ಶೆಡ್ಯೂಲ್ 9ಗೆ ಸೇರಿಸಲು ಒತ್ತಡಕ್ಕೆ ಸಿಎಂ ಸಹಮತ..
ಬೆಂಗಳೂರು: ಎಸ್ಸಿ, ಎಸ್ಟಿ, ಒಬಿಸಿ ಮೀಸಲಾತಿಯ ಗೊಂದಲ ಬಗೆಹರಿಸಲು ಜನಪ್ರತಿನಿಧಿಗಳ ಸಭೆ ಕರೆದು ತಕ್ಷಣ ಪ್ರಧಾನಿ ಹಾಗೂ ಕೇಂದ್ರ ಪರಿಶಿಷ್ಟ ಪಂಗಡ ಇಲಾಖೆ ಸಚಿವರನ್ನು ಭೇಟಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು. ಕರ್ನಾಟಕ ವಾಲ್ಮೀಕಿ ಸಮಾಜದ ಸಮಾನ ಮನಸ್ಕರ ವೇದಿಕೆಯ ಅಧ್ಯಕ್ಷರಾದ ವಿ.ಎಸ್. ಉಗ್ರಪ್ಪನವರ ನೇತೃತ್ವದ ನಿಯೋಗದ ಜೊತೆಗೆ ಸಭೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಶೇ. 56 ಮೀಸಲಾತಿ ಹೆಚ್ಚಳದ ವಿಚಾರಕ್ಕೆ ಈಗಾಗಲೇ ಕೇಂದ್ರಕ್ಕೆ ಪ್ರಸ್ತಾವನೆ ನೀಡಲಾಗಿದೆ ಎಂದರು.

2015 ರಲ್ಲಿ ಎಸ್ಸಿ ಎಸ್ಟಿ ಮೀಸಲಾತಿ ಹೆಚ್ಚಿಸಲು ಹೈಕೋರ್ಟ್ ನಲ್ಲಿ ಸಲ್ಲಿಸಿದ ಅರ್ಜಿ ವಿಚಾರಣೆ ಹಿನ್ನೆಲೆಯಲ್ಲಿ ಹೈಕೋರ್ಟ್ ರಿಟ್ ಅರ್ಜಿ ಸಂಖ್ಯೆ 16852/2015 ರಲ್ಲಿ ಮೀಸಲಾತಿ ಹೆಚ್ಚಳದ ಮನವಿ ಪರಿಗಣಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಅದರಂತೆ ನ್ಯಾ. ನಾಗಮೋಹನ್ ದಾಸ್ ಆಯೋಗ ಹಾಗೂ ಸುಭಾಷ್ ಅಡಿ ಆಯೋಗ ರಚಿಸಿ ಆ ಆಯೋಗಗಳ ವರದಿ ಆಧಾರದಲ್ಲಿ ಪರಿಶಿಷ್ಟ ಜಾತಿಗೆ ಶೇ. 17% ಪರಿಶಿಷ್ಟ ಪಂಗಡಕ್ಕೆ ಶೇ.7% ಮೀಸಲಾತಿ ಹೆಚ್ಚಳ ಮಾಡಲಾಗಿದೆ. ಆದರೆ ಇದನ್ನು ಶೆಡ್ಯೂಲ್ 9 ಗೆ ಸೇರಿಸಿಲ್ಲ. ಇದರಿಂದ ಎಸ್ಸಿ ಎಸ್ಟಿ ಸಮಯದಾಯಗಳಿಗೆ ಅನ್ಯಾಯವಾಗುತ್ತಿದೆ. ಹೀಗಾಗಿ ತಕ್ಷಣ ಸರ್ವಪಕ್ಷಗಳ ಸಭೆ ಕರೆಯಬೇಕು, ಸರ್ವಪಕ್ಷ ನಿಯೋಗ ತೆಗೆದುಕೊಂಡು ಪ್ರಧಾನಿ ನರೇಂದ್ರ ಮೋದಿ ಹಾಗೂ ಸಂಬಂಧಿಸಿ ಸಚಿವರ ಬಳಿ ಕೊಂಡೊಯ್ಯಬೇಕು. ಹೈಕೋರ್ಟ್ ನಲ್ಲಿ ತಡೆಯಾಜ್ಞೆ ತೆರವುಗೊಳಿಸಲು ಸಮರ್ಥ ವಕೀಲರ ನೇಮಕ ಮಾಡಬೇಕು. ತಡೆಯಾಜ್ಞೆ ತೆರವುಗೊಳಿಸಲು ವಿಶೇಷ ಅರ್ಜಿ ಹಾಕಬೇಕು. ಒಂದು ವೇಳೆ ತಡೆಯಾಜ್ಞೆ ತೆರವಾಗದಿದ್ದರೆ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಹಾಕಿ ಈ ವಿಚಾರವಾಗಿ ತಳ ಸಮುದಾಯಗಳಿಗೆ ನ್ಯಾಯ ಒದಗಿಸಬೇಕು. ಸುಳ್ಳು ಜಾತಿ ಪ್ರಮಾಣ ಪತ್ರ ಪಡೆಯುವವರಿಗೆ ಹಾಗೂ ನೀಡುವವರಿಗೆ ಶಿಕ್ಷೆಯಾಗಬೇಕು ಎಂದು ಉಗ್ರಪ್ಪ ಮನವಿ ಮಾಡಿದರು.
For More Updates Join our WhatsApp Group :




