ಪ್ರಧಾನಿ ಮೋದಿ ಭೇಟಿಗೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಚುರುಕುಗೊಂಡಿದೆ.

ಪ್ರಧಾನಿ ಮೋದಿ ಭೇಟಿಗೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಚುರುಕುಗೊಂಡಿದೆ.

ಉಡುಪಿ: ಪ್ರಧಾನಿ ನರೇಂದ್ರ ಮೋದಿ ನವೆಂಬರ್ 28ಕ್ಕೆ ಉಡುಪಿಯ ಕೃಷ್ಣ ಮಠಕ್ಕೆ ಭೇಟಿ ಕೊಡಲಿದ್ದಾರೆ. ಈ ಹಿನ್ನೆಲೆಯಲ್ಲಿ ನಗರದ ರಸ್ತೆಗಳ ದುರಸ್ತಿ ಕಾರ್ಯ ಜೋರಾಗಿದೆ. ಉಡುಪಿಗೆ ಬರಲಿರುವ ಪ್ರಧಾನಿ ಮೋದಿ, ಆದಿ ಉಡುಪಿಯ ಹೆಲಿಪ್ಯಾಡ್​ನಲ್ಲಿ‌ ಲ್ಯಾಂಡಿಂಗ್ ಮಾಡುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ, ಈವರೆಗೆ ಆಮೆಗತಿಯಲ್ಲಿ ಸಾಗುತ್ತಿದ್ದ ಮಲ್ಪೆ -ಮೊಳಕಾಲ್ಮೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಚುರುಕುಗೊಂಡಿದೆ. ಕರಾವಳಿ ಬೈಪಾಸ್ ಬಳಿ ಎಡಬಿಡದೆ ರಸ್ತೆ ದುರಸ್ತಿ ಕಾರ್ಯ ನಡೆಯುತ್ತಿದೆ. ಕೃಷ್ಣಮಠದವರೆಗೂ ರಾಷ್ಟ್ರೀಯ ಹೆದ್ದಾರಿಯಲ್ಲೇ ವಾಹನ ಸಂಚಾರಿಸಬೇಕಾಗಿದ್ದು, ಮಲ್ಪೆ ಮೊಳಕಾಲ್ಮೂರು ರಸ್ತೆ ಕಾಮಗಾರಿ ವೇಗ ಪಡೆದುಕೊಂಡಿದೆ.

ಇದೇ ವಿಚಾರ ಇದೀಗ ಜಿಲ್ಲೆಯ ಜನರ ಗಮನ ಸೆಳೆದಿದೆ. ಗಣ್ಯರು ಬರುವಾಗ ರಸ್ತೆ ದುರಸ್ತಿಯಾಗುತ್ತದೆ, ಆದರೆ ಗ್ರಾಮೀಣ ಭಾಗದ ಇತರ ರಸ್ತೆಗಳ ಪಾಡೇನು ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ಈ ಬಾರಿ ದೇಶದಲ್ಲೇ ಅತಿ ಹೆಚ್ಚು ಮಳೆ ಸುರಿದಿದೆ. ಮೇ 20 ರಿಂದ ನಿರಂತರ ಮಳೆಯಾದ ಕಾರಣ ರಾಷ್ಟ್ರೀಯ ಹೆದ್ದಾರಿ ಮಾತ್ರವಲ್ಲ, ಲೋಕೋಪಯೋಗಿ ಹಾಗೂ ಗ್ರಾಮ ಪಂಚಾಯತ್ ರಸ್ತೆಗಳು ಕೂಡ ಸಂಚರಿಸಲಾರದಷ್ಟು ಹದಗೆಟ್ಟಿವೆ. ಈ ಬಗ್ಗೆ ಎಷ್ಟೇ ಕೇಳಿಕೊಂಡರು ಜಿಲ್ಲಾಡಳಿತ ಸ್ಪಂದಿಸಿಲ್ಲ. ಅಪಘಾತಗಳು ಹೆಚ್ಚಾಗಿದ್ದು, ಮೂಳೆಮುರಿತ, ವಾಹನ ಜಖಂ ಮಾಮೂಲಾಗಿದೆ. ಈಗ ಮಳೆಯ ಪ್ರಮಾಣ ಇಳಿಕೆಯಾಗಿದೆ, ಇನ್ನಾದರೂ ರಸ್ತೆ ಕಾಮಗಾರಿ ಮಾಡಬಾರದಾ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ಗಣ್ಯರು ಬರುವ ರಸ್ತೆಗಳಿಗೆ ಸಿಗುವ ದುರಸ್ತಿ ಭಾಗ್ಯ, ನಮ್ಮೂರಿನ ರಸ್ತೆಗಳಿಗೆ ಸಿಗುವುದು ಯಾವಾಗ ಎಂದು ಕೇಳುತ್ತಿದ್ದಾರೆ.

ಮಳೆ ಹಾನಿ ಪರಿಹಾರಕ್ಕೆ ಸಾಕಷ್ಟು ಹಣ ಇದೆ ಎಂದು ಜಿಲ್ಲಾಡಳಿತ ಹೇಳುತ್ತಿದೆ. ಆದರೆ ರಸ್ತೆ ಮಾತ್ರ ದುರಸ್ತಿ ಆಗುತ್ತಿಲ್ಲ, ಹೀಗ್ಯಾಕೆ ಎಂಬುದೇ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *