ಬೆಂಗಳೂರು: ಕರ್ನಾಟಕ ಬಿಜೆಪಿಯಲ್ಲಿ ಬಣ ರಾಜಕೀಯ ದಿನದಿಂದ ದಿನಕ್ಕೆ ತಾರಕಕ್ಕೇರುತ್ತಿದೆ. ಒಂದು ಕಡೆ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಬೆಂಬಲಿಗರು ದೆಹಲಿಗೆ ತೆರಳಿ ವಿರೋಧಿ ಬಣದ ವಿರುದ್ಧ ದೂರು ನೀಡಿದರೆ, ಈಗ ವಿಜಯೇಂದ್ರ ವಿರೋಧಿ ಬಣವೂ ದೆಹಲಿ ಯಾತ್ರೆಗೆ ಸಜ್ಜಾಗಿದೆ. ಕಳೆದ ವಾರ ದೆಹಲಿಗೆ ತೆರಳಿದ್ದ ಎಂಪಿ ರೇಣುಕಾಚಾರ್ಯ ತಂಡ, ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷ ಓಂ ಪಾಠಕ್ ಅವರನ್ನು ಭೇಟಿಯಾಗಿ, ದಾವಣಗೆರೆಯಲ್ಲಿ ಪ್ರತ್ಯೇಕ ಸಮಾವೇಶ ನಡೆಸಿದ ಬಗ್ಗೆ ದೂರು ಸಲ್ಲಿಸಿತ್ತು.

ಇದೀಗ ವಿಜಯೇಂದ್ರ ವಿರುದ್ಧದ ಬಣ ಮುಂದಿನ ವಾರ ದೆಹಲಿ ಪ್ರವಾಸಕ್ಕೆ ಸಿದ್ಧತೆ ಮಾಡಿಕೊಂಡಿದೆ. ಶಾಸಕ ರಮೇಶ್ ಜಾರಕಿಹೊಳಿ, ಮಾಜಿ ಸಚಿವರಾದ ಅರವಿಂದ ಲಿಂಬಾವಳಿ, ಕುಮಾರ್ ಬಂಗಾರಪ್ಪ ಸೇರಿದಂತೆ ಭಿನ್ನರ ತಂಡದ ಸದಸ್ಯರು ಈ ಪ್ರವಾಸದಲ್ಲಿ ಭಾಗಿಯಾಗಲಿದ್ದಾರೆ. ಇವರ ಜೊತೆಗೆ ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ ಮತ್ತು ಶಾಸಕ ಬಿ.ಪಿ. ಹರೀಶ್ ಕೂಡ ತೆರಳಲಿದ್ದಾರೆ.
ಅಕ್ರಮ ಬಾಂಗ್ಲಾ ನಿವಾಸಿಗಳ ಮಾಹಿತಿ ಸಲ್ಲಿಕೆ ನೆಪದಲ್ಲಿ ದೆಹಲಿ ಟೂರ್
ಈ ತಂಡದ ಮುಖ್ಯ ಅಜೆಂಡಾ, ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಲ್ಲಿ ವಿಜಯೇಂದ್ರ ಮುಂದುವರೆಯಬಾರದು ಎಂಬುದು ಎನ್ನಲಾಗಿದೆ. ಅಕ್ರಮ ಬಾಂಗ್ಲಾ ನಿವಾಸಿಗಳ ಮಾಹಿತಿ ಸಲ್ಲಿಕೆ ನೆಪದಲ್ಲಿ ವಿಜಯೇಂದ್ರ ಬೆಂಬಲಿಗರ ವಿರುದ್ಧ ದೂರು ನೀಡಲು ಈ ತಂಡ ಮುಂದಾಗಿದೆ. ಅಕ್ರಮ ವಲಸಿಗರ ಕುರಿತು ಈಗಾಗಲೇ ಬೆಂಗಳೂರು, ಹಾಸನ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ವರದಿ ಸಂಗ್ರಹಿಸಿದೆ.