ಹೈದರಾಬಾದ್ || IAS ಅಧಿಕಾರಿ Smita Sabharwal ವರ್ಗಾವಣೆ

ಹೈದರಾಬಾದ್ || IAS ಅಧಿಕಾರಿ Smita Sabharwal ವರ್ಗಾವಣೆ

ಹೈದರಾಬಾದ್: ತೆಲಂಗಾಣದ ಸರ್ಕಾರ ಆಡಳಿತ ಯಂತ್ರದಲ್ಲಿ ಬದಲಾವಣೆಗಳನ್ನು ಮಾಡಿದೆ. ಭಾನುವಾರ 20 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶವನ್ನು ಹೊರಡಿಸಿದೆ. 2001ನೇ ಬ್ಯಾಚ್ನ ಐಎಎಸ್ ಅಧಿಕಾರಿ ಸ್ಮಿತಾ ಸಭರ್ವಾಲ್ ಸಹ ವರ್ಗಾವಣೆಗೊಂಡಿದ್ದಾರೆ. ಕೆಲವು ದಿನಗಳ ಹಿಂದೆ ಐಎಎಸ್ ಅಧಿಕಾರಿ ಸ್ಮಿತಾ ಸಭರ್ವಾಲ್ ಎಐ ಚಿತ್ರವನ್ನು ಶೇರ್ ಮಾಡುವ ಮೂಲಕ ಸೈಬರ್ ಕ್ರೈಂ ಪೊಲೀಸರ ತನಿಖೆಯನ್ನು ಸಹ ಎದುರಿಸಿದ್ದರು.

ಐಎಎಸ್ ಅಧಿಕಾರಿ ಸ್ಮಿತಾ ಸಭರ್ವಾಲ್ ತೆಲಂಗಾಣ ಸರ್ಕಾರದ ಯುವ ಅಭಿವೃದ್ಧಿ, ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಇಲಾಖೆ ವಿಶೇಷ ಮುಖ್ಯ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದರು. ಅವರನ್ನು ತತ್ಕ್ಷಣದಿಂದ ಜಾರಿಗೆ ಬರುವಂತೆ ಮತ್ತು ಮುಂದಿನ ಆದೇಶದ ತನಕ ಸದಸ್ಯ ಕಾರ್ಯದರ್ಶಿ, ತೆಲಂಗಾಣ ಹಣಕಾಸು ಆಯೋಗ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.

ಕೆಲವು ದಿನಗಳ ಹಿಂದೆ ಹೈದರಾಬಾದ್ ವಿಶ್ವವಿದ್ಯಾಲಯದ ಕ್ಯಾಂಪಸ್ನಲ್ಲಿರುವ ಅರಣ್ಯವನ್ನು ನಾಶಗೊಳಿಸುವ ಪ್ರಕರಣ ದೇಶಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿತ್ತು. ಸುಮಾರು 400 ಎಕರೆ ಅರಣ್ಯ ಭೂಮಿಯ ಹರಾಜು ಕ್ರಮವನ್ನು ವಿರೋಧಿಸಿ ಬೃಹತ್ ಹೋರಾಟ ನಡೆದಿತ್ತು. ಅರಣ್ಯ ಭೂಮಿಯನ್ನು ಉಳಿಸುವಂತೆ ಸುಪ್ರೀಂಕೋರ್ಟ್ಗೆ ಸಹ ಅರ್ಜಿ ಸಲ್ಲಿಸಲಾಗಿತ್ತು. ಮಾರ್ಚ್ 31ರಂದು ಐಎಎಸ್ ಅಧಿಕಾರಿ ಸ್ಮಿತಾ ಸಭರ್ವಾಲ್ ಅರಣ್ಯ ಪ್ರದೇಶದ ಮಣ್ಣು ತೆಗೆಯುವ, ಜಿಂಕೆ ಮತ್ತು ನವಿಲುಗಳು ಓಡಿ ಹೋಗುವ ಚಿತ್ರವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಚಿತ್ರ ಇದಾಗಿದ್ದು, ಸಮಾಜಕ್ಕೆ ತಪ್ಪು ಸಂದೇಶ ನೀಡುತ್ತಿದೆ ಎಂದು ಆರೋಪಿಸಲಾಗಿತ್ತು. ತೆಲಂಗಾಣದ ಸರ್ಕಾರಿ ಸೇವೆಯಲ್ಲಿರುವ ಐಎಎಸ್ ಅಧಿಕಾರಿ ಸ್ಮಿತಾ ಸಭರ್ವಾಲ್ ಈ ಎಐ ಆಧಾರಿತ ಚಿತ್ರವನ್ನು ಹಂಚಿಕೊಂಡ ಕಾರಣಕ್ಕೆ ವ್ಯಾಪಕ ಚರ್ಚೆ ನಡೆದಿತ್ತು. ಸೈಬರಾಬಾದ್ ಪೊಲೀಸರು ಸ್ಮಿತಾ ಸಭರ್ವಾಲ್ಗೆ ನೋಟಿಸ್ ಜಾರಿ ಮಾಡಿದ್ದರು. ಸೈಬರ್ ಕ್ರೈಂ ಪೊಲೀಸರ ಮುಂದೆ ಸ್ಮಿತಾ ಸಭರ್ವಾಲ್ ಹಾಜರಾಗಿ ವಿವರಣೆಯನ್ನು ನೀಡಿದ್ದರು.

