ಶ್ರೀನಗರ || ಮತ್ತೇ ಕಣಿವೆ ನಾಡಿನಲ್ಲಿ ಗುಂಡಿನ ಕಾಳಗ : ಪಾಕ್ ಉಗ್ರರಿಗೆ ಬುದ್ದಿಕಲಿಸಿದ ಭಾರತೀಯ ಸೇನೆ

ಶ್ರೀನಗರ || ಮತ್ತೇ ಕಣಿವೆ ನಾಡಿನಲ್ಲಿ ಗುಂಡಿನ ಕಾಳಗ || ಪಾಕ್ ಉಗ್ರರಿಗೆ ಬುದ್ದಿಕಲಿಸಿದ ಭಾರತೀಯ ಸೇನೆ

ಶ್ರೀನಗರ (ಜಮ್ಮು ಕಾಶ್ಮೀರ): ಇಲ್ಲಿನ ಉತ್ತರ ಕಾಶ್ಮೀರದ ಬಂಡಿಪೋರಾದಲ್ಲಿ ಶುಕ್ರವಾರ ಮುಂಜಾನೆ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ಗುಂಡಿನ ಚಕಮಕಿ ನಡೆದಿದೆ. ಬಂಡಿಪೋರಾದ ಕುಲ್ನಾರ್ ಅಜಾಸ್ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ವೇಳೆ ಭದ್ರತಾ ಪಡೆಗಳು ಮತ್ತು ಅಡಗಿಕೊಂಡಿರುವ ಭಯೋತ್ಪಾದಕರ ನಡುವೆ ಗುಂಡಿನ ಕಾಳಗ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ಬಂಡಿಪೋರಾದ ಜಿಲ್ಲೆಯ ಕಾಡು ಪ್ರದೇಶದಲ್ಲಿ ಸೇನೆಯು ಶೋಧ ಕಾರ್ಯಾಚರಣೆ ಪ್ರಾರಂಭಿಸಿದ್ದು, ನಂತರ ಎನ್‌ಕೌಂಟರ್ ಪ್ರಾರಂಭವಾಯಿತು. ಶುಕ್ರವಾರ ಬೆಳಗಿನ ಜಾವ ಗುಂಡಿನ ಚಕಮಕಿ ಶುರುವಾಗಿದ್ದು, ಬಳಿಕ ಹೆಚ್ಚುವರಿ ಸೇನಾ ಪಡೆಗಳನ್ನು ಆ ಪ್ರದೇಶಕ್ಕೆ ರವಾನಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಹಲ್ಗಾಮ್‌ನ ದಟ್ಟ ಕಾಡುಗಳಲ್ಲಿನ ಎತ್ತರದ ಹುಲ್ಲುಗಾವಲಿನಲ್ಲಿ ಭಯೋತ್ಪಾದಕರು ೨೬ ಪ್ರವಾಸಿಗರನ್ನು ಕೊಂದ ಘಟನೆ ಮಾಸುವ ಮುನ್ನವೇ ಮತ್ತೆ ಕಾಶ್ಮೀರಲ್ಲಿ ಎನ್‌ಕೌಂಟರ್ ಆರಂಭವಾಗಿದೆ. ಪ್ರವಾಸಿಗರ ಸಾಮೂಹಿಕ ಹತ್ಯೆ ಹಿನ್ನೆಲೆಯಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವಿನ ನೀರು ಹಂಚಿಕೆಯ ಸಿಂಧೂ ಜಲ ಒಪ್ಪಂದವನ್ನು ಅಮಾನತು ಮಾಡುವುದು ಸೇರಿದಂತೆ ಭಾರತವು ಹಲವು ಕಟ್ಟುನಿಟ್ಟಿನ ಕ್ರಮಗಳನ್ನು ಘೋಷಿಸಿದೆ. ಇದೀಗ ಎರಡೂ ದೇಶಗಳ ನಡುವೆ ಉದ್ವಿಗ್ನತೆ ಹೆಚ್ಚಿದೆ.

ಇದಕ್ಕೂ ಮುನ್ನ ಸೋಮವಾರ, ಉರಿ ಗ್ರಾಮದಲ್ಲಿ ಗಡಿ ನಿಯಂತ್ರಣ ರೇಖೆಯಲ್ಲಿ ಕಾಶ್ಮೀರವನ್ನು ಪ್ರವೇಶಿಸುತ್ತಿದ್ದ ಇಬ್ಬರು ಭಯೋತ್ಪಾದಕರನ್ನು ಸೇನೆಯು ಹೊಡೆದುರುಳಿಸಿತ್ತು. ದಾಳಿ ಬಳಿಕ ಪ್ರದೇಶದಾದ್ಯಂತ ಭದ್ರತೆ ಹೆಚ್ಚಿಸಲಾಗಿತ್ತು. ಇತ್ತ, ಪಹಲ್ಗಾಮ್ ದಾಳಿಗೆ ಕಾರಣರಾದ ಭಯೋತ್ಪಾದಕರ ಸದೆಬಡಿಯಲು ಶೋಧ ಕಾರ್ಯಾಚರಣೆ ಜಾರಿಯಲ್ಲಿದೆ.

ಈಗಾಗಲೇ, ಮೂವರು ವಾಂಟೆಡ್ ಭಯೋತ್ಪಾದಕರ ಪೋಸ್ಟರ್‌ಗಳನ್ನು ಪೊಲೀಸರು ಬಿಡುಗಡೆ ಮಾಡಿದ್ದು, ಅವರ ಬಗ್ಗೆ ಮಾಹಿತಿ ನೀಡುವವರಿಗೆ ತಲಾ ೨೦ ಲಕ್ಷ ರೂ. ಬಹುಮಾನ ಘೋಷಿಸಿದ್ದಾರೆ.

Leave a Reply

Your email address will not be published. Required fields are marked *