ಚಿತ್ರಮಂದಿರಗಳ ನಷ್ಟ ತಡೆಯಲು ಹೊಸ ನಿರ್ಧಾರ.
ಚಿತ್ರಮಂದಿರಕ್ಕೆ ಜನ ಬರುತ್ತಿಲ್ಲ, ಸಿನಿಮಾಗಳ ಬಜೆಟ್ ಹೆಚ್ಚಾಗಿದೆ, ನಿರ್ಮಾಪಕರು ನಷ್ಟದಲ್ಲಿದ್ದಾರೆ ಎಂಬ ದೂರುಗಳು ಎಲ್ಲ ಚಿತ್ರರಂಗಗಳಿಂದಲೂ ಕೇಳಿ ಬರುತ್ತಿದೆ. ಪೈರಸಿ, ಸಿನಿಮಾಗಳನ್ನು ಪರೋಕ್ಷವಾಗಿ ಕಾಡಿದರೆ ಒಟಿಟಿಗಳು ನೇರವಾಗಿ ಜನರು ಚಿತ್ರಮಂದಿರಕ್ಕೆ ಬರದಂತೆ ತಡೆಯುತ್ತಿವೆ ಎಂದು ವಿತರಕರು ಕೆಲ ನಿರ್ಮಾಪಕರು ಆರೋಪಿಸುತ್ತಲೇ ಬಂದಿದ್ದಾರೆ. ಸ್ಟಾರ್ ನಟರ ಸಿನಿಮಾಗಳು ಸಹ ಬಿಡುಗಡೆ ಆದ ತಿಂಗಳಿಗೆ ಮುಂಚೆಯೇ ಒಟಿಟಿಗೆ ಬರುವ ಮೂಲಕ ಚಿತ್ರಮಂದಿರಗಳ ಮಾಲೀಕರು, ವಿತರಕರು ನಷ್ಟ ಹೊಂದಿದ ಉದಾಹರಣೆಗಳಿವೆ, ಇದೇ ಕಾರಣಕ್ಕೆ ಇದೀಗ ನೆರೆಯ ತೆಲುಗು ಚಿತ್ರರಂಗ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ.
ಇನ್ನು ಮುಂದೆ ನಿರ್ಮಾಣ ಆಗುವ ಯಾವುದೇ ತೆಲುಗು ಸಿನಿಮಾಗಳು ಚಿತ್ರಮಂದಿರಗಳಲ್ಲಿ ಬಿಡುಗಡೆ ಆದ ಎಂಟು ವಾರಗಳ ಬಳಿಕವಷ್ಟೆ ಒಟಿಟಿಯಲ್ಲಿ ಬಿಡುಗಡೆ ಆಗಬೇಕು ಎಂಬ ಶಿಸ್ತಿನ ಷರತ್ತನ್ನು ತೆಲುಗು ಸಿನಿಮಾ ಚೇಂಬರ್, ನಿರ್ಮಾಪಕರ ಸಂಘ ತೆಗೆದುಕೊಂಡಿದೆ. ಸುಮಾರು 40 ಮಂದಿ ಸಿನಿಮಾ ವಿತರಕರು, ಪ್ರದರ್ಶಕರು ಮತ್ತು ನಿರ್ಮಾಪಕರು ಸಭೆ ನಡೆಸಿ ಸಿನಿಮಾಗಳ ಒಟಿಟಿ ಬಿಡುಗಡೆ ಮೇಲೆ ನಿಯಂತ್ರಣ ಹೇರುವ ನಿರ್ಧಾರ ತೆಗೆದುಕೊಂಡಿದ್ದಾರೆ.
ತೆಲುಗು ಫಿಲಂ ಚೇಂಬರ್ನ ಎಕ್ಸಿಕ್ಯೂಟಿವ್ ಕಮಿಟಿ ಮುಂದೆ ನಿರ್ಧಾರವನ್ನು ಪ್ರಕಟಿಸಿದ್ದು, ಕಮಿಟಿಯಲ್ಲಿರುವ ನಿರ್ಮಾಪಕರು ಇತರೆ ಸದಸ್ಯರು ಸಹ ನಿರ್ಧಾರಕ್ಕೆ ಒಪ್ಪಿಗೆ ಸೂಚಿಸಿದ್ದು, ಇನ್ನು ಮುಂದೆ ನಿರ್ಮಾಣ ಆಗುವ ತೆಲುಗು ಸಿನಿಮಾಗಳು ಕಡ್ಡಾಯವಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಆದ ಎಂಟು ವಾರಗಳ ಬಳಿಕವೇ ಒಟಿಟಿಯಲ್ಲಿ ಬಿಡುಗಡೆ ಆಗಬೇಕು ಎಂದು ಆದೇಶಿಸಿದೆ. ಈ ಸಭೆಯಲ್ಲಿ ತೆಲುಗು ಚಿತ್ರರಂಗದ ಪ್ರಮುಖ ನಿರ್ಮಾಪಕರುಗಳಾದ ದಿಲ್ ರಾಜು, ಸುರೇಶ್ ಬಾಬು, ಸುನಿಲ್ ನಾರಂಗ್, ಠಾಗೂರ್ ಮಧು ಇನ್ನೂ ಹಲವರು ಭಾಗಿ ಆಗಿದ್ದರು.
For More Updates Join our WhatsApp Group :




