ಟೆಹ್ರಾನ್(ಇರಾನ್): ಇಸ್ರೇಲ್ ದಾಳಿಗೆ ಪ್ರತಿಯಾಗಿ ಇರಾನ್ ಕೂಡ ಪ್ರತಿ ದಾಳಿ ನಡೆಸುತ್ತಿದ್ದು, ಎರಡೂ ದೇಶಗಳ ನಡುವೆ ಉದ್ವಿಘ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ಪರಿಣಾಮ, ಇರಾನ್ನಲ್ಲಿರುವ ನೂರಾರು ಭಾರತೀಯ ವಿದ್ಯಾರ್ಥಿಗಳು ಆತಂಕಕ್ಕೊಳಗಾಗಿದ್ದು, ತಮ್ಮನ್ನು ಕೂಡಲೇ ಸ್ಥಳಾಂತರಿಸುವಂತೆ ಭಾರತ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಅನೇಕ ವಿದ್ಯಾರ್ಥಿಗಳು ಇರಾನ್ ಶಾಹಿದ್ ಬೆಹೆಶ್ತಿ ಯುನಿವರ್ಸಿಟಿ ಮತ್ತು ಇರಾನ್ ವೈದ್ಯಕೀಯ ವಿಶ್ವವಿದ್ಯಾಲಯ ಸೇರಿದಂತೆ ಅನೇಕ ವಿವಿಗಳಲ್ಲಿ ಅಧ್ಯಯನ ಮಾಡುತ್ತಿದ್ದಾರೆ.
ಇರಾನ್ನಲ್ಲಿ ಉಂಟಾಗಿರುವ ಯುದ್ಧ ಪರಿಸ್ಥಿತಿ ಕುರಿತು ಮಾಹಿತಿ ನೀಡಿರುವ ವಿದ್ಯಾರ್ಥಿ ಇಮ್ತಿಸಾಲ್ ಮೊಹಿದಿನ್, ಯುದ್ಧ ಆರಂಭವಾದ ದಿನ ಶುಕ್ರವಾರ 2.30ಕ್ಕೆ ಭಾರೀ ಸ್ಪೋಟದಿಂದ ಎಚ್ಚರಗೊಂಡು ತಕ್ಷಣಕ್ಕೆ ನೆಲಮಹಡಿಗೆ ಓಡಿ ಹೋದೆ. ಅಂದಿನಿಂದ ಇಲ್ಲಿಯವರೆಗೂ ನಾನು ಸರಿಯಾಗಿ ಮಲಗಿಲ್ಲ ಎಂದು ತಿಳಿಸಿದ್ದಾರೆ.
ವಿದ್ಯಾರ್ಥಿಗಳಿರುವ ಹಾಸ್ಟೆಲ್ ಮತ್ತು ಅಪಾರ್ಟ್ಮೆಂಟ್ನಿಂದ ಕೆಲವೇ ಕಿ.ಮೀ ದೂರದಲ್ಲಿ ಈ ಸ್ಪೋಟ ಸಂಭವಿಸಿದೆ. ಈ ಹಿನ್ನೆಲೆಯಲ್ಲಿ ತಮ್ಮನ್ನು ತಕ್ಷಣವೇ ಸ್ಥಳಾಂತರ ಮಾಡಿ ಎಂದು ಭಾರತ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
22 ವರ್ಷದ ಇಮ್ತಿಸಾಲ್ ಟೆಹ್ರಾನ್ನ ಶಾಹಿದ್ ಬೆಹೆಶ್ತಿ ವಿಶ್ವವಿದ್ಯಾಲಯದಲ್ಲಿ ಎಂಬಿಬಿಎಸ್ ಮೂರನೇ ವರ್ಷದ ವಿದ್ಯಾರ್ಥಿಯಾಗಿದ್ದು, ಈ ವಿಶ್ವವಿದ್ಯಾಲಯವೊಂದರಲ್ಲಿ ಭಾರತದ 350 ವಿದ್ಯಾರ್ಥಿಗಳು ನೋಂದಣಿ ಮಾಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಕುಪ್ವಾರಾದ ಈ ವಿದ್ಯಾರ್ಥಿ ಅಲ್ಲಿನ ಆತಂಕದ ವಾತಾವರಣದ ಕುರಿತು ಫೋನ್ನಲ್ಲಿ ಮಾಹಿತಿ ನೀಡಿದ್ದು, ನಾವು ಅಪಾರ್ಟ್ಮೆಂಟ್ನ ನೆಲಮಹಡಿಯಲ್ಲಿಯೇ ಇದ್ದೇವೆ. ಪ್ರತೀ ರಾತ್ರಿ ಸ್ಪೋಟದ ಸದ್ದು ಕೇಳುತ್ತಿದೆ. ಅದರಲ್ಲಿ ಒಂದು ಸ್ಪೋಟ ನಾವಿರುವಲ್ಲಿನಿಂದ ಕೇವಲ 5 ಕಿ.ಮೀ ದೂರದಲ್ಲಿ ನಡೆದಿದೆ. ನಾವು ನಿದ್ದೆ ಮಾಡಿ ಮೂರು ದಿನವಾಗಿದೆ. ಬಾಂಬ್ ಸ್ಪೋಟದ ಕಾರಣ ವಿದ್ಯಾರ್ಥಿಗಳ ಓಡಾಟ ತಪ್ಪಿಸಲು ತರಗತಿಗಳನ್ನು ನಿಲ್ಲಿಸಿದ್ದಾರೆ ಎಂದು ತಿಳಿಸಿದ್ದಾರೆ.