ಮೈಸೂರು: ಭಾನುವಾರ ಹುಲಿ ದಾಳಿಗೆ ರೈತ ರಾಜಶೇಖರ ಸಾವನ್ನಪ್ಪಿರುವಂತಹ ಘಟನೆ ಮೈಸೂರಿನ ಸರಗೂರು ತಾಲೂಕಿನ ಬೆಣ್ಣೆಗೆರೆ ಗ್ರಾಮದಲ್ಲಿ ನಡೆದಿತ್ತು. ರೈತನನ್ನು ಬಲಿ ಪಡೆದಿದ್ದ ಹುಲಿಯನ್ನು ಹುಡುಕುತ್ತಿದ್ದ ಅರಣ್ಯ ಇಲಾಖೆಯ ಬಲೆಗೆ ಹುಲಿಯೊಂದು ಬಿದ್ದಿದೆ. ಸಾಕಾನೆಗಳ ಸಹಾಯದಿಂದ ಯಡಿಯಾಲ ಅರಣ್ಯ ವಲಯದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಸೆರೆ ಹಿಡಿದಿರುವ ಹುಲಿಯನ್ನು ಅರಣ್ಯ ಪ್ರದೇಶಕ್ಕೆ ರವಾನಿಸಲಾಗಿದೆ.
ಹುಲಿ ಸೆರೆ ಹಿಡಿಯಲು ಸೋಮವಾರದಿಂದ ನಿರಂತರ ಕಾರ್ಯಾಚರಣೆ
ಕೆಲ ದಿನಗಳ ಹಿಂದೆ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತ ರಾಜಶೇಖರ್ (58) ಮೇಲೆ ಹುಲಿ ಒಮ್ಮೆಲೆ ದಾಳಿ ಮಾಡಿತ್ತು. ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಕಾರ್ಯಸೂಚಿ ಅನ್ವಯ ಮೇಲಾಧಿಕಾರಿಗಳ ಆದೇಶದಂತೆ ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ, ಇಲಾಖಾ ಪಶು ವೈಧ್ಯಾಧಿಕಾರಿಗಳ ತಂಡ ಒಳಗೊಂಡಂತೆ ಸಾಕಾನೆಗಳೊಂದಿಗೆ ಸದರಿ ಸ್ಥಳದ ಸುತ್ತಾ-ಮುತ್ತಾ ದಾರಿ ತಪ್ಪಿದ ಹುಲಿಯನ್ನು ಸುರಕ್ಷತೆಯಾಗಿ ಸೆರೆ ಹಿಡಿಯುವ ಕಾರ್ಯಾಚರಣೆಯನ್ನು ಸೋಮವಾರದಿಂದ ನಡೆಸುತ್ತಿತ್ತು. ಹುಲಿಯ ಚಲನ ವಲನವನ್ನು ಅತೀ ಸೂಕ್ಷ್ಮವಾಗಿ ನಿಗಾವಹಿಸಲಾಗುತ್ತಿತ್ತು.
ಈ ಹಂತಕ ಹುಲಿಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಸತತ ಪ್ರಯತ್ನ ಮಾಡುತ್ತಲೇ ಇತ್ತು. ಸಾಕಾನೆಗಳಾದ ಭೀಮ, ಮಹೇಂದ್ರ ಇವರ ಸಹಾಯದಿಂದ ಹುಲಿ ಕಾರ್ಯಾಚರಣೆ ಮುಂದುವರೆದಿತ್ತು. ಮಂಗಳವಾರ ಸಂಜೆ ಯಡಿಯಾಲ ಅರಣ್ಯ ವಲಯದ ಅಂಜನಾಪುರದ ಬಳಿ ಅರಣ್ಯ ಇಲಾಖೆಯ ಅರವಳಿಕೆ ತಜ್ಞ ಶೂಟರ್ಗಳ ಸಹಾಯದಿಂದ ಹುಲಿಯನ್ನು ಸೆರೆ ಹಿಡಿಯಲಾಗಿದೆ.
ಸೆರೆ ಸಿಕ್ಕ ಹುಲಿಗೂ ರೈತನ ಕೊಲೆಗೂ ಏನೂ ಸಂಬಧವಿಲ್ಲ
ರೈತನ ಮೇಲೆ ದಾಳಿ ಮಾಡಿದ ಸ್ಥಳದಿಂದ 10-15 ಕಿಮೀ ದೂರದಲ್ಲಿ ಈ ಹುಲಿ ಸಿಕ್ಕ ಕಾರಣ ಇದೇ ಹುಲಿ ರೈತನ ಹತ್ಯೆ ಮಾಡಿದೆ ಎಂದು ಊಹಿಸಲಾಗಿತ್ತು. ಸೆರೆ ಸಿಕ್ಕ ಹುಲಿಯನ್ನು ಪರಿಶೀಲಿಸಿರುವಾಗ ಇದು ಸುಮಾರು 7 ವರ್ಷದ ಹೆಣ್ಣು ಹುಲಿಯಾಗಿದ್ದು, ರೈತನ ಮೇಲೆ ದಾಳಿ ಮಾಡಿದ ಹುಲಿ ಇದಲ್ಲ ಎಂದು ತಿಳಿದು ಬಂದಿದೆ. ರಾಜಶೇಖರ್ ಮೇಲೆ ದಾಳಿ ಮಾಡಿದ ಹುಲಿಗಾಗಿ ಶೋಧ ಮುಂದುವರೆದಿದೆ.
For More Updates Join our WhatsApp Group :



