cm ಬದಲಾವಣೆಯೋ? ಸ್ಪೀಕರ್ ಚೇಂಜ್? ಸಂಪುಟ ಪುನರ್ ರಚನೆಯೋ?
ಬೆಂಗಳೂರು: ಸರ್ಕಾರದ ಅವಧಿ ಇನ್ನೂ ಎರಡು ವರ್ಷ ಬಾಕಿ ಇರುವಾಗಲೇ ವಿಧಾನಸೌಧದಲ್ಲಿ ಶಾಸಕರ ಗ್ರೂಪ್ ಫೋಟೋ ಶೂಟ್ ನಡೆದಿರುವುದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಯಾಕಂದ್ರೆ, ಸಾಮಾನ್ಯವಾಗಿ ವಿಧಾನಸಭೆ ಅವಧಿ ಮುಕ್ತಾಯಗೊಳ್ಳುವ ಸಂದರ್ಭದಲ್ಲಿ ಸ್ಪೀಕರ್ ಸಮ್ಮುಖದಲ್ಲಿ ಶಾಸಕರ ಗ್ರೂಪ್ ಫೋಟೋ ತೆಗೆದುಕೊಳ್ಳುವುದು ಸಂಪ್ರದಾಯವಾಗಿದೆ. ಆದ್ರೆ, ಅವಧಿಗೂ ಮುನ್ನವೇ ಸ್ಫೀಕರ್ ಯುಟಿ ಖಾದರ್, ವಿಧಾನಸೌಧದ ಗ್ರ್ಯಾಂಡ್ ಸ್ಟೆಪ್ ಮುಂಭಾಗದಲ್ಲಿ ಶಾಸಕರ ಫೋಟೋ ಶೂಟ್ ಮಾಡಿಸಿರುವುದು ಅನುಮಾನಗಳಿಗೆ ಎಡೆಮಾಡಿ ಕೊಟ್ಟಿದೆ. ಈ ಅನಿರೀಕ್ಷಿತ ಬೆಳವಣಿಗೆಯು ಸಿಎಂ ಬದಲಾವಣೆ, ಸ್ಪೀಕರ್ ಬದಲಾವಣೆ ಅಥವಾ ಸಂಪುಟ ಪುನರ್ರಚನೆಯ ಮುನ್ಸೂಚನೆಯೇ ಎಂಬ ಗೊಂದಲ ಮತ್ತು ಅನುಮಾನಗಳನ್ನು ಶಾಸಕರಲ್ಲಿ ಹುಟ್ಟುಹಾಕಿದೆ. ಹೌದು.. ಶೀಘ್ರದಲ್ಲೇ ಸಂಪುಟಕ್ಕೆ ಸರ್ಜರಿಯಾಗಲಿದ್ದು, ಸ್ಪೀಕರ್ ಖಾದರ್ ಅವರು ಸಹ ಸಂಪುಟ ಸೇರುವ ಸಾಧ್ಯತೆಯಿದ ಹೀಗಾಗಿಯೇ ವಿಧಾನಸಭೆ ಮುಕ್ತಾಯಕ್ಕೂ ಮೊದಲೇ ಫೋಟೋ ಶೂಟ್ ಮಾಡಿಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಅವಧಿಗೂ ಮುನ್ನವೇ 16 ವಿಧಾನಸಭೆಯ ಸದಸ್ಯರ ಗ್ರೂಪ್ ಫೋಟೋ ಹಿಂದಿನ ಮರ್ಮ ಏನು ಎನ್ನುವ ಬಗ್ಗೆ ಶಾಸಕರಲ್ಲಿಯೂ ಗೊಂದಲ ಉಂಟಾಗಿದೆ. ವಿಧಾನಸೌಧದ ಪಡಸಾಲೆಗಳಲ್ಲಿ ಕೂಡ ಇದೇ ವಿಚಾರ ಚರ್ಚೆಗೆ ಗ್ರಾಸವಾಗಿದ್ದು, ಪರಸ್ಪರ ಶಾಸಕರು ಕಾರಣಗಳನ್ನು ಊಹಿಸುತ್ತಿದ್ದಾರೆ. ಫೋಟೋ ಶೂಟ್ ಹಿಂದೆ ಏನಾದರೂ ರಾಜಕೀಯ ಸಂದೇಶವಿದೆಯೇ ಎಂಬ ಅನುಮಾನಗಳು ವ್ಯಕ್ತವಾಗುತ್ತಿವೆ.
ಫೋಟೋ ಶೂಟ್ ಬಗ್ಗೆ ಬಿಸಿಬಿಸಿ ಚರ್ಚೆ
ವಿಧಾನಸೌಧದ ಒಳಗಡೆ, ವಿಶೇಷವಾಗಿ ಪಡಸಾಲೆಗಳಲ್ಲಿ, ಈ ವಿಷಯವೇ ಪ್ರಮುಖ ಚರ್ಚೆಯಾಗಿದ್ದು, ಶಾಸಕರು ಪರಸ್ಪರ ತಮ್ಮದೇ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅಧಿಕೃತವಾಗಿ ಯಾವುದೇ ಸ್ಪಷ್ಟನೆ ಸಿಗದಿರುವುದರಿಂದ ಈ ಎಲ್ಲಾ ಪ್ರಶ್ನೆ ಗೊಂದಲ ಅನುಮಾನಗಳು ಹೆಚ್ಚುತ್ತಿದೆ.
ಗ್ರೂಪ್ ಫೋಟೋಗೆ 3 ಕಾರಣ ಕೊಟ್ಟ ಬಿಜೆಪಿ ಶಾಸಕ
ಕರ್ನಾ ಟಕ ವಿಧಾನಸಭೆಯ ಸಭಾಧ್ಯಕ್ಷರು ಯು. ಟಿ.ಖಾದರ್ ತಮ್ಮ ಅವಧಿಯಲ್ಲಿ ವಿಶಿಷ್ಟ ಕೆಲಸಗಳನ್ನು ಮಾಡುವುದರಲ್ಲಿ ಇವರಿಗೆ ವಿಪರೀತ ಉಮೇದು. ರಾಜ್ಯದ ಮಾಜಿ ಧೀಮಂತ ಮುಖ್ಯಮಂತ್ರಿ ದಿವಂಗತ ಕೆಂಗಲ್ ಹನುಮಂತಯ್ಯನವರು 50 ರ ದಶಕದಲ್ಲಿ ಕೇವಲ 1.50 ಕೋಟಿ ಹಣದಲ್ಲಿ ನಿರ್ಮಿಸಿದ ಭವ್ಯ ವಿಧಾನಸೌಧಕ್ಕೆ 84 ಲಕ್ಷ ರೂ. ವೆಚ್ಚದಲ್ಲಿ ಹೊಸ ಬಾಗಿಲನ್ನು ನಿರ್ಮಿಸಿದ ಹೆಗ್ಗಳಿಕೆ ನಮ್ಮ ಈ ಸಭಾಧ್ಯಕ್ಷರದ್ದು. ಹಳೆಯ ಬಾಗಿಲು ಹಾಳಾಗಿ ಹೋಗಿತ್ತೇ? ಶಿಥಿಲವಾಗಿತ್ತೇ? ಗೆದ್ದಲು ತಿಂದಿತ್ತೇ? ಅಥವಾ ಯಾರಾದರೂ ಬಾಗಿಲು ಹಳೆದಾಗಿದೆ, ಬದಲಾಯಿಸಿ ಎಂದು ಕೇಳಿದ್ದರೇ?. ಹೊಸ ಬಾಗಿಲು ಹಾಕಿಸುವುದಕ್ಕೆ ಕಾರಣ ಯಾರಿಗೂ ಗೊತ್ತಿಲ್ಲ. ಈಗ ಮತ್ತೊಂದು ಹೊಸ ಕಾರ್ಯ ಮಾಡಲು ನಮ್ಮ ಸಭಾಧ್ಯಕ್ಷರು ಇಳಿದಿದ್ದಾರೆ. ವಿಧಾನ ಸಭೆಯ ಎಲ್ಲಾ ಸದಸ್ಯರ ಗ್ರೂಪ್ ಫೋಟೋ ಯೋಜಿಸಲಾಗಿದೆ. ಸಾಮಾನ್ಯವಾಗಿ ಶಾಸಕರ ಗ್ರೂಪ್ ಫೋಟೋ ತೆಗೆಯುವುದು ಐದು ವರ್ಷ ಅವಧಿಯ ಕೊನೆಯಲ್ಲಿ. ಅಂದರೆ 2028 ಮಾರ್ಚ್- ಏಪ್ರಿಲ್ ತಿಂಗಳಲ್ಲಿ. ಹೀಗಿದ್ದಾಗ ಈ ಗ್ರೂಪ್ ಫೋಟೋ ಅಗತ್ಯವೇನಿತ್ತು? ಹಾಗೆ ಯೋಚಿಸಿದಾಗ ಕಾರಣಗಳು ಈ ಕೆಳಕಂಡಂತಿರಬಹುದು.
- A) ಈ ಅಧಿವೇಶನದ ನಂತರ ಖಾದರ್ ರವರು ಸಭಾಧ್ಯಕ್ಷರ ಸ್ಥಾನದಿಂದ ಸಚಿವ ಸ್ಥಾನಕ್ಕೆ ಹೋಗುವ ಇರಾದೆ ಹೊಂದಿರಬಹುದು. ಮತ್ತು ಅದಕ್ಕೆ ಹಸಿರು ನಿಶಾನೆಯೂ ದೊರಕಿರಬಹುದು.
- ಇಲ್ಲವೇ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಬದಲಾಗುತ್ತಾರೆಯೇ? ಅವರು ಮುಖ್ಯಮಂತ್ರಿ ಆಗಿರುವಾಗ ಒಂದು ಫೋಟೋ ಇರಲಿ ಎಂದೇ? ಅಥವಾ
- ಮಧ್ಯಂತರ ಚುನಾವಣೆ ನಡೆಯುತ್ತದೆಯೇ? ಈ ಮೇಲಿನ ಮೂರು ಕಾರಣಗಳಲ್ಲಿ ಯಾವುದು ಈ ಮಧ್ಯಂತರ ಗ್ರೂಪ್ ಫೋಟೋಗೆ ಕಾರಣ?
ಒಟ್ಟಿನಲ್ಲಿ ಅವಧಿಗೂ ಮುನ್ನವೇ 16ನೇ ವಿಧಾನಸಭೆ ಸದಸ್ಯರ ಗ್ರೂಫ್ ಫೋಟೋ ಶೂಟ್ ತೀವ್ರ ಕುತೂಹಲಕ್ಕೆ ಕಾರಣವಾಗಿದ್ದು, ರಾಜ್ಯ ರಾಜಕಾರಣದಲ್ಲಿ ಏನೆಲ್ಲಾ ಬದಲಾವಣೆಯಾಗಲಿದೆ ಎನ್ನುವುದನ್ನು ಕಾದುನೋಡಬೇಕಿದೆ.
For More Updates Join our WhatsApp Group :




