ತುಂಬಿದ ಭದ್ರಾ ಅಣೆಕಟ್ಟು : ನಾಲ್ಕು ಕ್ರಸ್ಟ್​ ಗೇಟ್​ ಮೂಲಕ ನೀರು ಹೊರಕ್ಕೆ

ಶಿವಮೊಗ್ಗ: ನಾಡಿನ ಜೀವನದಿಯಾದ ಭದ್ರಾ ಅಣೆಕಟ್ಟು ತುಂಬಿದ್ದು, ಅಣೆಕಟ್ಟೆಯಿಂದ 12 ಸಾವಿರ ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಲಾಗಿದೆ. ಜಿಲ್ಲೆಯ ಭದ್ರಾವತಿ ತಾಲೂಕಿನ ಬಿಆರ್​ಪಿಯಲ್ಲಿ ಇರುವ ಭದ್ರಾ ಅಣೆಕಟ್ಟೆ 186 ಅಡಿ ಸಮುದ್ರ ಮಟ್ಟದಿಂದ ಎತ್ತರವಿದೆ. ಅಣೆಕಟ್ಟೆ ಭರ್ತಿಯಾಗಿದ್ದರಿಂದ ಇಂದು ಅಧಿಕಾರಿಗಳು ನಾಲ್ಕು ಕ್ರಸ್ಟ್​ ಗೇಟ್​ಗಳಿಂದ 12 ಸಾವಿರ ಕ್ಯೂಸೆಕ್ ನೀರನ್ನು ಹೊರಕ್ಕೆ ಬಿಟ್ಟಿದ್ದಾರೆ.

ಅಣೆಕಟ್ಟೆಗೆ 20 ಸಾವಿರ ಕ್ಯೂಸೆಕ್ ನೀರಿನ ಒಳ ಹರಿವು ಇದೆ. ಭದ್ರಾ ಅಣೆಕಟ್ಟೆಯ ಜಲಾನಯನ ಪ್ರದೇಶವಾದ ಚಿಕ್ಕಮಗಳೂರಿನ ಕಳಸ, ಹೊರನಾಡು ಭಾಗದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಮುಂಜಾಗ್ರತ ಕ್ರಮವಾಗಿ ನದಿಗೆ ನೀರು ಬಿಡಲಾಗುತ್ತಿದೆ.‌ ಒಳ ಹರಿವು ಹೆಚ್ಚಾಗಿದ್ದು, ಹೆಚ್ಚಿನ ಪ್ರಮಾಣದಲ್ಲಿ ನೀರು ನದಿಗೆ ಬಿಟ್ಟರೆ, ನದಿ ಪಾತ್ರದಲ್ಲಿ ಪ್ರವಾಹ ಉಂಟಾಗಬಹುದೆಂದು ಅಧಿಕಾರಿಗಳು ಈಗ ಕಡಿಮೆ ಪ್ರಮಾಣದಲ್ಲಿ ನೀರು ಬಿಡುಗಡೆಗೊಳಿಸಿದ್ದಾರೆ.

ನದಿಗೆ ಹೆಚ್ಚಿಗೆ ಪ್ರಮಾಣದಲ್ಲಿ ನೀರು ಬಿಟ್ಟರೆ, ಭದ್ರಾವತಿ, ಹೊನ್ನಾಳಿ, ಹರಿಹರ ಸೇರಿದಂತೆ ನದಿ ಪಾತ್ರದ ಭಾಗದಲ್ಲಿ ಪ್ರವಾಹ ಉಂಟಾಗುತ್ತದೆ. ಅಲ್ಲದೆ, ಇದು ಶಿವಮೊಗ್ಗ ನಗರಕ್ಕೂ ಸಹ ಸಮಸ್ಯೆಯನ್ನುಂಟು ಮಾಡುವ ಸಾಧ್ಯತೆ ಇದೆ. ನಿನ್ನೆ ನಡೆದ ಕಾಡಾ ಸಭೆಯಲ್ಲಿ ಎಡ ಮತ್ತು ಬಲ ಕಾಲುವೆಗಳಿಗೆ ಸತತ 120 ದಿನ ನೀರು ಹರಿಸಬೇಕೆಂದು ತೀರ್ಮಾನಿಸಿ, ಕಾಲುವೆಗಳಿಗೆ ನೀರು ಬಿಡುಗಡೆ ಮಾಡಲಾಗುತ್ತಿದೆ.

Leave a Reply

Your email address will not be published. Required fields are marked *