ಡೆಹ್ರಾಡೂನ್: ಮದುವೆ, ವಿಚ್ಛೇದನ, ಉತ್ತರಾಧಿಕಾರ ಮತ್ತು ಆಸ್ತಿ ಹಕ್ಕು ವಿಚಾರ ಸೇರಿದಂತೆ ಎಲ್ಲಾ ಧರ್ಮೀಯರಿಗೂ ಒಂದೇ ಕಾನೂನು ಜಾರಿಗೆ ಅವಕಾಶ ಮಾಡಿಕೊಡುವ ಏಕರೂಪ ನಾಗರಿಕ ಸಂಹಿತೆ ಉತ್ತರಾಖಂಡದಲ್ಲಿ ಇಂದಿನಿಂದ ಜಾರಿಗೆ ಬಂದಿದೆ.
ಸ್ವಾತಂತ್ರ್ಯಾನಂತರದಲ್ಲಿ ರಾಜ್ಯವೊಂದರಲ್ಲಿ ಯುಸಿಸಿ ಕಾಯ್ದೆ ಜಾರಿಯಾಗುತ್ತಿರುವುದು ಇದೇ ಮೊದಲು. ಕೇಂದ್ರದ ಆಡಳಿತಾರೂಢ ಬಿಜೆಪಿ ಸರ್ಕಾರದ ಮಹತ್ವಾಕಾಂಕ್ಷೆ ಘೋಷಣೆಗಳ ಪೈಕಿ ಒಂದಾದ ಈ ಕಾಯ್ದೆಯನ್ನು ಇದೀಗ ಬಿಜೆಪಿ ಆಡಳಿತದ ರಾಜ್ಯವಾದ ಉತ್ತರಾಖಂಡದಲ್ಲಿ ಜಾರಿ ಮಾಡಲಾಗಿದೆ.
ಸರ್ಕಾರದ ನಿರ್ಧಾರವನ್ನು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಸಮರ್ಥಿಸಿದ್ದು ಏಕರೂಪ ನಾಗರಿಕ ಸಂಹಿತೆಯು ಧರ್ಮ, ಲಿಂಗ, ಜಾತಿ ಅಥವಾ ಸಮುದಾಯದ ಭೇದ ಇಲ್ಲದ ಸಾಮರಸ್ಯದ ಸಮಾಜಕ್ಕೆ ಅಡಿಪಾಯ ಹಾಕುತ್ತದೆ ಎಂದು ಹೇಳಿದ್ದಾರೆ
ಪರಿಶಿಷ್ಟ ಪಂಗಡಗಳು ಮತ್ತು ಕೆಲವು ಸಂರಕ್ಷಿತ ಸಮುದಾಯಗಳನ್ನು ಹೊರತು ಪಡಿಸಿ ರಾಜ್ಯದ ಎಲ್ಲಾ ನಿವಾಸಿಗಳಿಗೆ ಏಕರೂಪದ ನಾಗರಿಕ ಸಂಹಿತೆ ಅನ್ವಯವಾಗುತ್ತದೆ. ಹೊಸ ಕಾಯ್ದೆ ಜಾರಿಗೊಳಿಸುವ ಸಂಬಂಧ ರಾಜ್ಯ ಸರ್ಕಾರ ಅಧಿಕಾರಿಗಳಿಗೆ ತರಬೇತಿ ನೀಡಿದೆ.
2022ರ ವಿಧಾನಸಭಾ ಚುನಾವಣೆಯಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ ಮಾಡಲಾಗುವುದು ಎಂದು ಪ್ರಣಾಳಿಕೆಯಲ್ಲಿ ತಿಳಿಸಿತ್ತು. ರಾಜ್ಯದಲ್ಲಿ ಎರಡನೇ ಬಾರಿಗೆ ಪಕ್ಷ ಅಧಿಕಾರಕ್ಕೆ ಬಂದ ಹಿನ್ನೆಲೆಯಲ್ಲಿ ಈ ಕಾಯ್ದೆಯನ್ನು ಇದೀಗ ಜಾರಿಗೆ ತರಲಾಗುತ್ತಿದೆ.
ಏಕರೂಪದ ನಗರಿಕ ಸಂಹಿತೆಯಲ್ಲಿ ಏನಿದೆ?
