ನಾಲ್ಕನೇ ಯತ್ನದಲ್ಲಿ ಪತ್ನಿ ವಾಹನ ಡಿಕ್ಕಿಯಿಂದ ಮೃತಪಟ್ಟ ಘಟನೆ
ಮುಂಬೈ : ವ್ಯಕ್ತಿಯೊಬ್ಬ ತನ್ನ ಪತ್ನಿಗೆ ಮೂರು ಬಾರಿ ವಿಷ ಹಾಕಲು ಯತ್ನಿಸಿ ವಿಫಲವಾಗಿದ್ದ, ನಾಲ್ಕನೇ ಪ್ರಯತ್ನದಲ್ಲಿ ಕಾರು ಗುದ್ದಿಸಿ ಹತ್ಯೆ ಮಾಡಿಸಿರುವ ಘಟನೆ ಮಹಾರಾಷ್ಟ್ರದ ಬುಲ್ದಾನದಲ್ಲಿ ನಡೆದಿದೆ. 1 ಲಕ್ಷ ರೂ. ಕೊಟ್ಟು ಹಿಟ್ಮ್ಯಾನ್ ನೇಮಿಸಿಕೊಂಡು ಅಪಘಾತದಂತೆ ಕಾಣುವ ರೀತಿಯಲ್ಲೇ ಬಿಂಬಿಸಿ ಕೊಲೆ ಮಾಡಿಸಿದ್ದ.
ಪೊಲೀಸರ ಪ್ರಕಾರ, ಪ್ರಕಾಶ್ ಗವಾಂಡೆ ಎಂಬ ಆರೋಪಿ, ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದ ತನ್ನ ಪತ್ನಿ ವೃಶಾಲಿಯನ್ನು ಕೊಲೆ ಮಾಡಲು ಗುತ್ತಿಗೆ ಕೊಲೆಗಾರನನ್ನು ನೇಮಿಸಿಕೊಂಡಿದ್ದ. ಮಾರ್ಚ್ 2 ರಂದು ಈ ಘಟನೆ ನಡೆದಿದ್ದು, ಸ್ಕೂಟರ್ ಸವಾರಿ ಮಾಡುತ್ತಿದ್ದ ಮಹಿಳೆಗೆ ಬಿಳಿ ಬಣ್ಣದ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ ಮಹಿಳೆ ರಸ್ತೆ ಮೇಲೆ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಆರಂಭದಲ್ಲಿ, ಅಪಘಾತದಂತೆ ಕಂಡಿತ್ತು. ಆದರೆ ತನಿಖೆಯ ಸಮಯದಲ್ಲಿ, ಮಹಿಳೆಯ ಬಳಿ ಸುಳಿದಾಡುತ್ತಿದ್ದ MH 28 BB 5753 ನಂಬರ್ ಪ್ಲೇಟ್ ಹೊಂದಿರುವ ಕಾರಿನ ಬಗ್ಗೆ ಪೊಲೀಸರಿಗೆ ಅನುಮಾನ ಬಂದಿತ್ತು.
ಆ ಕಾರು ಮನೀಶ್ ಸೂರ್ಯವಂಶಿ ಎಂಬ ವ್ಯಕ್ತಿಗೆ ಸೇರಿದ್ದು ಎಂದು ತಿಳಿದುಬಂದಿದೆ ನಂತರ ಆತನನ್ನು ಬಂಧಿಸಲಾಯಿತು. ವಿಚಾರಣೆಯ ಸಮಯದಲ್ಲಿ, ಸೂರ್ಯವಂಶಿ ಮಹಿಳೆಯ ಪತಿಯೇ ಕೊಲೆಗೆ ಸಂಚು ರೂಪಿಸಿದ್ದನ್ನು ಹೇಳಿದ್ದಾನೆ.
ತನ್ನ ಪತ್ನಿಯನ್ನು ಕೊಲ್ಲಲು ಪ್ರಕಾಶ್ ಮಂಗೇಶ್ ಚುಲ್ಕರ್ ಎಂಬಾತನನ್ನು 1 ಲಕ್ಷ ರೂ.ಗೆ ನೇಮಿಸಿಕೊಂಡಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಂತರ ಚುಲ್ಕರ್ ಬಂಧಿತ ಚಾಲಕ ಸೂರ್ಯವಂಶಿಯನ್ನು ಆಕೆಯ ವಾಹನಕ್ಕೆ ಡಿಕ್ಕಿ ಹೊಡೆಯಲೆಂದೇ ನೇಮಿಸಿಕೊಂಡಿದ್ದ. ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದು, ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಆರೋಪಿಗಳನ್ನು ಮೂರು ದಿನಗಳ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಅಪರಾಧದ ಹಿಂದೆ ಕೌಟುಂಬಿಕ ಕಲಹ ಇರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ, ಆದರೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
For More Updates Join our WhatsApp Group :




