ಕರ್ನಾಟಕ ರಾಜ್ಯ ಪೊಲೀಸ್ ಶ್ವಾನ ದಳ ಅಪರಾಧಗಳ ಪತ್ತೆದಾರಿಕೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ಇದೀಗ ರಾಯಚೂರು ನಗರದಲ್ಲಿ ಹಲವು ಕಳ್ಳತನ, ದರೋಡೆ ಪ್ರಕರಣಗಳನ್ನು ಭೇದಿಸಿದ್ದ ಕ್ರೈಂ ಡಾಗ್ ‘ಸಿರಿ’ ಕೊನೆಯುಸಿರೆಳೆದಿದ್ದು, ಪೊಲೀಸ್ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು. 2016ರಲ್ಲಿ ಜನಿಸಿದ ಡಾಬರ್ ಮನ್ ತಳಿಯ ಶ್ವಾನ 2017ರಲ್ಲಿ ಪೊಲೀಸ್ ಇಲಾಖೆಗೆ ಸೇರ್ಪಡೆಯಾಗಿತ್ತು. ಜಿಲ್ಲೆಯಲ್ಲಿ ನಡೆದ ಹಲವು ಕಳ್ಳತನ ಪ್ರಕರಣಗಳು, ಕೊಲೆ, ದರೋಡೆ ಸೇರಿದಂತೆ 171 ಪ್ರಕರಣಗಳಲ್ಲಿ ಆರೋಪಿಗಳ ಪತ್ತೆಗೆ ಸಿರಿ ಸಹಕರಿಸಿತ್ತು. ಅದರಲ್ಲೂ ಮಾನ್ವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2022ರಲ್ಲಿ ಪೋಸ್ಟ್ ಆಫೀಸ್ ಕಳ್ಳತನ ಪ್ರಕರಣದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿತ್ತು. ವಯೋಸಹಜ ಕಾಯಿಲೆಯಿಂದ ಬಳಲತ್ತಿದ್ದ ‘ಸಿರಿ’, 2 ದಿನಗಳಿಂದ ಆಹಾರ ತ್ಯಜಿಸಿತ್ತು.
ನಗರದ ಪೊಲೀಸ್ ಶ್ವಾನದಳದ ಕ್ರೈಂ ಡಾಗ್ ಸಿರಿ (ಡಾಬರ್ಮಾನ್) ಮೃತಪಟ್ಟಿರುವ ಹಿನ್ನಲೆ ನಗರದ ಪೊಲೀಸ್ ಪರೇಡ್ ಮೈದಾನದ ಪಕ್ಕದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಪುಟ್ಟಮಾದಯ್ಯ ನೇತೃತ್ವದಲ್ಲಿ ಪೊಲೀಸ್ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನೆರವೇರಿಸಲಾಯಿತು.