ಮದುವೆ ಮತ್ತು ವಿಚ್ಛೇದನ: ಈ ಕಾಯಿದೆಯು ಪುರುಷರು ಮತ್ತು ಮಹಿಳೆಯರಿಗೆ (ಕ್ರಮವಾಗಿ 21 ಮತ್ತು 18 ವರ್ಷಗಳು) ಮದುವೆಯ ಕಾನೂನುಬದ್ಧ ವಯಸ್ಸನ್ನು ಪ್ರಮಾಣೀಕರಿಸುತ್ತದೆ ಮತ್ತು ಎಲ್ಲಾ ಧರ್ಮಗಳಲ್ಲಿ ವಿಚ್ಛೇದನಕ್ಕೆ ಏಕರೂಪದ ಆಧಾರಗಳು ಮತ್ತು ಕಾರ್ಯವಿಧಾನಗಳನ್ನು ಕಡ್ಡಾಯಗೊಳಿಸುತ್ತದೆ.
ಬಹುಪತ್ನಿತ್ವ ನಿಷೇಧ: ಯುಸಿಸಿ ಅನ್ವಯವಾಗುವ ಸಮುದಾಯಗಳಲ್ಲಿ ಬಹುಪತ್ನಿತ್ವವನ್ನು ನಿಷೇಧಿಸಲಾಗಿದೆ.
ವಿವಾಹ ನೋಂದಣಿ: ಕಾಯ್ದೆ ಜಾರಿಯಾದ ನಂತರ ನಡೆಸುವ ವಿವಾಹಗಳನ್ನು 60 ದಿನಗಳ ಒಳಗೆ ನೋಂದಾಯಿಸಬೇಕು, ಪ್ರಕ್ರಿಯೆಯನ್ನು ಸರಳಗೊಳಿಸಲು ಆನ್ಲೈನ್ ಸೌಲಭ್ಯಗಳು ಲಭ್ಯವಿದೆ.
ಲಿವ್-ಇನ್ ಸಂಬಂಧಗಳು: ಮದುವೆಯಂತೆ ಲಿವ್-ಇನ್ ಸಂಬಂಧ ನೋಂದಣಿ ಕಡ್ಡಾಯ. ಇದು ಉತ್ತರಾಖಂಡದಲ್ಲಿ ನೆಲೆಸಿರುವ ಅಥವಾ ಅನ್ಯ ರಾಜ್ಯಗಳಲ್ಲಿ ನೆಲೆಸಿರುವ ಉತ್ತರಾಖಂಡ ಮೂಲದವರಿಗೆ ಅನ್ವಯ. ಇದರಡಿ ಇಬ್ಬರ ಹೆಸರು, ವಯಸ್ಸಿನ ಸಾಕ್ಷಿ, ದೇಶ, ಧರ್ಮ, ಹಿಂದಿನ ಸಂಬಂಧ, ಸಂಪರ್ಕ ಸಂಖ್ಯೆ ಕುರಿತ ಮಾಹಿತಿಯನ್ನು ನೀಡಬೇಕು. ಇಂತಹ ಸಂಬಂಧದಿಂದ ಮಗು ಜನಿಸಿದರೆ ಜನನ ಪ್ರಮಾಣ ಪತ್ರ ದೊರೆತ 7 ದಿನಗಳೊಳಗಾಗಿ ಕಡ್ಡಾಯವಾಗಿ ನೋಂದಣಿ ಮಾಡಿಸಬೇಕಾಗುತ್ತದೆ.
ಉತ್ತರಾಧಿಕಾರ ಉಯಿಲುಗಳು: ಉಯಿಲು ಬರೆಯುವವರು ತಮ್ಮ ಹಾಗೂ ಉತ್ತರಾಧಿಕಾರಿಯ ಆಧಾರ್ ಮಾಹಿತಿ ಸೇರಿದಂತೆ ಸಂಪೂರ್ಣ ಮಾಹಿತಿಯನ್ನು ನೀಡಬೇಕು. 2 ಸಾಕ್ಷಿಗಳು ಉಯಿಲು ಪತ್ರವನ್ನು ಓದುವ ವಿಡಿಯೋವನ್ನೂ ಅಪ್ಲೋಡ್ ಮಾಡಬೇಕಾಗುತ್ತದೆ.
ಯುದ್ಧದಲ್ಲಿ ಭಾಗವಹಿಸಿದ ಸೈನಿಕರು, ವಾಯುಪಡೆಯ ಸಿಬ್ಬಂದಿ ಮತ್ತು ನಾವಿಕರು ವಿಶೇಷ ನಿಬಂಧನೆಗಳ ಅಡಿಯಲ್ಲಿ ವಿಶೇಷ ಸವಲತ್ತು ಪಡೆದ ವಿಲ್ಗಳನ್ನು ರಚಿಸಲು ಅನುಮತಿ ಇದೆ.