ತುಮಕೂರು : ನಗರದಲ್ಲಿ ಶುಕ್ರವಾರ ಬೆಳಗ್ಗೆ ಮತ್ತು ಸಂಜೆ ಸುರಿದ ಮಳೆಯಿಂದ ಅಮರಜ್ಯೋತಿ ನಗರದ ಸಾಯಿಬಾಬ ದೇವಸ್ಥಾನದ ಹತ್ತಿರವಿರುವ ಬಾಲಕಿಯರ ಬಾಲಮಂದಿರದ ಆವರಣಕ್ಕೆ ಯುಜಿಡಿಯ ಕೊಳಚೆ ನೀರು ನುಗ್ಗಿರುವ ಘಟನೆ ನಡೆದಿದೆ.
ಮೊದಲು ಕೆರೆಯಂಗಳವಾಗಿದ್ದ ಈಬಜಾಗವನ್ನು ಹೇಮಾವತಿ, ಎತ್ತಿನಹೊಳೆ, ರೇಷ್ಮೆ, ಅರಣ್ಯ ಇಲಾಖೆ, ರಾಮಕೃಷ್ಣ ಆಶ್ರಮ,ಆರ್ಯ ಈಡಿಗರ ವಿದ್ಯಾರ್ಥಿ ನಿಲಯ, ಶ್ರೀ ಶಿರಡಿ ಸಾಯಿಬಾಬಾ ಮಂದಿರ ಕ್ಕೆ ಎಂದು ಹಂಚಿಕೆ ಮಾಡಲಾಗಿದೆ. ಈ ಸಾಯಿಬಾಬಾ ಮಂದಿರ ಪಕ್ಕದಲ್ಲೇ ಮಕ್ಕಳ ಕಲ್ಯಾಣ ಸಮಿತಿಯ ಕಚೇರಿ,ಬಾಲ ನ್ಯಾಯ ಮಂಡಳಿ ಮತ್ತು ಬಾಲಮಂದಿರ ಕಟ್ಟಡಗಳು ಇವೆ.ಈ ಬಾಲಮಂದಿರದಲ್ಲಿ ಪೋಕ್ಸೋ ಬಾಧಿತ ಮಕ್ಕಳು,ಬಾಲ ಗರ್ಭಿಣಿಯರು, ಹಾಗೂ ಅನಾಥ ಮಕ್ಕಳು ಆಶ್ರಯ ಪಡೆದಿದ್ದಾರೆ.
ಒಂದಲ್ಲ ಒಂದು ವಿವಾದಗಳಿಗೆ ಬಾಲಮಂದಿರ ಗುರಿಯಾಗಿರುವುದು ಒಂದು ಕಡೆಯಾದರೆ,ಇಲ್ಲಿರುವ ಮಕ್ಕಳು ಮಳೆಗಾಲ ಬಂತು ಎಂದರೆ ಕೊಳ್ಳಗೇರಿವಾಸಿಗಳಿಗಿಂತ ಹೀನಾಯ ಸ್ಥಿತಿಯಲ್ಲಿ ಕಾಲ ದೂಡುವ ಪರಿಸ್ಥಿತಿ ನಿರ್ಮಾಣ ವಾಗುತ್ತದೆ. ಬಾಲಮಂದಿರ ಕಟ್ಟಡ ತಗ್ಗು ಪ್ರದೇಶದಲ್ಲಿರುವುದರಿಂದ ಈ ಪ್ರದೇಶದಲ್ಲಿರುವ ಎಲ್ಲಾ ಕಚೇರಿಗಳ ಶೌಚಾಲಯಗಳ ನೀರು ಯುಜಿಡಿ ಮೂಲಕ ಬಂದು ಬಾಲಮಂದಿರ ಆವರಣದಲ್ಲಿ ಹೊರ ಚಿಮ್ಮುವುದರಿಂದ ಈ ನೀರು ಹಿಂಗುವವರೆಗೂ ದುರ್ನಾತ ಬಿರುವ ಕೊಳಚೆ ನೀರಿನಲ್ಲಿ ಜೀವನ ಸಾಗಿಸಬೇಕಾಗುತ್ತದೆ.
ಈ ದುರ್ವಾಸನೆಯಲ್ಲಿ ಇಲ್ಲಿ ವಾಸ ಮಾಡುವ ಮಕ್ಕಳು ಅನ್ನ ಆಹಾರ ಸೇವನೆಯನ್ನು ಅಸಹ್ಯಕರಪಟ್ಟುಕೊಂಡು ಸೇವನೆ ಮಾಡಬೇಕಾದ ಪರಿಸ್ಥಿತಿ ಉಂಟಾಗಿರುವುದು ದುರಂತದ ಸಂಗತಿಯೇ ಸರಿ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಒಳಪಡುವ ಈ ಬಾಲಮಂದಿಕ್ಕೆ ಜಿಲ್ಲಾಧಿಕಾರಿ ಗಳು,ಬಾಲ ನ್ಯಾಯಮಂಡಳಿಯು ಇರುವುದರಿಂದ ಸಂಬಂಧಪಟ್ಟ ನ್ಯಾಯದೀಶರು ಹೋಗಿಬರುತ್ತಾರೆ ಇವರ ಗಮನಕ್ಕಾದರು ಈ ವಿಚಾರ ಹೋಗಿದೆಯೋ ಇಲ್ಲವೂ ತಿಳಿದಿಲ್ಲ. ಬಾಲಮಂದಿರದ ಹಿಂಭಾಗದ ಹರಿಯುವ ದೊಡ್ಡ ಮೋರಿಯ ಕೊಳಚೆನೀರಿನ ದುರ್ನಾತ ಒಂದು ಕಡೆಯಾದರೆ ಮಳೆ ಬಂದಾಗ ಯುಜಿಡಿ ನೀರಿನ ದುರ್ವಾಸನೆ ಇಲ್ಲಿನ ಮಕ್ಕಳನ್ನು ಅಕ್ಷರಶಃ ನಿದ್ದೆಗೆಡಿಸಿದೆ. ಮೊದಲೇ ಈ ಮಕ್ಕಳು ಬಾಧಿತರು,ತಂದೆ ,ತಾಯಿ ಸಂಬಂಧಿಕರಿಂದ ದೂರ ಉಳಿದಿರುವವರು,ದೌರ್ಜನ್ಯ, ಶೋಷಣೆಗೆ ಒಳಗಾದವರು,ಇಂತಹ ಬಾಧಿತರನ್ನು ತಮ್ಮ ಮನೆಯ ಮಕ್ಕಳಂತೆ ಸಂಬಂಧಪಟ್ಟವರು ನೋಡಿಕೊಳ್ಳಬೇಕಾಗಿದೆ.