ಬೆಂಗಳೂರು: ವಿಡಿಯೋ ಚಿತ್ರೀಕರಣಕ್ಕಾಗಿ ಈಜಲು ಇಳಿದ ಯುವಕ ನೀರುಪಾಲಾದ ಘಟನೆ ಮಾರತಹಳ್ಳಿಯ ಪಣತ್ತೂರು ಕೆರೆಯಲ್ಲಿ ಭಾನುವಾರ ನಡೆದಿದೆ. ಅನಿಲ್ ನಾಪತ್ತೆಯಾದ ಯುವಕ. ಸ್ಥಳಕ್ಕೆ ಭೇಟಿ ನೀಡಿರುವ ಅಗ್ನಿಶಾಮಕದಳದ ಸಿಬ್ಬಂದಿ ಹಾಗೂ ಸ್ಥಳೀಯ ಪೊಲೀಸರು ಯುವಕನಿಗಾಗಿ ಹುಡುಕಾಟ ಮುಂದುವರೆಸಿದ್ದಾರೆ.
ಹೌಸ್ ಕೀಪಿಂಗ್ ಕೆಲಸ ಮಾಡಿಕೊಂಡಿದ್ದ ಅನಿಲ್ ಮಾರತ್ ಹಳ್ಳಿಯಲ್ಲಿ ವಾಸವಿದ್ದ. ಅನಿಲ್ ಹಾಗೂ ಆತನ ಸ್ನೇಹಿತರಾದ ದಿನೇಶ್ ಹಾಗೂ ಉಪೇಂದ್ರ ಯಾದವ್ ಜೊತೆ ಪಣತ್ತೂರು ಕೆರೆ ಬಳಿ ಬಂದಿದ್ದರು. ಅನಿಲ್ ಹಾಗೂ ದಿನೇಶ್ ಕೆರೆಯಲ್ಲಿ ಈಜಾಡುವುದನ್ನ ದಡದಲ್ಲಿ ನಿಂತಿದ್ದ ಉಪೇಂದ್ರ ಯಾದವ್ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ. ನೀರಿಗಿಳಿದವರ ಪೈಕಿ ದಿನೇಶ್ ಈಜಿ ದಡ ಸೇರಿದ್ದು, ಅನಿಲ್ ನೀರುಪಾಲಾಗಿದ್ದಾನೆ.
ಘಟನಾ ಸ್ಥಳಕ್ಕೆ ಅಗ್ನಿಶಾಮಕದಳ ಹಾಗೂ ಪೊಲೀಸರು ಭೇಟಿ ನೀಡಿ ಶೋಧ ಕಾರ್ಯಾಚರಣೆ ಮುಂದುವರೆಸಿದ್ದಾರೆ.