕಾರಿಗಳಿಗೆ ಚಾಟಿ ಬೀಸಿದರು. ಬಿಬಿಎಂಪಿ ಆಯುಕ್ತರಿಗೆ ಮೆಟ್ರೋ ವ್ಯವಸ್ಥಾಪಕ ನಿರ್ದೇಶಕ ಮಹೇಶ್ವರ್ ರಾವ್, ವಲಯ ಆಯುಕ್ತ ಕರೀಗೌಡ ಸೇರಿದಂತೆ ಹಲವರು ಇದ್ದರು. ಹೆಬ್ಬಾಳದ ರಾಜಕಾಲುವೆ ಬಳಿ ಮೆಟ್ರೋ ಪಿಲ್ಲರ್ ಕಾಮಗಾರಿ ನಡೆಯುತ್ತಿದೆ. ಪಾದಚಾರಿಗಳಿ ಓಡಾಟಕ್ಕೆ ಸಮಸ್ಯೆಯಾಗದಂತೆ ಸುರಕ್ಷತಾ ಕ್ರಮ ತೆಗೆದುಕೊಳ್ಳುವಂತೆ ಮೆಟ್ರೋ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ರಸ್ತೆ ಹಾಳಾಗಿದ್ದು, ಕೂಡಲೇ ಸರಿ ಮಾಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಎಸ್ಟಿಮ್ ಮಾಲ್ ನಿಂದ ಕೆ.ಆರ್ ಪುರಂ ಮಾರ್ಗದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳದೆ ಇರುವುದಕ್ಕೆ ಗರಂ ಆದ ಆಯುಕ್ತರು ಅಧಿಕಾರಿಗಳಿಗೆ ಸ್ವಚ್ಛತೆ ಮಾಡಿಸಲು ಸೂಚಿಸಿದರು. ಕರಿಯಣ್ಣನ ಪಾಳ್ಯ, ಯೋಗೇಶ್ವರ ಬಸ್ ನಿಲ್ದಾಣ ಪರಿಶೀಲಿಸಿದ ಆಯುಕ್ತರು ಬೀದಿ ದೀಪಗಳನ್ನು ಸರಿಯಾಗಿ ನಿರ್ವಹಿಸಲು ತಿಳಿಸಿದರು. ಪಾದಚಾರಿ ಮಾರ್ಗ ಸರಿಪಡಿಸುವಂತೆ. ರಸ್ತೆಯಲ್ಲಿ ನೀರು ನಿಲ್ಲುತ್ತಿದ್ದು, ರಾಜಕಾಲುವೆಗೆ ತಡೆಗೋಡೆ ನಿರ್ಮಿಸಬೇಕು ಎಂದು ಮುಖ್ಯ ಎಂಜಿನಿಯರ್ಗೆ ಸೂಚನೆ ನೀಡಿದರು.
ವೀರಣ್ಣ ಪಾಳ್ಯ ಮೇಲ್ಸೇತುವೆ: ನಾಮಫಲಕ ತೆರವಿಗೆ ಸೂಚನೆ ಇಲ್ಲಿನ ಮೇಲ್ಸೇತುವೆ ಬಳಿ ಅಳವಡಿಸಿರುವ ದೊಡ್ಡ ನಾಮಫಲಕದಿಂದ ಸಾರ್ವಜನಿಕರಿಗೆ ಸಮಸ್ಯೆ ಆಗುತ್ತಿದೆ. ಅದನ್ನು ಕೂಡಲೇ ಅಲ್ಲಿಂದ ತೆಗೆಸಿ. ಇಲ್ಲಿ ಬೀದಿ ದೀಪಗಳನ್ನು ಅಳವಡಿಸಿ. ಮೇಲ್ಸೇತುವೆ ಭಾಗದ ಸರ್ವೀಸ್ ರಸ್ತೆ ಹಾಳಾಗಿದ್ದು, ರಾತ್ರಿಯೇ ಟಾರ್ ಹಾಕ್ಸಿ ಎಂದು ಹೇಳಿದರು. ವೀರಣ್ಣ ಪಾಳ್ಯ ಜಂಕ್ಷನ್ನಲ್ಲಿ ಮೆಟ್ರೋ ಇಲಾಖೆಯಿಂದ ಡಾಂಬರೀಕರಣ ಮಾಡಲು ಹೇಳಿದರು.