ಕೇರಳ  || ಹಿಂದೂಸ್ಥಾನವು ಎಂದೂ ಮರೆಯದ ಹಾಡಿನ ಖ್ಯಾತ ಗಾಯಕ ನಿಧನ || ಪಿ.ಜಯಚಂದ್ರನ್ ಕಣ್ಮರೆ

ಕೇರಳ || ಹಿಂದೂಸ್ಥಾನವು ಎಂದೂ ಮರೆಯದ ಹಾಡಿನ ಖ್ಯಾತ ಗಾಯಕ ನಿಧನ || ಪಿ.ಜಯಚಂದ್ರನ್ ಕಣ್ಮರೆ

ತ್ರಿಶೂರ್(ಕೇರಳ): ಕನ್ನಡ ಸೇರಿದಂತೆ ದೇಶದ ವಿವಿಧ ಭಾಷೆಗಳಲ್ಲಿ 16 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದ ಸುಪ್ರಸಿದ್ಧ ಹಿರಿಯ ಹಿನ್ನೆಲೆ ಗಾಯಕ ಪಿ.ಜಯಚಂದ್ರನ್ (80) ಗುರುವಾರ ಸಂಜೆ ಇಲ್ಲಿನ ಖಾಸಗಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ‘ಭಾವ ಗಾಯಕ’ರೆಂದೇ ಖ್ಯಾತಿ ಪಡೆದಿದ್ದ ಇವರು ಪ್ರೀತಿ, ಭಕ್ತಿಯ ಭಾವನೆಗಳನ್ನು ತುಂಬಿ ಅತ್ಯಂತ ಸೊಗಸಾಗಿ ಹಾಡುತ್ತಿದ್ದರು.

ಗುರುವಾರ ತಮ್ಮ ನಿವಾಸದಲ್ಲಿ ಕುಸಿದು ಬಿದ್ದ ಜಯಚಂದ್ರನ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಕೆಲವು ದಿನಗಳಿಂದ ಅಸ್ವಸ್ಥರಾಗಿದ್ದರು ಎಂದು ಕುಟುಂಬ ಮೂಲಗಳಿಂದ ತಿಳಿದು ಬಂದಿದೆ. ಸಂಜೆ ಸುಮಾರು 7.55ಕ್ಕೆ ನಿಧನ ಹೊಂದಿದರು ಎಂದು ಆಸ್ಪತ್ರೆ ಮೂಲಗಳು ಮಾಹಿತಿ ನೀಡಿವೆ. ಮೃತರು ಪತ್ನಿ ಲಲಿತಾ, ಮಗಳು ಲಕ್ಷ್ಮೀ ಮತ್ತು ಮಗ ಗಾಯಕ ದೀನನಾಥನ್ ಅವರನ್ನು ಅಗಲಿದ್ದಾರೆ.

16,000ಕ್ಕೂ ಹೆಚ್ಚು ಗೀತೆಗಳಿಗೆ ಧ್ವನಿಯಾಗಿದ್ದ ಜಯಚಂದ್ರನ್: ಜಯಚಂದ್ರನ್ ಅವರು ಕನ್ನಡ, ಮಲಯಾಳಂ, ತಮಿಳು, ತೆಲುಗು ಮತ್ತು ಹಿಂದಿ ಭಾಷೆಯಲ್ಲಿ 16,000ಕ್ಕೂ ಹೆಚ್ಚು ಗೀತೆಗಳನ್ನು ಹಾಡಿದ್ದರು. ಈ ಮೂಲಕ ಭಾರತೀಯ ಸಂಗೀತ ಕ್ಷೇತ್ರಕ್ಕೆ ಅನನ್ಯ ಕೊಡುಗೆ ನೀಡಿದ್ದಾರೆ. ಅತ್ಯುತ್ತಮ ಹಿನ್ನೆಲೆ ಗಾಯಕನನ್ನು ಸಾಕಷ್ಟು ಪ್ರಶಸ್ತಿ, ಗೌರವಗಳು ಅರಸಿಕೊಂಡು ಬಂದಿವೆ. ರಾಷ್ಟ್ರೀಯ ಫಿಲ್ಮ್ ಪ್ರಶಸ್ತಿಗಳು ಹಾಗು ಕೇರಳ ಸರ್ಕಾರ ಪ್ರತಿಷ್ಟಿತ ಜೆ.ಸಿ.ಜೇನಿಯಲ್ ಪ್ರಶಸ್ತಿ ನೀಡಿ ಗೌರವಿಸಿದೆ. ಇದಲ್ಲದೇ, 5 ಬಾರಿ ಕೇರಳ ರಾಜ್ಯ ಸಿನಿಮಾ ಪ್ರಶಸ್ತಿ ಪಡೆದಿದ್ದಾರೆ. 2 ಬಾರಿ ತಮಿಳುನಾಡು ರಾಜ್ಯ ಸಿನಿಮಾ ಪ್ರಶಸ್ತಿ ದೊರೆತಿದೆ. ಶ್ರೀ ನಾರಾಯಣ ಗುರು ಸಿನಿಮಾದಲ್ಲಿನ ‘ಶಿವ ಶಂಕರ ಶರಣ ಸರ್ವ ವಿಭೋ’ ಪ್ರದರ್ಶನಕ್ಕಾಗಿ ಇವರಿಗೆ ರಾಷ್ಟ್ರೀಯ ಪ್ರಶಸ್ತಿ ಸಂದಿತ್ತು.

ಪಿ.ಜಯಚOದ್ರನ್ ಹಾಡಿರುವ ಕನ್ನಡ ಸೂಪರ್ ಹಿಟ್ ಗೀತೆಗಳು:

ಹಿಂದೂಸ್ಥಾನವು ಎಂದೂ ಮರೆಯದ (ಅಮೃತ ಘಳಿಗೆ ಸಿನಿಮಾ)

ಮಂದಾರ ಪುಷ್ಪವು ನೀನು (ರಂಗನಾಯಕಿ)

ಕನ್ನಡ ನಾಡಿನ ಕರಾವಳಿ (ಮಸಣದ ಹೂವು)

ಕಾಲ್ಗೆಜ್ಜೆ ತಾಳಕ್ಕೆ (ಮುನಿಯನ ಮಾದರಿ)

ಚಂದ ಚಂದ (ಮಾನಸ ಸರೋವರ)

ಪ್ರೇಮದ ಶ್ರುತಿ ಮೀಟಿದೆ (ಗಣೇಶನ ಮದುವೆ)

ಜೀವನ ಸಂಜೀವನ (ಹಂತಕನ ಸಂಚು)

ಇರಿOಜಲಕುಡದ ಕ್ರೈಸ್ಟ್ ಕಾಲೇಜಿನಲ್ಲಿ ಸಸ್ಯಶಾಸ್ತ್ರದಲ್ಲಿ ಪದವಿ ಪೂರ್ಣಗೊಳಿಸಿದ ಬಳಿಕ ಇವರು ಚೆನ್ನೈನ ಖಾಸಗಿ ಉದ್ದಿಮೆಯಲ್ಲಿ ಕಾರ್ಯ ನಿರ್ವಹಿಸಿದ್ದರು. ಈ ಸಂದರ್ಭದಲ್ಲಿ ಚೆನ್ನೈನಲ್ಲಿ ನಡೆದ ಸಂಗೀತ ಕಾರ್ಯಕ್ರಮವೊಂದರಲ್ಲಿ ಜಯಚಂದ್ರನ್ ಅವರ ಪ್ರತಿಭೆ ಗುರುತಿಸಿದ ಸಿನಿಮಾ ನಿರ್ಮಾಪಕರಾದ ಸೋಭನಾ ಪರಮೇಶ್ವರನ್ ನಾಯರ್ ಮತ್ತು ನಿರ್ದೇಶಕ ಎ.ವಿನ್ಸೆಂಟ್ ಅವರು ಜಯಚಂದ್ರನ್ ಅವರಿಗೆ ಸಿನಿಮಾದಲ್ಲಿ ಹಾಡುವ ಅವಕಾಶ ನೀಡಿದ್ದರು. 1965ರಲ್ಲಿ ತೆರೆಗೆ ಬಂದ ‘ಕುಂಜಲಿ ಮರಕ್ಕರ್’ ಸಿನಿಮಾದಲ್ಲಿ ಪ್ರಸಿದ್ಧ ಸಾಹಿತಿ ಪಿ. ಭಾಸ್ಕರನ್ ವಿರಚಿತ ‘ಒರು ಮುಲ್ಲಪ್ಪೋ ಮಲಯುಮಯಿ’ ಎಂಬ ಹಾಡು ಹಾಡಿದ್ದರು. ಈ ಮೂಲಕ ಸಿನಿಮಾ ಕ್ಷೇತ್ರಕ್ಕೆ ಅಧಿಕೃತವಾಗಿ ಇವರ ಪದಾರ್ಪಣೆಯಾಯಿತು. ಆದರೆ, ‘ಕಲಿತೋಜನ್’ ಸಿನಿಮಾದ ಸಿನಿಮಾದ ಮಂಜಲಿಯಿಲ್ ಮುಂಗಿತೋರ್ತಿ ಇವರ ಮೊದಲು ಬಿಡುಗಡೆಯಾದ ಸಿನಿಮಾ ಹಾಡಾಗಿದೆ.

