ಪ್ರಮಾಣವಚನ ಬೋಧಿಸಲು ತಡ ಮಾಡಿದರೆ ಸ್ಪೀಕರ್ ವಿರುದ್ಧ ಹೋರಾಟ.
ಬೆಂಗಳೂರು: ಶೃಂಗೇರಿ ಶಾಸಕ ಡಿ.ಎನ್.ಜೀವರಾಜ್ ಅವರಿಗೆ ಸ್ಪೀಕರ್ ಯು.ಟಿ.ಖಾದರ್ ಪ್ರಮಾಣವಚನ ಬೋಧಿಸಲು ತಡ ಮಾಡುತ್ತಿದ್ದಾರೆ. ಆದ್ದರಿಂದ ರಾಜ್ಯಪಾಲರೇ ನೇರವಾಗಿ ಪ್ರಮಾಣವಚನ ಬೋಧಿಸಲು ಕೋರಿದ್ದೇವೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಹೇಳಿದರು.
ರಾಜ್ಯಪಾಲರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶೃಂಗೇರಿ ವಿಧಾನಸಭಾ ಕ್ಷೇತ್ರದ ಮತ ಮರು ಎಣಿಕೆಯಲ್ಲಿ ಬಿಜೆಪಿಯ ಡಿ.ಎನ್.ಜೀವರಾಜ್ ಶಾಸಕರು ಎಂಬ ಫಲಿತಾಂಶ ಬಂದಿದೆ. ಚುನಾವಣಾ ಆಯೋಗದಿಂದ ಎಲ್ಲ ಶಾಸಕರಿಗೆ ಪ್ರಮಾಣ ಪತ್ರ ನೀಡುವಂತೆ ಇವರಿಗೂ ಪ್ರಮಾಣಪತ್ರ ಸಿಕ್ಕಿದೆ. ರಾಜ್ಯ ಸರ್ಕಾರದ ರಾಜ್ಯಪತ್ರದ ಆದೇಶವೂ ಬಂದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಎಲ್ಲ ಶಾಸಕರು ಇದೇ ರೀತಿ ಶಾಸಕರು ಎನಿಸಿಕೊಳ್ಳುತ್ತಾರೆ. ಈ ಕುರಿತು ಸಭಾಧ್ಯಕ್ಷ ಯು.ಟಿ.ಖಾದರ್ ಅವರಿಗೆ ಫೋನ್ ಕರೆ ಮಾಡಿ ಮಾತಾಡಲು ಯತ್ನಿಸಿದರೆ ಬೇಕೆಂದೇ ಕರೆ ಸ್ವೀಕರಿಸಲಿಲ್ಲ. ಈಗ ಭೇಟಿ ಮಾಡಿದರೆ ನನಗೆ ಕಾನೂನಿನ ಬೋಧನೆ ಮಾಡುತ್ತಿದ್ದಾರೆ. ಸ್ಪೀಕರ್ ಕೂಡ ಇದೇ ರೀತಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಹಾಗೆ ಆಯ್ಕೆಯಾಗುವಾಗ ಅವರೇನೂ ಕೋರ್ಟ್ಗೆ ಹೋಗಿರಲಿಲ್ಲ. ಯಾವುದೇ ಶಾಸಕರ ವಿರುದ್ಧ ಕೋರ್ಟ್ ಗೆ ಹೋಗಲು 45 ದಿನಗಳ ಕಾಲಾವಕಾಶವಿದ್ದರೂ ಪ್ರಮಾಣವಚನಕ್ಕೆ ಅದು ಅಡ್ಡಿಯಾಗುವುದಿಲ್ಲ. ಆದರೆ ಸ್ಪೀಕರ್ ಯು.ಟಿ.ಖಾದರ್ ಮಾತ್ರ ಪ್ರಮಾಣವಚನಕ್ಕೆ ಅವಕಾಶ ಮಾಡಿಕೊಡದೆ ಹೊಸ ಸಂಪ್ರದಾಯ ಆರಂಭಿಸಿದ್ದಾರೆ ಎಂದು ದೂರಿದರು.
ತಮಿಳುನಾಡಿನಲ್ಲಿ ಕಾಂಗ್ರೆಸ್ ಊಟ ಸಿಗುವ ಕಡೆ ಓಡುತ್ತಿದೆ. ಈಗ ನಟ ವಿಜಯ್ ಬಳಿ ಹೋಗಿದ್ದಾರೆ. ಡಿಎಂಕೆಗೆ ಕಾಂಗ್ರೆಸ್ ಕೈ ಕೊಡುವ ಲಕ್ಷಣ ಕಂಡುಬಂದಿದೆ. ಕಾಂಗ್ರೆಸ್ ಗೆ ನ್ಯಾಯ ನೀತಿ ಇಲ್ಲದೆ ಗೆದ್ದ ಎತ್ತಿನ ಬಾಲ ಹಿಡಿಯುತ್ತಿದ್ದಾರೆ. ಹಿಂದುತ್ವದ ವಿರುದ್ಧ ಮಾತಾಡಿದ ಉದಯ್ ಹಾಗೂ ಸ್ಟಾಲಿನ್ ಸೋತಿದ್ದಾರೆ. ಹಿಂದುಗಳನ್ನು ಕೆಣಕಿದರೆ ಏನಾಗುತ್ತದೆ ಎಂದು ಇದರಿಂದ ತಿಳಿಯುತ್ತದೆ ಎಂದರು.
For More Updates Join our WhatsApp Group :




