50 ವರ್ಷಗಳ ರಾಜಕೀಯ ಪಯಣಕ್ಕೆ ಗೌರವ: ಚಿತ್ರದುರ್ಗದಲ್ಲಿ ಬಿಎಸ್ ಯಡಿಯೂರಪ್ಪ ಅಭಿಮಾನೋತ್ಸವ
ಚಿತ್ರದುರ್ಗ: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ 50 ವರ್ಷಗಳ ರಾಜಕೀಯ ಜೀವನವನ್ನು ಸಂಭ್ರಮಿಸುವ ಅಂಗವಾಗಿ ಚಿತ್ರದುರ್ಗದಲ್ಲಿ ಭವ್ಯ ‘ಬಿಎಸ್ವೈ ಅಭಿಮಾನೋತ್ಸವ’ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾವಿರಾರು ಬಿಜೆಪಿ ಕಾರ್ಯಕರ್ತರು ಮತ್ತು ಅಭಿಮಾನಿಗಳು ಆಗಮಿಸಿ ಭರ್ಜರಿ ಸ್ವಾಗತ ಕೋರಿದರು.
ವೇದಿಕೆಗೆ ಬಿಎಸ್ ಯಡಿಯೂರಪ್ಪ ಆಗಮಿಸುತ್ತಿದ್ದಂತೆ “ಬಿಎಸ್ವೈ ಜೈ”, “ರಾಜಾಹುಲಿ ಜೈ” ಎಂಬ ಘೋಷಣೆಗಳು ಮೊಳಗಿದವು. ಅಭಿಮಾನಿಗಳ ಜೈಕಾರದ ನಡುವೆ ಯಡಿಯೂರಪ್ಪ ಕೈಮುಗಿದು ಜನರನ್ನು ಅಭಿನಂದಿಸುತ್ತಾ ವೇದಿಕೆಗೆ ಎಂಟ್ರಿ ನೀಡಿದರು. ಕಾರ್ಯಕ್ರಮದಲ್ಲಿ ಸಂಸದ ಗೋವಿಂದ ಕಾರಜೋಳ ಅವರು ಯಡಿಯೂರಪ್ಪ ಅವರಿಗೆ ಶಾಲು ಹೊದಿಸಿ ಗೌರವಿಸಿದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಸಮಾರಂಭಕ್ಕೆ ವಿಶೇಷ ಮೆರುಗು ತಂದರು. ಬಿಜೆಪಿ ನಾಯಕರ ಉಪಸ್ಥಿತಿಯಿಂದ ಕಾರ್ಯಕ್ರಮ ರಾಜಕೀಯವಾಗಿ ಗಮನ ಸೆಳೆಯಿತು. ರಾಜ್ಯದ ಮೂಲೆಮೂಲೆಗಳಿಂದ ಬಂದಿದ್ದ ಕಾರ್ಯಕರ್ತರಿಗಾಗಿ ಉಪಹಾರ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಕೂಡ ಮಾಡಲಾಗಿತ್ತು.

ಯಡಿಯೂರಪ್ಪ ಅವರ ರಾಜಕೀಯ ಜೀವನ, ರೈತರ ಪರ ಹೋರಾಟ, ಬಿಜೆಪಿ ಸಂಘಟನೆ ಬಲಪಡಿಸಿದ ಪಾತ್ರ ಹಾಗೂ ರಾಜ್ಯ ರಾಜಕೀಯದಲ್ಲಿ ಅವರ ಪ್ರಭಾವವನ್ನು ಹಲವರು ಈ ವೇಳೆ ಸ್ಮರಿಸಿದರು. ಅಭಿಮಾನಿಗಳು ಬಿಎಸ್ವೈ ಅವರ ಚಿತ್ರವಿರುವ ಬ್ಯಾನರ್ಗಳು ಮತ್ತು ಕೇಸರಿ ಧ್ವಜಗಳನ್ನು ಹಿಡಿದು ಸಂಭ್ರಮಿಸಿದರು.
ಕಾರ್ಯಕ್ರಮದ ಹಿನ್ನೆಲೆಯಲ್ಲಿ ಚಿತ್ರದುರ್ಗ ನಗರದಲ್ಲಿ ಭದ್ರತಾ ಕ್ರಮಗಳನ್ನು ಬಿಗಿಗೊಳಿಸಲಾಗಿತ್ತು. ಅಭಿಮಾನೋತ್ಸವ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದ್ದು, ಬಿಜೆಪಿ ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ಮೂಡಿಸಿದೆ.
For More Updates Join our WhatsApp Group :