1944ರ ಮಾರ್ಚ್ 3ರಂದು ಕೇರಳದ ಎರ್ನಾಕುಲಂನಲ್ಲಿ ಜಯಚಂದ್ರನ್ ಜನಿಸಿದ್ದರು. ಇವರು ರವಿ ವರ್ಮಾ ಕೊಚನಿಯನ್ ತಂಪುರನ್ ಮತ್ತು ಸುಭದ್ರ ಕುಜಮ್ಮ ದಂಪತಿಯ ಮೂರನೇ ಪುತ್ರ.

ಹೈಸ್ಕೂಲ್ ದಿನಗಳಿಂದಲೇ ಸಂಗೀತ ಪಯಣ ಆರಂಭಿಸಿದ್ದ ಇವರು, ಮೃದಂಗ ಬಾರಿಸುವುದರೊಂದಿಗೆ ಸರಳ ಶಾಸ್ತ್ರೀಯ ಸಂಗೀತಗಳನ್ನು ಹಾಡುತ್ತಿದ್ದರು. 1958ರಲ್ಲಿ ರಾಜ್ಯ ಮಟ್ಟದ ಕಲೋತ್ಸವಂನಲ್ಲಿ ನಡೆದ ಮೃದಂಗ ಸ್ಪರ್ಧೆಯಲ್ಲಿ ಜಯಚಂದ್ರನ್ ಮೊದಲ ಸ್ಥಾನ ಪಡೆದಿದ್ದರು. ಈ ಸಂದರ್ಭದಲ್ಲಿ ಸುಪ್ರಸಿದ್ಧ ಹಿನ್ನೆಲೆ ಗಾಯಕ ಕೆ.ಜೆ.ಯೇಸುದಾಸ್ ಅವರನ್ನು ಜಯಚಂದ್ರನ್ ಭೇಟಿಯಾಗಿದ್ದರು. ಅದೇ ವರ್ಷ ಯೇಸುದಾಸ್ ಅವರು ಶಾಸ್ತ್ರೀಯ ಸಂಗೀತದಲ್ಲಿ ಮೊದಲ ಸ್ಥಾನ ಪಡೆದಿದ್ದರು.

ಮುಂದೆ ಜಯಚಂದ್ರನ್ ಹೆಸರಾಂತ ಸಂಗೀತ ನಿರ್ದೇಶಕರುಗಳಾದ ಜಿ.ದೇವರಾಜನ್, ಎಂ.ಎಸ್.ಬಾಬುರಾಜ್, ವಿ.ದಕ್ಷಿಮಾ ಮೂರ್ತಿ, ಕೆ.ರಾಘವನ್, ಇಳಿಯರಾಜ, ಎ.ಆರ್.ರಹಮಾನ್, ವಿದ್ಯಾಸಾಗರ್ ಸೇರಿದಂತೆ ಹಲವು ದಿಗ್ಗಜರೊಂದಿಗೆ ಕೆಲಸ ಮಾಡಿದ್ದರು.

ನಾಳೆ ಅಂತ್ಯಸOಸ್ಕಾರ: ಜಯಚಂದ್ರನ್ ಅವರ ಪಾರ್ಥಿವ ಶರೀರವನ್ನು ತ್ರಿಶೂರ್‌ನ ಪೂಮ್‌ಕುನ್ನಮ್‌ಗೆ ಇಂದು ಕೊಂಡೊಯ್ಯಲಿದ್ದು, ಸಾಹಿತ್ಯ ಆಕಾಡೆಮಿ ಹಾಲ್‌ನಲ್ಲಿ ಸಾರ್ವಜನಿಕ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಶನಿವಾರ ಸಂಜೆ 3 ಗಂಟೆಗೆ ಚೆಂಡಮOಗಲOನ ತಮ್ಮ ಪೂರ್ವಿಕರ ಮನೆಯ ಪರಿಸರದಲ್ಲಿ ಅಂತ್ಯಸOಸ್ಕಾರ ನಡೆಯಲಿದೆ.

ಗಣ್ಯರ ಸಂತಾಪ: ಜಯಚಂದ್ರನ್ ನಿಧನಕ್ಕೆ ಕೇರಳ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್, ಸಿಎಂ ಪಿಣರಾಯಿ ವಿಜಯನ್, ಪ್ರತಿಪಕ್ಷದ ನಾಯಕರು ಸೇರಿದಂತೆ ದೇಶ, ವಿದೇಶದ ಗಣ್ಯಾತಿಗಣ್ಯರು, ಅಪಾರ ಅಭಿಮಾನಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *