ಕೊ*ಗೆ ಸಾಥ್ ಕೊಟ್ಟು ಡ್ರಾಮಾ ಮಾಡಿದ್ದ ಹೆಂಡ್ತಿ, ಮಗ!
ಬೆಳಗಾವಿ : ಕಿತ್ತೂರು ತಾಲೂಕಿನ ಹಿರೇನಂದಿಹಳ್ಳಿ ಹೊರವಲಯದಲ್ಲಿ ವ್ಯಕ್ತಿಯ ಮರ್ಮಾಂಗ ಕತ್ತರಿಸಿ ಅಮಾನುಷವಾಗಿ ಹತ್ಯೆ ಮಾಡಿದ್ದ ಪ್ರಕರಣಕ್ಕೆ ಇದೀಗ ಸ್ಫೋಟಕ ತಿರುವು ಸಿಕ್ಕಿದೆ. ಕೊಲೆಯಾದ ವ್ಯಕ್ತಿಯ ಪತ್ನಿ ಹಾಗೂ ಮಗನೇ ಕೃತ್ಯಕ್ಕೆ ಸಾಥ್ ನೀಡಿ, ನಂತರ ನಾಟಕವಾಡಿದ್ದರು ಎಂಬ ಆಘಾತಕಾರಿ ವಿಚಾರ ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ. ಫೆಬ್ರವರಿ 20ರಂದು ಹಿರೇನಂದಿಹಳ್ಳಿ ಗ್ರಾಮ ಹೊರವಲಯದ ಜಮೀನಿನಲ್ಲಿ ಶವ ಪತ್ತೆಯಾಗಿತ್ತು. ನಂತರ ಮೃತ ವ್ಯಕ್ತಿ ಹಿರೇನಂದಿಹಳ್ಳಿ ಗ್ರಾಮದ ಕಲ್ಮೇಶ್ ಕೋಟಿ ಎಂದು ಗುರುತಿಸಲಾಯಿತು. ತುಮಕೂರಿನಲ್ಲಿ ಹೋಮ್ ಕೇರ್ ಉದ್ಯೋಗದಲ್ಲಿ ತೊಡಗಿದ್ದ ಕಲ್ಮೇಶ್, ಶಿವರಾತ್ರಿ ಹಬ್ಬದ ಪ್ರಯುಕ್ತ ಊರಿಗೆ ಬಂದಿದ್ದ ವೇಳೆ ಸಂಚು ರೂಪಿಸಿ ಕೊಲೆಗೈಯಲಾಗಿತ್ತು.
ಪಾರ್ಟಿ ನೆಪದಲ್ಲಿ ಜಮೀನಿಗೆ ಕರೆದೊಯ್ದು ಕೊ*
‘ಪಾರ್ಟಿ ಮಾಡಿ ಬರೋಣ’ ಎಂದು ಹೇಳಿ ಜಮೀನಿಗೆ ಕರೆದೊಯ್ದ ಆರೋಪಿಗಳು, ಹಲ್ಲೆ ಮಾಡಿ, ಮರ್ಮಾಂಗ ಕತ್ತರಿಸಿ ಕೊಲೆ ಮಾಡಿದ್ದರು. ಕೊಲೆಗೈದ ಬಳಿಕ ಆರೋಪಿಗಳಲ್ಲಿ ಒಬ್ಬ ತನ್ನ ಅಕ್ಕನಿಗೆ ಕರೆ ಮಾಡಿ ವಿಷಯ ತಿಳಿಸಿದ್ದ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಪತ್ನಿ–ಮಗನ ಡ್ರಾಮಾ ಬಯಲು
ಪ್ರಕರಣಕ್ಕೆ ಮತ್ತಷ್ಟು ಟ್ವಿಸ್ಟ್ ನೀಡಿದ ಸಂಗತಿ ಎಂದರೆ, ಕೊಲೆಗೆ ಸಾಥ್ ನೀಡಿದ್ದೇ ಪತ್ನಿ ಮತ್ತು ಪುತ್ರ ಎಂಬುದು. ಶವ ಪತ್ತೆಯಾದ ನಾಲ್ಕು ದಿನಗಳ ಬಳಿಕ ಗುರುತು ಪತ್ತೆಗೆ ಬಂದು ಅಂತ್ಯಸಂಸ್ಕಾರದಲ್ಲಿ ಭಾಗವಹಿಸಿದ್ದ ಪತ್ನಿ ಕಸ್ತೂರಿ ಕೋಟಿ ಹಾಗೂ ಪುತ್ರ ಕಿರಣ್ ಕೋಟಿಯನ್ನು ಪೊಲೀಸರು ಬಂಧಿಸಿದ್ದಾರೆ. ಕೊಲೆಗೆ ಕೈಜೋಡಿಸಿದ ಕಲ್ಮೇಶ್ ಬಾಮೈದ ಮಲ್ಲೇಶ ಅಂಬಣ್ಣವರ (32) ಹಾಗೂ ಅವನ ಸ್ನೇಹಿತ ಮುದುಕಪ್ಪ ಕೋಲೇಕರ್ ಅವರನ್ನು ಕೂಡ ಕಿತ್ತೂರು ಠಾಣೆ ಪೊಲೀಸರು ಬಂಧಿಸಿ ಹಿಂಡಲಗಾ ಜೈಲಿಗೆ ರವಾನಿಸಿದ್ದಾರೆ.
ಮೊದಲಿನಿಂದಲೇ ಕೊಲೆ ಬಗ್ಗೆ ಹಲವು ಆಯಾಮಗಳಲ್ಲಿ ತನಿಖೆ ನಡೆಸಿದ್ದ ಕಿತ್ತೂರು ಪೊಲೀಸರು, ಆಸ್ತಿಯ ಲೆಕ್ಕಾಚಾರವೇ ಕೊಲೆಗೆ ಮೂಲ ಕಾರಣ ಎಂಬುದನ್ನು ಪತ್ತೆಹಚ್ಚಿದ್ದಾರೆ. ನಾಲ್ವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ.
For More Updates Join our WhatsApp Group :




