ಹುಬ್ಬಳ್ಳಿ,: ನಗರದ ನಂದಗೋಕುಲ ಬಡಾವಣೆಯಲ್ಲಿ ಗೃಹಿಣಿಯೊಬ್ಬರು ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾದ ಘಟನೆ ನಡೆದಿದೆ. ಮೃತ ಗೃಹಿಣಿಯನ್ನ ಜಯಶ್ರೀ ಬಡಿಗೇರ್ (31) ಎಂದು ಗುರುತಿಸಲಾಗಿದೆ. ಮೂವತ್ತೊಂದು ವರ್ಷದ ಜಯಶ್ರೀ ಬಿಎ,ಬಿಇಡಿ ಪದವೀಧರೆ. ಜೊತೆಗೆ ಲೈಬ್ರರಿ ಸೈನ್ಸ್ ಕೋರ್ಸ್ ಕೂಡಾ ಮಾಡುತ್ತಿದ್ದಳು. ಶಿಕ್ಷಕಿ ಆಗಬೇಕು. ದೇಶಕ್ಕೆ ಮಾದರಿಯಾಗೋ ವಿದ್ಯಾರ್ಥಿಗಳ ಜೀವನ ರೂಪಿಸಬೇಕು ಅಂತ ಹತ್ತಾರು ಕನಸು ಕಂಡಿದ್ದಳು. ಆದ್ರೆ, ಮದುವೆಯಾದ ನಾಲ್ಕೇ ತಿಂಗಳಿಗೆ ದುರಂತ ಸಾವು ಕಂಡಿದ್ದಾಳೆ. ಇದು ಆತ್ಮಹತ್ಯೆಯಲ್ಲ, ಕೊಲೆ ಮಾಡಿ ಬಳಿಕ ನೇಣಿಗೆ ಹಾಕಲಾಗಿದೆ ಎಂದು ಮೃತ ಜಯಶ್ರೀ ಕುಟುಂಬಸ್ಥರು ಆರೋಪಿಸಿದ್ದಾರೆ. ಮೂಲತ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಹೊಳೆ ಇಟಗಿ ಗ್ರಾಮದ ನಿವಾಸಿಯಾಗಿದ್ದ ಜಯಶ್ರೀ ವಿವಾಹ, ಹುಬ್ಬಳ್ಳಿಯ ನಂದಗೋಕುಲ ಬಡಾವಣೆ ನಿವಾಸಿ ಶಿವಾನಂದ್ ಬಡಿಗೇರ್ ಅನ್ನೋನ ಜೊತೆ ಕಳೆದ ಮೇ 21 ರಂದು ಹುಬ್ಬಳ್ಳಿಯಲ್ಲಿ ಅದ್ದೂರಿಯಾಗಿ ನಡೆದಿತ್ತು. ವಿವಾಹವಾದ ನಂತರ ಕೂಡಾ ಧಾರವಾಡದಲ್ಲಿ ಲೈಬ್ರರಿ ಸೈನ್ಸ್ ಕೋರ್ಸ್ ಗೆ ಪ್ರವೇಶ ಪಡೆದಿದ್ದ ಜಯಶ್ರೀ, ಪ್ರತಿನಿತ್ಯ ಕಾಲೇಜಿಗೆ ಹುಬ್ಬಳ್ಳಿಯಿಂದ ಹೋಗಿ ಬರುತ್ತಿದ್ದಳು. ಆದ್ರೆ ಮದುವೆಯಾದ ಮೂರೇ ತಿಂಗಳಿಗೆ ಸಂಸಾರದ ಕಲಹಕ್ಕೆ ಜಯಶ್ರೀ ಬಾರದ ಲೋಕಕ್ಕೆ ಹೋಗಿದ್ದಾಳೆ. ಇದು ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ.
ಹುಬ್ಬಳ್ಳಿ ನಗರದ ನಂದಗೋಕುಲ ಬಡವಾಣೆಯಲ್ಲಿ ಇಂದು ಮುಂಜಾನೆ ತನ್ನ ಮನೆಯ ಮೇಲಿನ ಮಹಡಿಯ ಕೋಣೆಯಲ್ಲಿ ಜಯಶ್ರೀ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಇಂದು ಮುಂಜಾನೆ ಜಯಶ್ರೀ ಹೆತ್ತವರಿಗೆ ಕರೆ ಮಾಡಿದ ಜಯಶ್ರೀ ಪತಿ ಶಿವಾನಂದ್ ನಿಮ್ಮ ಮಗಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಿದ್ದನಂತೆ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಹೆತ್ತವರು ತಮ್ಮ ಮಗಳದ್ದು ಆತ್ಮಹತ್ಯೆಯಲ್ಲ, ಕೊಲೆ ಮಾಡಿರೋ ಶಂಕೆಯಿದೆ. ಆಕೆಯ ಸಾವಿಗೆ ಆಕೆಯ ಪತಿಯೇ ಕಾರಣ ಅಂತ ಆರೋಪಿಸುತ್ತಿದ್ದಾರೆ.
ಇನ್ನು ಜಯಶ್ರೀ ಪತಿ, ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಜಯಶ್ರೀ ಮದುವೆಯಾಗೋ ಮುಂಚೆ, ಆತನಿಗೆ ಬೇರೊಂದು ಯುವತಿಯನ್ನು ಪ್ರೀತಿಸುತ್ತಿದ್ದನಂತೆ. ಕೆಲ ದಿನಗಳ ಹಿಂದೆ ಜಯಶ್ರೀಗೆ ಪತಿಯ ಮಾಜಿ ಲವರ್ ಇನಸ್ಟಾಗ್ರಾಂ ನಲ್ಲಿ ಶಿವಾನಂದ್ ಜೊತೆ ತನ್ನ ಪ್ರೀತಿ ಇರೋದನ್ನು ತಿಳಿಸಿದ್ದಾಳೆ. ಅನೇಕ ಪೋಟೋಗಳನ್ನು ಕೂಡಾ ಜಯಶ್ರೀಗೆ ಕಳುಹಿಸಿದ್ದಳಂತೆ. ಅದ್ರೆ, ಶಿವಾನಂದ್ ಪ್ರೀತಿ ಬಗ್ಗೆ ಮುಚ್ಚಿಟ್ಟು ಜಯಶ್ರೀಯನ್ನು ವಿವಾಹವಾಗಿದ್ದನಂತೆ. ಪತಿಯ ಹಿಂದಿನ ಪ್ರೇಮ ಕಹಾನಿ ಗೊತ್ತಾದ ಮೇಲೆ ಸಹ ಸುಮ್ಮನಾಗಿದ್ದ ಜಯಶ್ರೀ, ಆಗಸ್ಟ್ 4 ರಂದು ಮತ್ತೆ ಪತಿ ಮನೆಗೆ ಬಂದಿದ್ದಳಂತೆ. ಹಳೆದಯನ್ನು ಮರೆತು ಜೀವನ ಸಾಗಿಸೋ ನಿರ್ಧಾರಕ್ಕೆ ಬಂದಿದ್ದಳಂತೆ. ಆದ್ರೆ ಶಿವಾನಂದ್, ಜಯಶ್ರೀಗೆ ಮಾನಸಿಕ ಕಿರುಕುಳ ನೀಡುತ್ತಿದ್ದನಂತೆ. ಹೆತ್ತವರ ಜೊತೆ ಮಾತನಾಡಲು ಕೂಡಾ ಬಿಡ್ತಿರಲಿಲ್ಲವಂತೆ. ಈ ಸಂಬಂಧ ಕಳದ ರಾತ್ರಿ ಸಹ ಇಬ್ಬರ ನಡುವೆ ಜಗಳವಾಗಿದ್ದು, ಬೆಳಗಾಗುವುದರಲ್ಲೇ ಜಯಶ್ರೀ ಬಾರದ ಲೋಕಕ್ಕೆ ಹೋಗಿದ್ದಾಳೆ.
ಸದ್ಯ ಜಯಶ್ರೀ ಸಾವಿಗೆ ಸಂಬಂಧಿಸಿದಂತೆ ಹುಬ್ಬಳ್ಳಿ ಗೋಕುಲ್ ರೋಡ್ ಪೊಲೀಸ್ ಠಾಣೆಯಲ್ಲಿ ಅಸಹಜಹ ಸಾವು ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿ ಶಿವಾನಂದ್ ಬಡಿಗೇರ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಆದ್ರೆ ಜೀವನದಲ್ಲಿ ಹತ್ತಾರು ಕನಸು ಕಂಡಿದ್ದ ಯುವತಿ, ಸಂಸಾರದ ಕಲಹಕ್ಕೆ ಬಾರದ ಲೋಕಕ್ಕೆ ಹೋಗಿದ್ದು ಮಾತ್ರ ದುರಂತ.
For More Updates Join our WhatsApp Group :
