ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ಗೆ ಪಿಣರಾಯಿ ವಿಜಯನ್ ಪತ್ರ.
ತಿರುವನಂತಪುರಂ: ಬೆಂಗಳೂರಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಸಿ.ಜೆ. ರಾಯ್ ಆತ್ಮಹತ್ಯೆ ಪ್ರಕರಣ ಸಂಬಂಧ ನ್ಯಾಯಾಂಗ ತನಿಖೆ ನಡೆಸುವಂತೆ ಆಗ್ರಹಿಸಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ಗೆ ಕೇರಳ ಸಿಎಂ ಪಿಣರಾಯಿ ವಿಜಯನ್ ಪತ್ರ ಬರೆದು ಒತ್ತಾಯಿಸಿದ್ದಾರೆ. ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿ.ಜೆ. ರಾಯ್ ಆತ್ಮಹತ್ಯೆ ಪ್ರಕರಣದ ತನಿಖೆಗೆ ಕರ್ನಾಟಕ ಸರ್ಕಾರ ಈಗಾಗಲೇ ಎಸ್ಐಟಿ ರಚಿಸಿದ್ದು, ಬೆಂಗಳೂರಿನ ಜಂಟಿ ಪೊಲೀಸ್ ಆಯುಕ್ತ ವಂಶಿಕೃಷ್ಣ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ ಎನ್ನುವುದಿಲ್ಲಿ ಗಮನಾರ್ಹ.
ಪಿಣರಾಯಿ ವಿಜಯನ್ ಪತ್ರದಲ್ಲಿ ಏನಿದೆ?
ಜನವರಿ 30, 2026ರಂದು ಆದಾಯ ತೆರಿಗೆ ಸಿಬ್ಬಂದಿ ನಡೆಸಿದ ಶೋಧ ಕಾರ್ಯಾಚರಣೆಯ ಮಧ್ಯೆ ಬೆಂಗಳೂರಿನಲ್ಲಿ ಕಾನ್ಫಿಡೆಂಟ್ ಗ್ರೂಪ್ನ ಮುಖ್ಯಸ್ಥ ಸಿ.ಜೆ. ರಾಯ್ ಅಸಹಜ ಮರಣದ ಬಗ್ಗೆ ಕೇರಳದ ಜನರ ತೀವ್ರ ದುಃಖವನ್ನು ಹಂಚಿಕೊಳ್ಳಲು ನಾನು ಈ ಪತ್ರವನ್ನು ಬರೆಯುತ್ತಿದ್ದೇನೆ. ಈ ಘಟನೆಯ ಬಗ್ಗೆ ಕೇಳಿ ಉದ್ಯಮ ಸಮುದಾಯ ಮತ್ತು ನಾಗರಿಕ ಸಮಾಜ ಆಘಾತಕ್ಕೊಳಗಾಗಿದೆ. ಈ ದುರದೃಷ್ಟಕರ ಘಟನೆಯು ದೇಶದ ತೆರಿಗೆ ಆಡಳಿತದ ಮೇಲೆ ಒಂದು ಕಪ್ಪು ಚುಕ್ಕೆ ಎಂದು ನಾನು ಭಾವಿಸಿದ್ದೇನೆ.
ಆದಾಯ ತೆರಿಗೆ ಇಲಾಖೆಯು ಶೋಧ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆಯೇ ವ್ಯಕ್ತಿಯೊಬ್ಬ, ಬಂದೂಕನ್ನು ಹಿಡಿದು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎನ್ನುವುದು ಅಚ್ಚರಿಯ ಸಂಗತಿ. ಇಂತಹ ಕಾರ್ಯಾಚರಣೆಗಳು ನಡೆಯುತ್ತಿರುವಾಗ ಆ ಸ್ಥಳ ತೆರಿಗೆ ಅಧಿಕಾರಿಗಳ ನಿಯಂತ್ರಣದಲ್ಲಿರಬೇಕು ಮತ್ತು ಪರಿಶೀಲನೆ ಸುರಕ್ಷಿತವಾಗಿರಬೇಕು. ಯಾವುದೇ ಶೋಧ ಕಾರ್ಯಾಚರಣೆಯಲ್ಲಿ, ಸರ್ಚ್ ವಾರಂಟ್ ಹೊರಡಿಸಲಾದ ವ್ಯಕ್ತಿಯು ಅಧಿಕಾರಿಗಳು ಶೋಧ ನಡೆಸುತ್ತಿರುವ ಸ್ಥಳದಲ್ಲಿ ಹಾಜರಿರಬೇಕು. ಸ್ಥಾಪಿತ ಕಾರ್ಯವಿಧಾನಗಳ ಪ್ರಕಾರ ಕನಿಷ್ಠ ಇಬ್ಬರು ಸ್ವತಂತ್ರ ಸಾಕ್ಷಿಗಳು ಇರಬೇಕು. ಈ ಪ್ರಕರಣ ಸಂಬಂಧ ಮಾಧ್ಯಮಗಳ ವರದಿ ಪ್ರಕಾರ ಶೋಧ ನಡೆಯುತ್ತಿರುವಾಗಲೇ ರಾಯ್ ಮತ್ತೊಂದು ಕೋಣೆಗೆ ತೆರಳಿ ಪರವಾನಗಿ ಪಡೆದ ಬಂದೂಕಿನಿಂದ ಗುಂಡು ಹಾರಿಸಿಕೊಂಡಿದ್ದಾರೆ. ಇದು ಸತ್ಯವೇ ಆಗಿದ್ದರೆ, ಇದೊಂದು ಗಂಭೀರ ಲೋಪವಾಗಿದೆ.
For More Updates Join our WhatsApp Group :