ಭಾನುವಾರ ತೆಲಂಗಾಣ ಸರ್ಕಾರ 20 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದು, ಸ್ಮಿತಾ ಸಭರ್ವಾಲ್ ಅವರನ್ನು ಸಹ ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆಗೊಳಿಸಲಾಗಿದೆ. ತೆಲಂಗಾಣದಲ್ಲಿ ಬಿಆರ್ಎಸ್ ಸರ್ಕಾರ ಇದ್ದಾಗ ಸ್ಮಿತಾ ಸಭರ್ವಾಲ್ ಪ್ರಭಾವಿ ಐಎಎಸ್ ಅಧಿಕಾರಿ ಎಂದು ಸುದ್ದಿಯಾಗಿದ್ದರು. ಆಗ ಅವರು ಮುಖ್ಯಮಂತ್ರಿಗಳ ಕಾರ್ಯದರ್ಶಿ ಹುದ್ದೆಯಲ್ಲಿದ್ದರು. ತೆಲಂಗಾಣ ವಿಧಾನಸಭೆ ಚುನಾವಣೆ ಮುಗಿದು ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಿತು. ರೇವಂತ್ ರೆಡ್ಡಿ ಮುಖ್ಯಮಂತ್ರಿಯಾದರು. ಆಗ ಸ್ಮಿತಾ ಸಭರ್ವಾಲ್ ಅವರನ್ನು ಮುಖ್ಯಮಂತ್ರಿಗಳ ಕಚೇರಿಯಿಂದ ತೆಲಂಗಾಣ ಹಣಕಾಸು ಆಯೋಗಕ್ಕೆ ವರ್ಗಾವಣೆ ಮಾಡಲಾಗಿತ್ತು. ಬಳಿಕ ಅವರನ್ನು ಯುವ ಅಭಿವೃದ್ಧಿ, ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಇಲಾಖೆ ವಿಶೇಷ ಮುಖ್ಯ ಕಾರ್ಯದರ್ಶಿಯಾಗಿ ನೇಮಿಸಲಾಗಿತ್ತು. ಈಗ ಯುವ ಅಭಿವೃದ್ಧಿ, ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಇಲಾಖೆ ವಿಶೇಷ ಮುಖ್ಯ ಕಾರ್ಯದರ್ಶಿ ಹುದ್ದೆಯಿಂದ ಸ್ಮಿತಾ ಸಭರ್ವಾಲ್ ಅವರನ್ನು ವರ್ಗಾವಣೆ ಮಾಡಲಾಗಿದೆ. ಅಲ್ಲದೇ ಜಯೇಶ್ ರಾಜನ್ ಅವರಿಗೆ ಯುವ ಅಭಿವೃದ್ಧಿ, ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಇಲಾಖೆ ಹೆಚ್ಚುವರಿ ಹೊಣೆಯನ್ನು ನೀಡಲಾಗಿದೆ.

Leave a Reply

Your email address will not be published. Required fields are marked *