ಹೆಬ್ರಿಯಲ್ಲಿ ಮೇಘಸ್ಫೋಟ: ಉಡುಪಿಯಲ್ಲಿ ಭಾರಿ ಮಳೆ, ಪ್ರವಾಹ

ಹೆಬ್ರಿಯಲ್ಲಿ ಮೇಘಸ್ಫೋಟ: ಉಡುಪಿಯಲ್ಲಿ ಭಾರಿ ಮಳೆ, ಪ್ರವಾಹ

ಉಡುಪಿ: ರಾಜ್ಯಾದ್ಯಂತ ಮಳೆ ಅಬ್ಬರ ಮುಂದುವರೆದಿರುವಂತೆಯೇ ಅತ್ತ ಉಡುಪಿಯ ಹೆಬ್ರಿಯಲ್ಲಿ ಮೇಘಸ್ಫೋಟ ಸಂಭವಿಸಿದ್ದು, ಭಾರಿ ಮಳೆಯಿಂದಾಗಿ ಉಡುಪಿಯಲ್ಲಿ ಪ್ರವಾಹ ಪರಿಸ್ಥಿತಿ ಏರ್ಪಟ್ಟಿದೆ.

ಪಶ್ಚಿಮ ಘಟ್ಟದ ತಪ್ಪಲು ಹೆಬ್ರಿಯಲ್ಲಿ ಮಧ್ಯಾಹ್ನ 4.30 ರ ಸುಮಾರಿಗೆ ಮೇಘಸ್ಫೋಟವಾಗಿದ್ದು, ಹೆಬ್ರಿ ತಾಲೂಕಿನ ಮುದ್ರಾಡಿ ಗ್ರಾಮದ ಬಲ್ಲಾಡಿ ಎಂಬಲ್ಲಿ ಹಠಾತ್ ಜಲ ಪ್ರವಾಹ ಉಂಟಾಗಿದೆ. ಬಲ್ಲಾಡಿಯ ಈಶ್ವರನಗರ ಸಮೀಪದ ಬಮ್ಮಗುಂಡಿ ಹೊಳೆ ಉಕ್ಕಿ ಹರಿದು ಮನೆ, ಕೃಷಿ ಜಮೀನಿಗೆ ನೀರು ನುಗ್ಗಿ ಭಾರೀ ಆವಾಂತರ ಸೃಷ್ಟಿಯಾಗಿದೆ.

ಭೀಕರ ಜಲ ಪ್ರವಾಹದಿಂದಾಗಿ ಹಲವು ಮನೆಗಳು, ಕಾರು ಬೈಕ್ ಗಳು ಕೊಚ್ಚಿಕೊಂಡು ಹೋಗಿದ್ದು, ಕಬ್ಬಿನಾಲೆ ಭಾಗದ ಪರ್ವತ ಸಾಲಿನಲ್ಲಿ ಮೇಘ ಸ್ಫೋಟವಾಗಿ ಈ ಭೀಕರ ಪ್ರವಾಹ ಸೃಷ್ಟಿಯಾಗಿದೆ. ಮುದ್ರಾಡಿಯ ಹೊಸ ಕಂಬ್ಲದಲ್ಲಿ 1, ಕಾಂತರಬೈಲಿನಲ್ಲಿ 4, ಕೆಲಕಿಲದಲ್ಲಿ 3 ಮನೆಗಳು ಅರ್ಧದಷ್ಟು ಮುಳುಗಿದ್ದು, ವಿಚಾರ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ರಕ್ಷಣಾ ಸಿಬ್ಬಂದಿ ಹಗ್ಗಕಟ್ಟಿ ಏಣಿಯ ಸಹಾಯದಿಂದ ಮನೆಮಂದಿಯನ್ನು ರಕ್ಷಿಸಿದ್ದಾರೆ.

ಮುದ್ರಾಡಿಯ ಹೊಸ ಕಂಬ್ಲ, ಕಾಂತರಬೈಲು, ಕೆಲಕಿಲ ಎಂಬಲ್ಲಿನ ಸುಮಾರು ಎಂಟು ಮನೆಗಳಿಗೆ ಪ್ರವಾಹದ ನೀರು ನುಗ್ಗಿದೆ. ನೆರೆಯಿಂದಾಗಿ ಮುದ್ರಾಡಿ ಸಂಪರ್ಕಿಸುವ ಬಲ್ಲಾಡಿ ತುಂಡುಗುಡ್ಡೆ ರಸ್ತೆ ಸಂಪೂರ್ಣ ಬಂದ್ ಆಗಿದ್ದು ಸ್ಥಳೀಯರು ಬದಲಿ ರಸ್ತೆಯ ಮೂಲಕ ಸಂಚರಿಸುತ್ತಿದ್ದಾರೆ.

Leave a Reply

Your email address will not be published. Required fields are marked *