ಬೆಂಗಳೂರಿನಲ್ಲಿ ನಕಲಿ ಕಾಲ್ ಸೆಂಟರ್ ಬಯಲು.

ಬೆಂಗಳೂರಿನಲ್ಲಿ ನಕಲಿ ಕಾಲ್ ಸೆಂಟರ್ ಬಯಲು.

ಷೇರು ಮಾರುಕಟ್ಟೆ ಹೆಸರಿನಲ್ಲಿ ಕೋಟಿ ವಂಚನೆ; ಇಬ್ಬರ ಬಂಧನ.

ಬೆಂಗಳೂರು: ಸ್ಟಾಕ್ ಮಾರ್ಕೆಟ್‌ನಲ್ಲಿ ಹೆಚ್ಚಿನ ಲಾಭಾಂಶ ನೀಡುವುದಾಗಿ ನಂಬಿಸಿ ಸಾರ್ವಜನಿಕರ ಹಣಕ್ಕೆ ಕನ್ನ ಹಾಕುತ್ತಿದ್ದ ಹೈಟೆಕ್ ವಂಚಕರ ಜಾಲವನ್ನು ಕರ್ನಾಟಕ ಸೈಬರ್ ಕಮಾಂಡ್ ಪತ್ತೆಹಚ್ಚಿದೆ. ಜಯನಗರದಲ್ಲಿ ಕಾಲ್ ಸೆಂಟರ್ ರೂಪದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಡ್ಡೆಯ ಮೇಲೆ ದಾಳಿ ನಡೆಸಿರುವ ಪೊಲೀಸರು ಇಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ. ಜಯನಗರದ 9ನೇ ಬ್ಲಾಕ್‌ನ ಅಂಜನಾದ್ರಿ ಅವೆನ್ಯೂನಲ್ಲಿರುವ ‘ಮಲ್ಟಿವೇವ್ ಬಿಸಿನೆಸ್ ಸಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್’ ಎಂಬ ಕಚೇರಿಯ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.

ಈ ಸಂಸ್ಥೆಯು ಹೊರರಾಜ್ಯದ 15 ಮಂದಿ ಎಕ್ಸಿಕ್ಯೂಟಿವ್‌ಗಳನ್ನು ಕೆಲಸಕ್ಕೆ ಇಟ್ಟುಕೊಂಡಿತ್ತು. ಇವರು ಅಮಾಯಕರಿಗೆ ಕರೆ ಮಾಡಿ, ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಅತಿ ಹೆಚ್ಚು ಲಾಭ ನೀಡುವುದಾಗಿ ಆಮಿಷವೊಡ್ಡುತ್ತಿದ್ದರು. ಗ್ರಾಹಕರು ಹಣ ವರ್ಗಾವಣೆ ಮಾಡಿದ ತಕ್ಷಣ ಫೋನ್ ಸ್ವಿಚ್ ಆಫ್ ಮಾಡಿ ಪರಾರಿಯಾಗುತ್ತಿದ್ದರು. ಗುಜರಾತ್‌ನ ಸೂರತ್ ಮೂಲದ ಕುಮಾವತ್ ಯೋಗೇಶ್ ಅಮರರಾಮ್ (ಪ್ರಸ್ತುತ ಜಯನಗರ ನಿವಾಸಿ) ಮತ್ತು ದೆಹಲಿಯ ಹಜರತ್ ನಿಜಾಮುದ್ದೀನ್ ಮೂಲದ ಇಮ್ರಾನ್ (ಬಿಟಿಎಂ ಲೇಔಟ್ ನಿವಾಸಿ) ಬಂಧಿತ ಆರೋಪಿಗಳು.

ಬಿಟಿಎಂ ಲೇಔಟ್‌ನಿಂದ ಬರುತ್ತಿದ್ದ ಕರೆಗಳನ್ನು ಡಿಜಿಟಲ್ ಫೋರೆನ್ಸಿಕ್ ಮೂಲಕ ಪತ್ತೆಹಚ್ಚಿದ ಪೊಲೀಸರು, ಐಎಂಇಐ (IMEI) ಸಂಖ್ಯೆ ಮತ್ತು ಗೂಗಲ್ ಇಮೇಲ್ ಐಡಿಗಳ ಮೂಲಕ ಆರೋಪಿ ಅಮರರಾಮ್‌ನನ್ನು ಟ್ರೇಸ್ ಮಾಡಿದ್ದಾರೆ. ಆರೋಪಿಗಳು ಗೂಗಲ್ ಮೂಲಕ ಸಂಭವನೀಯ ಗ್ರಾಹಕರ ಡೇಟಾ ಸಂಗ್ರಹಿಸುತ್ತಿದ್ದರು. ಕೊಳೆಗೇರಿ ನಿವಾಸಿಗಳ ಹೆಸರಿನಲ್ಲಿ ಸಿಮ್ ಕಾರ್ಡ್‌ಗಳನ್ನು ಪಡೆದು ಮತ್ತು ಹೊರರಾಜ್ಯದ ಬ್ಯಾಂಕ್ ಖಾತೆಗಳನ್ನು ವಂಚನೆಗೆ ಬಳಸಿಕೊಳ್ಳುತ್ತಿದ್ದರು. ವಂಚಿಸಿದ ಹಣವನ್ನು ಹಲವು ‘ಮ್ಯೂಲ್’ (Mule) ಖಾತೆಗಳಿಗೆ ವರ್ಗಾಯಿಸಿ, ನಂತರ ಎಟಿಎಂ ಮೂಲಕ ಡ್ರಾ ಮಾಡಿ ಹಂಚಿಕೊಳ್ಳುತ್ತಿದ್ದರು. ದಾಳಿಯ ವೇಳೆ ಪೊಲೀಸರು 31 ಮೊಬೈಲ್ ಫೋನ್‌ಗಳು, 13 ಲ್ಯಾಪ್‌ಟಾಪ್‌ಗಳು, 16 ಸಿಮ್ ಕಾರ್ಡ್‌ಗಳು, ಕಂಪನಿಯ ಲೆಟರ್‌ಹೆಡ್‌ಗಳು ಮತ್ತು ಸಂತ್ರಸ್ತರ ವಿವರಗಳಿರುವ ದಾಖಲೆಗಳನ್ನು ಜಪ್ತಿ ಮಾಡಿದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *