ನಟ ದರ್ಶನ್ ಅವರಿಗೆ ಜಾಮೀನು ರದ್ದಾಗುವ ಭಯ ಕಾಡುತ್ತಿದೆ. ಜಾಮೀನು ರದ್ದು ಮಾಡಬೇಕು ಎಂದು ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ತೀರ್ಪನ್ನು ಕಾಯ್ದಿರಿಸಿದೆ. ಇತ್ತ ದರ್ಶನ್ ಅವರು ‘ಡೆವಿಲ್’ ಸಿನಿಮಾ ಶೂಟಿಂಗ್ ಮುಗಿಸಿ ಕರ್ನಾಟಕಕ್ಕೆ ಇಂದು ಮರಳಲಿದ್ದಾರೆ. ಹೀಗಿರುವಾಗಲೇ ಸ್ಯಾಂಡಲ್ವುಡ್ ಅಂಗಳದಲ್ಲಿ ಒಂದು ದೊಡ್ಡ ಬ್ರೇಕಿಂಗ್ ನ್ಯೂಸ್ ಹೊರ ಬಿದ್ದಿದೆ. ದರ್ಶನ್ ಸೋದರಳಿಯ ಚಂದು ಲಾಂಚ್ ಆಗುತ್ತಿದ್ದು, ಇದಕ್ಕೆ ದಿನಕರ್ ತುಗದೀಪ್ ಅವರೇ ನಿರ್ದೇಶನ ಮಾಡುತ್ತಿದ್ದಾರೆ ಎನ್ನುತ್ತಿವೆ ಮೂಲಗಳು. ಈ ಚಿತ್ರಕ್ಕೆ ದರ್ಶನ್ ವಿಲನ್ ಅನ್ನೋದು ವಿಶೇಷ.

ದರ್ಶನ್ ಅವರು ಚಂದು ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಪ್ರತಿ ಹಂತದಲ್ಲಿ ಚಂದುನ ಬೆಂಬಲಿಸುತ್ತಾ ಬರುತ್ತಿದ್ದಾರೆ. ಅನೇಕ ಬಾರಿ ಚಂದು ಕೂಡ ದರ್ಶನ್ ಜೊತೆ ಕಾಣಿಸಿಕೊಂಡಿದ್ದು ಇದೆ. ಅವರು ನಟನೆಯಲ್ಲಿ ಪಳಗಿದ್ದಾರೆ. ಮಂಡ್ಯ ರಮೇಶ್ ಅವರ ‘ನಟನಾ ರಂಗಶಾಲೆ’ಯಲ್ಲಿ ತರಬೇತಿ ಪಡೆದಿದ್ದಾರೆ. ‘ರಾಬರ್ಟ್’ ಹಾಗೂ ‘ಕಾಟೇರ’ ಚಿತ್ರದ ನಿರ್ದೇಶನದ ಡಿಪಾರ್ಟ್ಮೆಂಟ್ನಲ್ಲಿ ಅವರು ಕೆಲಸ ಮಾಡಿದ್ದಾರೆ. ಈಗ ಅವರು ಹೀರೋ ಆಗುತ್ತಿದ್ದಾರೆ.
ಇಲ್ಲಿ ಒಂದು ಖುಷಿಯ ವಿಚಾರ ಇದೆ. ದರ್ಶನ್ ಅವರು ಈ ಚಿತ್ರದಲ್ಲಿ ವಿಲನ್ ಪಾತ್ರ ಮಾಡುತ್ತಿದ್ದಾರೆ ಎನ್ನಲಾಗಿದೆ. ದರ್ಶನ್ ತಂದೆ ಶ್ರೀನಿವಾಸ ತೂಗುದೀಪ ಅವರು ವಿಲನ್ ಆಗಿಯೇ ಹೆಚ್ಚು ಗುರುತಿಸಿಕೊಂಡವರು. ಆದರೆ, ದರ್ಶನ್ ಅವರು ಹೀರೋ ಆಗಿ ಮಿಂಚಿದವರು. ‘ನವಗ್ರಹ’ ಚಿತ್ರದಲ್ಲಿ ಅವರು ವಿಲನ್ ಪಾತ್ರ ಮಾಡಿ ಭೇಷ್ ಎನಿಸಿಕೊಂಡಿದ್ದರು. ‘ಡೆವಿಲ್’ ಸಿನಿಮಾದಲ್ಲೂ ಅವರ ಪಾತ್ರಕ್ಕೆ ನೆಗೆಟಿವ್ ಶೇಡ್ ಇದೆ ಎನ್ನಲಾಗುತ್ತಿದೆ. ಹೀಗಿರುವಾಗಲೇ ಅವರು ವಿಲನ್ ಪಾತ್ರ ಒಪ್ಪಿಕೊಂಡಿರೋದು ಸಾಕಷ್ಟು ಅಚ್ಚರಿ ಮೂಡಿಸಿದೆ.
ಈ ಮೊದಲು ಡೆವಿಲ್ ಸಿನಿಮಾದಲ್ಲೇ ಚಂದು ನಟಿಸಬೇಕಿತ್ತು. ಆದರೆ, ಅವರನ್ನು ಸಿನಿಮಾದಿಂದ ಹೊರಗಿಡಲಾಗಿತ್ತು. ‘ಅಕ್ಕನ ಮಗನಾದ ಚಂದುಗೆ ಅಭಿಮಾನಿಯೊಬ್ಬರು ಕಾಲಿಗೆ ಬೀಳುವುದನ್ನು ನೋಡಿ ನನ್ನ ಮನಸಿಗೆ ತುಂಬಾ ನೋವಾಗಿದೆ ಆದ್ದರಿಂದ ಡೆವಿಲ್ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ನಟಿಸಬೇಕಿದ್ದ ಚಂದುನನ್ನು ಈ ಚಿತ್ರದಿಂದ ಹೊರಗಿಡಲಾಗಿದೆ’ ಎಂದಿದ್ದರು ಅವರು.