ಬೆಂಗಳೂರು ಜಲಾವೃತ ಸಮಸ್ಯೆಗೆ ಪರಿಹಾರ: ಸಿಲ್ಕ್ ಬೋರ್ಡ್ ಸೇರಿ ಹಲವು ಕಡೆ ಕಾಮಗಾರಿ ಪರಿಶೀಲನೆ
ಬೆಂಗಳೂರು: ಜಿಬಿಎ ವ್ಯಾಪ್ತಿಯಲ್ಲಿ ವಿಶ್ವ ಬ್ಯಾಂಕ್ ಅನುದಾನದಡಿ ಕೈಗೆತ್ತಿಕೊಂಡಿರುವ ಮಳೆ ನೀರುಗಾಲುವೆ ಕಾಮಗಾರಿಗಳನ್ನು ವೇಗವಾಗಿ ಪೂರ್ಣಗೊಳಿಸುವ ಕೆಲಸ ಮಾಡಲಾಗುತ್ತಿದೆ ಎಂದು ಯೋಜನಾ ಅನುಷ್ಠಾನ ಘಟಕದ ಮುಖ್ಯ ಅಭಿಯಂತರರಾದ ಎಸ್.ವಿ ರಾಜೇಶ್ ರವರು ತಿಳಿಸಿದರು.
ನಗರದಲ್ಲಿರುವ ಮಳೆ ನೀರುಗಾಲುವೆಗಳ ಸಮಗ್ರ ಅಭಿವೃದ್ಧಿ, ಪುನರ್ ನಿರ್ಮಾಣ ಹಾಗೂ ಅವುಗಳ ಬಲಪಡಿಸುಕೆ ಕಾರ್ಯವನ್ನು ವಿಶ್ವ ಬ್ಯಾಂಕ್ ಅನುದಾನದಡಿ ಕೈಗೆತ್ತಿಕೊಳ್ಳಲಾಗಿದ್ದು, ಈ ಸಂಬಂಧ ವಿಶ್ವ ಬ್ಯಾಂಕ್ ಪ್ರತಿನಿಧಿಗಳು ಹಾಗೂ ಯೋಜನಾ ಅನುಷ್ಠಾನ ಘಟಕದ ಅಧಿಕಾರಿಗಳು ಇಂದು ಪ್ರಗತಿಯಲ್ಲಿರುವ ಕೆಲ ಕಾಮಗಾರಿಗಳ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ವಿಶ್ವ ಬ್ಯಾಂಕ್ ನ 2000 ಕೋಟಿ ರೂ. ಅನುದಾನದಲ್ಲಿ 173 ಕಿ.ಮೀ ಉದ್ದದ ಕಚ್ಚಾ ಮಳೆ ನೀರುಗಾಲುವೆಯನ್ನು ಆರ್.ಸಿ.ಸಿ ತಡೆಗೋಡೆ ಸಹಿತ ಪಕ್ಕಾ ಡ್ರೈನ್ ಹಾಗೂ 80 ಕಿ.ಮೀ ಉದ್ದದ ಮಳೆ ನೀರುಗಾಲುವೆಯ ನವೀಕರಣ ಕಾರ್ಯ ಪ್ರಗತಿಯಲ್ಲಿದೆ.
ಅದರಂತೆ, ಈಗಾಗಲೇ ಬಹುತೇಕ ಕಡೆ ಕಾಮಗಾರಿಯನ್ನು ಪ್ರಾರಂಭಿಸಲಾಗಿದ್ದು, ಕೆಲಸ ಆರಂಭವಾಗಿರುವ ಕಾಮಗಾರಿಗಳಿಗೆ ಮತ್ತಷ್ಟು ವೇಗ ನೀಡಿ ಮಳೆಗಾಲಕ್ಕೂ ಮುಂಚಿತವಾಗಿ ಪೂರ್ಣಗೊಳಿಸಲು ಯೋಜನೆ ರೂಪಿಸಲಾಗಿದೆ ಎಂದು ಮಾಹಿತಿ ನೀಡಿದರು.
ಪ್ರಗತಿಯಲ್ಲಿರುವ ಮಳೆ ನೀರು ಗಾಲುವೆ ಕಾಮಗಾರಿಗಳ ಬಳಿ ಸುರಕ್ಷಾ ಕ್ರಮಗಳನ್ನು ಕೈಗೊಂಡು ಕೆಲಸ ಮಾಡಬೇಕು. ಜೊತೆಗೆ ಕಾಲಮಿತಿಯೊಳಗಾಗಿ ಕಾಮಗಾರಿಯನ್ನು ಪೂರ್ಣಗೊಳಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ವಿಶ್ವ ಬ್ಯಾಂಕ್ ಪ್ರತಿನಿಧಿಗಳು ಮನವಿ ಮಾಡಿದರು.
ಪರಿಶೀಲನೆಯ ವೇಳೆ ವಿಶ್ವ ಬ್ಯಾಂಕ್ ನ ಪ್ರತಿನಿಧಿಗಳಾದ ಕ್ರಿಸ್ ವಿಲ್ಸನ್(ಟೀಮ್ ಲೀಡ್), ಡೇವಿಡ್ ಲಾರ್ಡ್, ಕಾರ್ಯಪಾಲಕ ಅಭಿಯಂತರರು, ವಿಶ್ವ ಬ್ಯಾಂಕ್ ತಂಡ ಸೇರಿದಂತೆ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.
For More Updates Join our WhatsApp Group :




