ಪ್ರಯಾಣಿಕರಿಗೆ ಪೂರ್ಣ ಮರುಪಾವತಿ–ಊಟ–ವಸತಿ ವ್ಯವಸ್ಥೆ ಕಡ್ಡಾಯ
ನವದೆಹಲಿ : ಇಂಡಿಗೋ ಏರ್ಲೈನ್ಸ್ನ ನೂರಾರು ವಿಮಾನಗಳನ್ನು ರದ್ದುಗೊಳಿಸಿದ್ದರಿಂದ ಸಾವಿರಾರು ಪ್ರಯಾಣಿಕರು ಪರದಾಡುತ್ತಿದ್ದಾರೆ. ಹಲವರು ವಿಮಾನ ನಿಲ್ದಾಣದಲ್ಲಿಯೇ ಸಿಲುಕಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಪರಿಸ್ಥಿತಿಯನ್ನು ಸುಧಾರಿಸಲು ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿದೆ. ಆದಷ್ಟು ಬೇಗ ಸಮಸ್ಯೆಯನ್ನು ಸರಿಪಡಿಸುವ ಕ್ರಮಗಳನ್ನು ಜಾರಿಗೆ ತರುವಂತೆ ವಿಮಾನಯಾನ ಸಂಸ್ಥೆಗೆ ಕೇಂದ್ರ ಸರ್ಕಾರ ನಿರ್ದೇಶನ ನೀಡಿದೆ.
ಪರಿಸ್ಥಿತಿಯನ್ನು ನಿಭಾಯಿಸಲು ಮತ್ತು ಸೇವೆಗಳು ಸಾಧ್ಯವಾದಷ್ಟು ಬೇಗ ಸ್ಥಿರ ಸ್ಥಿತಿಗೆ ತರಲು 2 ಔಪಚಾರಿಕ ನಿರ್ದೇಶನಗಳನ್ನು ನೀಡಲಾಗಿದೆ ಎಂದು ಸಚಿವಾಲಯ ತಿಳಿಸಿದೆ. “ಇಂದು ಮಧ್ಯರಾತ್ರಿಯ ವೇಳೆಗೆ ಎಲ್ಲಾ ವಿಮಾನಗಳ ವೇಳಾಪಟ್ಟಿ ಸ್ಥಿರಗೊಂಡು ಸಾಮಾನ್ಯ ಸ್ಥಿತಿಗೆ ಮರಳುವ ನಿರೀಕ್ಷೆಯಿದೆ. ಮುಂದಿನ ಎರಡು ದಿನಗಳಲ್ಲಿ ಪೂರ್ಣ ಸೇವೆಗಳು ಸಹಜ ಸ್ಥಿತಿಗೆ ಬರಲಿದೆ. ವಿಮಾನ ರದ್ದತಿಯಾದ ಪ್ರಯಾಣಿಕರಿಗೆ ಪೂರ್ಣ ಮರುಪಾವತಿ ಮಾಡಲಾಗುವುದು” ಎಂದು ಸಚಿವಾಲಯ ತಿಳಿಸಿದೆ.
ಕಾರ್ಯಾಚರಣೆಯಲ್ಲಿನ ಅಡಚಣೆಗಳಿಂದಾಗಿ ಸಿಲುಕಿರುವವರಿಗೆ ವಿಮಾನಯಾನ ಸಂಸ್ಥೆಗಳು ಹೋಟೆಲ್ ವಸತಿ ವ್ಯವಸ್ಥೆ ಮಾಡುವಂತೆ ಸರ್ಕಾರ ಸೂಚಿಸಿದೆ. ಹಿರಿಯ ನಾಗರಿಕರಿಗೆ ವಿಶ್ರಾಂತಿ ಕೊಠಡಿ ಸೌಲಭ್ಯ ನೀಡುವ ಮೂಲಕ ಮತ್ತು ಅವರಿಗೆ ಯಾವುದೇ ಅನಗತ್ಯ ಅನಾನುಕೂಲತೆ ಉಂಟಾಗದಂತೆ ನೋಡಿಕೊಳ್ಳಬೇಕೆಂದು ಹೇಳಿದೆ.
ಇಂಡಿಗೋ ಗುರುವಾರ 550ಕ್ಕೂ ಹೆಚ್ಚು ವಿಮಾನಗಳನ್ನು ಮತ್ತು ಶುಕ್ರವಾರ 400ಕ್ಕೂ ಹೆಚ್ಚು ವಿಮಾನಗಳನ್ನು ರದ್ದುಗೊಳಿಸಿದೆ. ರದ್ದತಿ ಮತ್ತು ವಿಳಂಬಗಳಿಂದ ಉಂಟಾದ ರಾಷ್ಟ್ರವ್ಯಾಪಿ ಅಡಚಣೆಗಳು ಸಾವಿರಾರು ಪ್ರಯಾಣಿಕರು ವಿಮಾನ ನಿಲ್ದಾಣಗಳಲ್ಲಿ ಸಿಲುಕಿಸಿದ್ದರಿಂದ ಇಂಡಿಗೋ ಇಂದು ಸಾರ್ವಜನಿಕ ಕ್ಷಮೆಯಾಚನೆಯನ್ನು ಮಾಡಿದೆ.
ವಿಮಾನ ರದ್ದಾದರೆ ಟಿಕೆಟ್ ದರವನ್ನು ಸಂಪೂರ್ಣ ಮರುಪಾವತಿ ನೀಡಬೇಕು. ವಿಳಂಬವಾದರೆ ಏರ್ಲೈನ್ಗಳು ಬುಕ್ ಮಾಡಿರುವ ಹೋಟೆಲ್ಗಳಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಬೇಕು. ಹಿರಿಯ ನಾಗರಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ವಿಶೇಷ ಕ್ರಮ ಕೈಗೊಳ್ಳಬೇಕು. ಹಿರಿಯ ಪ್ರಯಾಣಿಕರಿಗೆ ಲಾಂಜ್ ಪ್ರವೇಶ ಒದಗಿಸಬೇಕು. ವಿಳಂಬವಾದ ವಿಮಾನಗಳ ಪ್ರಯಾಣಿಕರಿಗೆ ಉಪಹಾರ ಮತ್ತು ಇತರ ಅಗತ್ಯ ವಸ್ತುಗಳನ್ನು ಒದಗಿಸಬೇಕು ಎಂದು ಸರ್ಕಾರ ಇಂಡಿಗೋಗೆ ಆದೇಶ ನೀಡಿದೆ.
For More Updates Join our WhatsApp Group :
