ಕೊಪ್ಪಳ || ಸಾವಯವ ಭತ್ತಕ್ಕೆ ಹೆಚ್ಚುತ್ತಿದೆ ಬೇಡಿಕೆ, ಮಾರುಕಟ್ಟೆ ವ್ಯವಸ್ಥೆ

ಕೊಪ್ಪಳ || ಸಾವಯವ ಭತ್ತಕ್ಕೆ ಹೆಚ್ಚುತ್ತಿದೆ ಬೇಡಿಕೆ, ಮಾರುಕಟ್ಟೆ ವ್ಯವಸ್ಥೆ

ಕೊಪ್ಪಳ: ಸಾವಯವ ಬೇಸಾಯಕ್ಕೆ ಇತ್ತೀಚಿನ ದಿನಗಳಲ್ಲಿ ಬೇಡಿಕೆ ಹೆಚ್ಚಾಗುತ್ತಿದೆ. “ನಮ್ಮ ಜಿಲ್ಲೆಯಲ್ಲಿ ಸುಮಾರು 3 ಲಕ್ಷ ಎಕರೆಗೂ ಅಧಿಕ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತದೆ. ಸಾವಯವ ಕೃಷಿಗೆ ತುಂಬಾ ಬೇಡಿಕೆಯಿದ್ದು, ಹಾಗಾಗಿ ರೈತರಿಗೆ ಅರಿವು ಮೂಡಿಸಲು ಕೃಷಿ ಇಲಾಖೆಯಿಂದ ಸಾವಯವ ಕೃಷಿ ಮೇಳವನ್ನು ಹಮ್ಮಿಕೊಳ್ಳಲಾಗಿದೆ” ಎಂದು ಕೊಪ್ಪಳ ಜಿಲ್ಲಾಧಿಕಾರಿ ನಲಿನ್ ಅತುಲ್ ಹೇಳಿದರು.

ಕೊಪ್ಪಳ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್ನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಮತ್ತು ಕೃಷಿ ಇಲಾಖೆಯ ಸಹಯೋಗದಲ್ಲಿ ಆಯೋಜಿಸಲಾದ ಜಿಲ್ಲಾ ಮಟ್ಟದ ಸಾವಯವ ಮೇಳ ಹಾಗೂ ವಿಚಾರಗೋಷ್ಠಿಯನ್ನು ಜಿಲ್ಲಾಧಿಕಾರಿಗಳು ಉದ್ಘಾಟಿಸಿದರು.

“ಜಿಲ್ಲೆಯ ರೈತರು ಸಾವಯವ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳಲು ಮುಂದೆ ಬರಬೇಕು, ಸಾವಯವ ಕೃಷಿಗೆ ಉತ್ತಮ ಮಾರುಕಟ್ಟೆ ವ್ಯವಸ್ಥೆಯನ್ನು ಕಲ್ಪಿಸಲು ಕೃಷಿ ಇಲಾಖೆಯಿಂದ ಅಗತ್ಯ ಕ್ರಮ ಕೈಗೊಳ್ಳಲಾಗುವುದು” ಎಂದು ಕೊಪ್ಪ ಜಿಲ್ಲಾಧಿಕಾರಿ ನಲಿನ್ ಅತುಲ್ ಭರವಸೆ ನೀಡಿದರು. ಸಾವಯವ ಕೃಷಿ: ನಲಿನ್ ಅತುಲ್ ಮಾತನಾಡಿ, “ಕೃಷಿಯಲ್ಲಿ ಅತೀ ಹೆಚ್ಚು ರಾಸಾಯನಿಕಗಳ ಬಳಕೆಯಿಂದಾಗಿ ಭೂಮಿಯು ತನ್ನ ಫಲವತ್ತತೆಯನ್ನು ಕಳೆದುಕೊಳ್ಳುತ್ತದೆ. ರಾಸಾಯನಿಕವಾಗಿ ಬೆಳೆದ ಕೃಷಿ ಪದಾರ್ಥಗಳ ಸೇವನೆ ಜನರ ಆರೋಗ್ಯಕ್ಕೂ ತುಂಬಾ ಹಾನಿಕಾರವಾಗಿದ್ದು, ಭೂಮಿಯ ಸಂರಕ್ಷಣೆ, ಜನರ ಆರೋಗ್ಯಕ್ಕಾಗಿ ಸಾವಯವ ಕೃಷಿಯು ಇಂದಿನ ದಿನಮಾನಗಳಲ್ಲಿ ಬಹಳ ಮಹತ್ವವಾಗಿದೆ” ಎಂದರು.

“ಗಂಗಾವತಿ, ಕಾರಟಗಿ, ಕನಕಗಿರಿ, ಕೊಪ್ಪಳ ತಾಲ್ಲೂಕಿನ ಕೆಲ ಭಾಗ ಸೇರಿ ನಮ್ಮ ಜಿಲ್ಲೆಯಲ್ಲಿ ಸುಮಾರು 3 ಲಕ್ಷ ಎಕರೆಗೂ ಅಧಿಕ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತದೆ. ಸಾವಯವ ಕೃಷಿಗೆ ತುಂಬಾ ಬೇಡಿಕೆಯಿದ್ದು, ಹಾಗಾಗಿ ರೈತರಿಗೆ ಅರಿವು ಮೂಡಿಸಲು ಕೃಷಿ ಇಲಾಖೆಯಿಂದ ಈ ಸಾವಯವ ಕೃಷಿ ಮೇಳವನ್ನು ಹಮ್ಮಿಕೊಳ್ಳಲಾಗಿದೆ” ಎಂದು ಹೇಳಿದರು. “ಸಾವಯವ ಪದಾರ್ಥಗಳಿಗೆ ಹೆಚ್ಚು ಬೇಡಿಕೆಯಿದ್ದು, ರೈತರು ಸಾವಯವ ಕೃಷಿ ಪದ್ಧತಿಯಲ್ಲಿ ಬೆಳೆದ ಬೆಳೆಗಳನ್ನು ಒಂದು ಬ್ರ್ಯಾಂಡಿಂಗ್ ಮಾಡಿದರೇ ಒಳ್ಳೆಯ ಬೆಲೆ ಸಿಗಲಿದೆ. ಇದರಿಂದ ಗ್ರಾಹಕರಿಗೂ ಉತ್ತಮ ಆರೋಗ್ಯ ದೊರೆಯುತ್ತದೆ. ಕೊಪ್ಪಳ ಜಿಲ್ಲೆಯಲ್ಲಿ ಸಮಗ್ರ ಸಾವಯಕ ಕೃಷಿ ಪದ್ಧತಿಯನ್ನು ಜಾರಿಗೆ ಮಾಡಲು ಮುಂಬರುವ 5 ವರ್ಷದಲ್ಲಿ ಏನು ಮಾಡಬೇಕೆಂಬುವುದಕ್ಕೆ ಯೋಜನೆಗಳನ್ನು ರೂಪಿಸಲಾಗುತ್ತಿದೆ” ಎಂದು ಜಿಲ್ಲಾಧಿಕಾರಿಗಳು ವಿವರಿಸಿದರು.

“ಜಿಲ್ಲೆಯಲ್ಲಿ ತೋಟಗಾರಿಕೆಗೂ ಉತ್ತಮ ಅವಕಾಶವಿದ್ದು, ನಮ್ಮ ಜಿಲ್ಲೆ ಹಾಗೂ ಉತ್ತರ ಕರ್ನಾಟಕ ಭಾಗಗಳಲ್ಲಿ ಬೆಳೆಯುತ್ತಿರುವ ಹಣ್ಣುಗಳಿಗೆ ತುಂಬಾ ಬೇಡಿಕೆಯಿದೆ. ರೈತರು ತಮ್ಮ ಜಮೀನಿನ ಶೇ.40 ರಷ್ಟು ಭಾಗದಲ್ಲಿ ತೋಟಗಾರಿಕೆ ಅಳವಡಿಸಿಕೊಳ್ಳಬೇಕು. ಇದಕ್ಕಾಗಿ ಜಿಲ್ಲೆಯ ತೋಟಗಾರಿಕೆ ಇಲಾಖೆಯುವ ಹಲವಾರು ಮೇಳಗಳನ್ನು ಹಮ್ಮಿಕೊಂಡು ರೈತರಿಗೆ ಈ ಕುರಿತು ಅರಿವು ಮೂಡಿಸುತ್ತಿದೆ” ಎಂದರು. ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ರತ್ನಂ ಪಾಂಡೆ ಮಾತನಾಡಿ, “ಜಿಲ್ಲೆಯಲ್ಲಿ 2 ಲಕ್ಷ 80 ಸಾವಿರ ರೈತರು ಹಾಗೂ 4 ಲಕ್ಷ 30 ಸಾವಿರ ಹೆಕ್ಟೇರ್ ಕೃಷಿ ಭೂಮಿಯಿದ್ದು, ಇದರಲ್ಲಿ 4 ಸಾವಿರ ಹೆಕ್ಟೇರ್ ಜಮೀನಿನಲ್ಲಿ 3 ಸಾವಿರ ರೈತರು ಮಾತ್ರ ಸಾವಯವ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡಿದ್ದಾರೆ. ಸಾವಯವ ಕೃಷಿಯನ್ನು ಹೆಚ್ಚಿಸಲು ಈ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ” ಎಂದು ತಿಳಿಸಿದರು. “ಅಳವಂಡಿ ಭಾಗದಲ್ಲಿನ ಒಬ್ಬ ರೈತನು ತನ್ನ 5 ರಿಂದ 10 ಎಕರೆ ಜಮೀನಿನಲ್ಲಿ ಕಳೆದ ಮೂರು ವರ್ಷದಿಂದ ಸಾವಯವ ಕೃಷಿ ಪದ್ಧತಿಯನ್ನು ಕೈಗೊಂಡು ದಾಳಿಂಬೆ ಬೆಳೆದು ರೂ. 30 ರಿಂದ 40 ಲಕ್ಷದವರೆಗೆ ಲಾಭ ಪಡೆದಿದ್ದಾರೆ. ಭವಿಷ್ಯದಲ್ಲಿ ಸಾವಯವ ಕೃಷಿಗೆ ಅತ್ಯಂತ ಮಹತ್ವದ ಬೇಡಿಕೆಯಿದ್ದು, ರೈತರು ಸಾವಯವ ಕೃಷಿ ಮಾಡಲು ಮುಂದೆ ಬರಬೇಕು. ಸಾವಯವ ಕೃಷಿಯು ಕೇವಲ ಒಂದೇ ಬೆಳೆಗೆ ಮಾತ್ರ ಸಿಮಿತವಾಗದೇ, ವಿವಿಧ ಬೆಳೆಗಳನ್ನು ಬೆಳೆಯುವುದರ ಜೊತೆಗೆ ಹೈನುಗಾರಿಕೆ, ಪಶುಪಾಲನೆ, ಕೋಳಿ ಸಾಕಾಣಿಕೆಯಂತಹ ಚಟುವಟಿಕೆಗಳಿಗೂ ಸಹಾಯಕವಾಗುತ್ತದೆ” ಎಂದು ವಿವರಣೆ ನೀಡಿದರು.

ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಟಿ. ಎಸ್. ರುದ್ರೇಶಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, “ಸಾವಯವ ಕೃಷಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಒತ್ತು ನೀಡುತ್ತಿವೆ. ಕೃಷಿಯಲ್ಲಿ ಅತಿ ಹೆಚ್ಚು ರಾಸಾಯನಿಕ ಉಪಯೋಗದಿಂದ ನೀರು, ಭೂಮಿ ಮಣ್ಣಿನ ಫಲವತ್ತತೆ ಕಲುಷಿತವಾಗುವುದರ ಜೊತೆಗೆ ಪ್ರಾಣಿಗಳು ಹಾಗೂ ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಹಾಗಾಗಿ ರೈತರು ಸಾವಯವ ಕೃಷಿಗೆ ಹೆಚ್ಚಿನ ಒತ್ತು ನೀಡಬೇಕು” ಎಂದು ಕರೆ ಕೊಟ್ಟರು. ಕೃಷಿ ವಿಶ್ವವಿದ್ಯಾಲಯ ರಾಯಚೂರಿನ ಸಾವಯವ ವಿಭಾಗದ ಮುಖ್ಯಸ್ಥರಾದ ಡಾ. ಬಸವಣ್ಣೆಪ್ಪ ಮಾತನಾಡಿ, “ಕೃಷಿಯಲ್ಲಿ ಮಹಿಳೆಯರ ಪಾತ್ರವು ಬಹಳ ಪ್ರಮುಖವಾಗಿದೆ. ರೈತರಿಗೆ ಕೃಷಿಯಲ್ಲಿ ನಮಗಿಂತ ಅವರಿಗೆ ಹೆಚ್ಚಿನ ಅನುಭವ ಇರುತ್ತದೆ. ಅವರೇ ಪ್ರಥಮ ವಿಜ್ಞಾನಿಗಳು. ಬೆವರು ಸುರಿಸಿ ಕೆಲಸ ಮಾಡುವ ರೈತರಿಗೆ ಯಾವುದೇ ಕಾಯಿಲೆ ಬರುವದಿಲ್ಲ. ಸಾವಯವ ಕೃಷಿ ಮಾಡುವವರಿಗೆ ಸಾವಿಲ್ಲ. ಅವರು 80 ರಿಂದ 90 ವರ್ಷಗಳ ಕಾಲ ಬದುಕುತ್ತಾರೆ. ರಾಗಿ ತಿಂದವನು ನಿರೋಗಿ. ಸಿರಿಧಾನ್ಯಗಳ ಸೇವನೆಯಿಂದ ಹಲವಾರು ಕಾಯಿಲೆಗಳು ದೂರವಾಗುತ್ತವೆ” ಎಂದು ಹೇಳಿದರು.

Leave a Reply

Your email address will not be published. Required fields are marked *