ದೆಹಲಿ : ಮನಾಲಿಗೆ ಪ್ರವಾಸಕ್ಕೆ ಹೋಗಲು ಹಣ ಹೊಂದಿಸುವ ಸಲುವಾಗಿ ದೆಹಲಿಯ 8 ಹುಡುಗರು ಸೇರಿ ಸುಲ್ತಾನಪುರಿ ಪ್ರದೇಶದ ಒಂದು ಕಿರಾಣಿ ಅಂಗಡಿಗೆ ದಾಳಿ ಮಾಡಿ ದರೋಡೆ ಮಾಡಿದ್ದಾರೆ. ಈ ಕುರಿತು ಅಂಗಡಿಯ ಮಾಲೀಕ ನೀಡಿದ ದೂರಿನ ಮೇಲೆ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿ ಆರು ಆರೋಪಿಗಳನ್ನು ಬಂಧಿಸಿದ್ದಾರೆ. ಈವರೆಗಿನ ತನಿಖೆಯಲ್ಲಿ ಇಬ್ಬರು ಅಪ್ರಾಪ್ತರು ಎಂಬುದು ತಿಳಿದುಬಂದಿದೆ. ಅವರನ್ನು ರಿಮಾಂಡ್ ಗೃಹಕ್ಕೆ ಕಳುಹಿಸಲಾಗುತ್ತಿದೆ.

ಮಂಗೋಲ್ಪುರಿ ಮತ್ತು ಸುಲ್ತಾನಪುರಿಯಲ್ಲಿ ನಡೆಸಿದ ದಾಳಿ ವೇಳೆ ವಿಕಾಸ್ (18), ಹರ್ಷ್ (18), ಸೌರವ್ ಅಕಾ ‘ಹಗದಿಪೋ’ (18), ಮತ್ತು ಹಿಮೇಶ್ (19) ಜೊತೆಗೆ ಇಬ್ಬರು ಅಪ್ರಾಪ್ತರನ್ನು ಬಂಧಿಸಲಾಗಿದೆ. ಈ ಆರೋಪಿಗಳು ತಮ್ಮ ಸ್ನೇಹಿತರ ಜೊತೆ ಮನಾಲಿಗೆ ಪ್ರವಾಸಕ್ಕೆ ಹೋಗಲು ಹಣ ಬೇಕು ಎಂಬ ಕಾರಣದಿಂದ ದರೋಡೆ ಮಾಡಲು ಮುಂದಾಗಿದ್ದರು.
ಶುಕ್ರವಾರ, ಒಂದು ಕಿರಾಣಿ ಅಂಗಡಿಯ ಮಾಲೀಕ ತನ್ನ ಅಂಗಡಿಗೆ ಕೆಲ ಅಪರಿಚಿತ ಹುಡುಗರು ಬಂದು ಗನ್ ತೋರಿಸಿ ನಗದು ಲೂಟಿ ಮಾಡಿದರೆಂದು ದೂರು ನೀಡಿದರು. ಈ ವೇಳೆ ಚಾಕು ತೋರಿಸಿ ಜೀವಹಾನಿಯ ಬೆದರಿಕೆ ಕೂಡ ನೀಡಲಾಗಿತ್ತು. ಪ್ರಕರಣವನ್ನು ಭಾರತೀಯ ದಂಡ ಸಂಹಿತೆ ಮತ್ತು ಶಸ್ತ್ರಾಸ್ತ್ರ ಅಧಿನಿಯಮದ ಅನ್ವಯ ಸುಲ್ತಾನಪುರಿ ಪೊಲೀಸ್ ಠಾಣೆಯಲ್ಲಿ ಪ್ರಕಣ ದಾಖಲಿಸಲಾಗಿದೆ.
ಬಂಧಿತ ವಿಕಾಸ್ ಎಂಬಾತ ಹಿಂದೆ ಒಂದು ಕೊಲೆಗೆ ಯತ್ನ ಪ್ರಕರಣದಲ್ಲಿ ಭಾಗಿಯಾಗಿದ್ದನು ಎಂಬ ಮಾಹಿತಿ ದೊರೆತಿದೆ. ಈ ಬಂಧನದೊಂದಿಗೆ ಕಂಜಾವಾಲಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಇನ್ನೊಂದು ಪ್ರಕರಣಕ್ಕೂ ಸಂಬಂಧ ಹೊಂದಿರುವುದು ಸ್ಪಷ್ಟವಾಗಿದೆ.
ಇನ್ನುಳಿದ ಆರೋಪಿಗಳ ಪತ್ತೆಗೆ ಹುಡುಕಾಟ ನಡೆಸಲಾಗಿದೆ. ಲೂಟಿ ಮಾಡಲಾದ ಉಳಿದ ಆಸ್ತಿಯ ಪತ್ತೆ ಕಾರ್ಯ ನಡೆಯುತ್ತಿದೆ. ಅಪ್ರಾಪ್ತ ಆರೋಪಿಗಳನ್ನು ಸುಧಾರಣಾ ಗೃಹಕ್ಕೆ ಕಳುಹಿಸಲು ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಎಲ್ಲ ಬಂಧಿತರಿಂದ ಇನ್ನೂ ವಿಚಾರಣೆ ನಡೆಯುತ್ತಿದೆ.