7ನೇ ತರಗತಿ ವಿದ್ಯಾರ್ಥಿಗೆ ಗಂಭೀರ ಗಾಯ, ಶಾಲೆಯಲ್ಲಿ ಆತಂಕ.
ಬೆಂಗಳೂರು : ಜಿಲ್ಲೆಯ ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದ ಸರ್ಕಾರಿ ಉರ್ದು ಶಾಲೆಯಲ್ಲಿ ಇಂದು (ಶನಿವಾರ) ಮಧ್ಯಾಹ್ನ ಕೆಮಿಕಲ್ ಸ್ಫೋಟ ಸಂಭವಿಸಿ, ಏಳನೇ ತರಗತಿಯೊಬ್ಬ ವಿದ್ಯಾರ್ಥಿಗೆ ಗಂಭೀರ ಗಾಯಗಳಾಗಿವೆ. ಪಟ್ಟಣದ ಜಿಲ್ಲಾ ಗ್ರಂಥಾಲಯದ ಮುಂಭಾಗದಲ್ಲಿರುವ ಈ ಶಾಲೆಯಲ್ಲಿ ಘಟನೆ ನಡೆದಿದ್ದು, ಕ್ಷಣಕಾಲ ಶಾಲಾ ವಾತಾವರಣದಲ್ಲಿ ಆತಂಕ ಸೃಷ್ಟಿಯಾಗಿದೆ.
ಕಾರ್ಬನ್ ಕೆಮಿಕಲ್ ನೀರಿಗೆ ಮಿಕ್ಸ್ ಮಾಡಿದ್ದ ವಿದ್ಯಾರ್ಥಿ
ಏಳನೇ ತರಗತಿ ವಿದ್ಯಾರ್ಥಿಯೊಬ್ಬ ಕಾರ್ಬನ್ ಕೆಮಿಕಲ್ ಅನ್ನು ಶಾಲೆಗೆ ತಂದು, ಶೌಚಾಲಯದಲ್ಲಿ ಒಂದು ಜಗ್ ನೀರಿಗೆ ಹಾಕಿ ಪ್ರಯೋಗ ನಡೆಸಲು ಯತ್ನಿಸಿದ್ದಾನೆ. ಈ ವೇಳೆ ಅಚಾನಕವಾಗಿ ಜಗ್ ಸ್ಫೋಟಗೊಂಡಿದ್ದು, ಅದರ ಪರಿಣಾಮವಾಗಿ ವಿದ್ಯಾರ್ಥಿಗೆ ಗಂಭೀರ ಗಾಯಗಳಾಗಿವೆ. ಸ್ಫೋಟದ ತೀವ್ರತೆಗೆ ವಿದ್ಯಾರ್ಥಿಯ ಬಟ್ಟೆಗಳು ಸುಟ್ಟುಹೋಗಿದ್ದು, ಸ್ಥಳದಲ್ಲಿದ್ದವರು ತಕ್ಷಣವೇ ಆತನ ಬಟ್ಟೆಗಳನ್ನು ತೆಗೆದು, ಪ್ರಾಥಮಿಕ ನೆರವು ನೀಡಿ ದೇವನಹಳ್ಳಿಯ ಖಾಸಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ವಿದ್ಯಾರ್ಥಿಯ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.
ಸ್ಫೋಟ ಸಂಭವಿಸಿದ ತಕ್ಷಣ ಶಾಲೆಯಲ್ಲಿದ್ದ ಇತರೆ ವಿದ್ಯಾರ್ಥಿಗಳು ಭಯಭೀತರಾಗಿದ್ದು, ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಮಾಹಿತಿ ಪಡೆದ ವಿಜಯಪುರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೆಮಿಕಲ್ ಶಾಲೆಗೆ ಹೇಗೆ ತರಲಾಯಿತು ಎಂಬಿನ್ನಿತರ ವಿಷಯದ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ಘಟನೆ ಶಾಲಾ ಆವರಣದಲ್ಲಿ ಭದ್ರತೆ ಮತ್ತು ಮೇಲ್ವಿಚಾರಣೆ ಕುರಿತು ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ.
For More Updates Join our WhatsApp Group :




