ಬೆಂಗಳೂರು: ಬೊಮ್ಮನಹಳ್ಳಿ ವಲಯ ವ್ಯಾಪ್ತಿಯಲ್ಲಿ ಅಪೂರ್ಣ ಕಾಮಗಾರಿಗಳ ವರದಿ ಸಿದ್ದಪಡಿಸಲು ಮುಖ್ಯ ಆಯುಕ್ತರಾದ ಶ್ರೀ ತುಷಾರ್ ಗಿರಿ ನಾಥ್ ರವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬೊಮ್ಮನಹಳ್ಳಿ ವಲಯ ಜಂಟಿ ಆಯುಕ್ತರ ಕಛೇರಿಯಲ್ಲಿ ಇಂದು “ಆಯುಕ್ತರ ನಡೆ ವಲಯದ ಕಡೆ” ಕಾರ್ಯಕ್ರಮದಡಿ ಸಾರ್ವಜನಿಕರ ಅಹವಾಲು ಸ್ವೀಕಾರದ ವೇಳೆ ಮಾತನಾಡಿದ ಅವರು, ವಲಯ ವ್ಯಾಪ್ತಿಯಲ್ಲಿ ಅಪೂರ್ಣ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕಿರುವ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಿದೆ. ಈ ಸಂಬಂಧ ಎಲ್ಲಾ ಅಪೂರ್ಣ ಕಾಮಗಾರಿಗಳನ್ನು ಪಟ್ಟಿ ಮಾಡಿಕೊಂಡು ವರದಿ ಸಿದ್ದಪಡಿಸಲು ಸೂಚನೆ ನೀಡಲಾಯಿತು.
ಕೆರೆಗಳ ಪರಿಶೀಲನೆ ನಡೆಸಿ: ಬೊಮ್ಮನಹಳ್ಳಿ ವಲಯ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಕೆರೆಗಳಿಗೆ ಭದ್ರತಾ ಸಿಬ್ಬಂದಿಯನ್ನು ನಿಯೋಜನೆ ಮಾಡಿರಬೇಕು. ಈ ಸಂಬಂಧ ಮಾರ್ಷಲ್ ಗಳ ಗಸ್ತು ತಿರುಗುವ ವಾಹನವು ರಾತ್ರಿ ವೇಳೆ ಎಲ್ಲಾ ಕೆರೆಗಳಿಗೆ ಭೇಟಿ ನೀಡಿ ಭದ್ರತಾ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆಯೇ ಎಂಬುದನ್ನು ಪರಿಶೀಲನೆ ನಡೆಸಿ ವರದಿ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಗಸ್ತು ತಿರುಗುವ ವೇಳೆ ಕಸ ಬಿಸಾಡುವ ಹಾಗೂ ಬೀದಿ ದೀಪಗಳ ಅಳವಡಿಕೆಯ ಮೇಲೆಯೂ ನಿಗಾವಹಿಸಲು ಮಾರ್ಷಲ್ ಮೇಲ್ವಿಚಾರಕರಿಗೆ ಸೂಚನೆ ನೀಡಿದರು.
ಪ್ರಮುಖ ರಸ್ತೆಗಳಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಿ: ಬೊಮ್ಮನಹಳ್ಳಿ ವಲಯದ ಎಲ್ಲಾ ಪ್ರಮಖ ರಸ್ತೆಗಳಲ್ಲಿ ರಸ್ತೆ ಮೇಲ್ಮೈ ಪದರ ಹಾಳಾಗಿರುವ ಹಾಗೂ ರಸ್ತೆ ಗುಂಡಿಗಳನ್ನು ಮುಚ್ಚುವ ಸಲುವಾಗಿ ಪರಿಶೀಲನೆ ನಡೆಸಿ ಪಟ್ಟಿ ಮಾಡಿಕೊಂಡು, ಅವಶ್ಯಕ ಡಾಂಬರನ್ನು ತರೆಸಿಕೊಂಡು ಕೂಡಲೆ ರಸೆ ಮೇಲ್ಮೈ ಹಾಳಾಗಿರುವ ಹಾಗೂ ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯ ಕೈಗೊಳ್ಳಬೇಕೆಂದು ಸೂಚನೆ ನೀಡಿದರು.
ಆಟದ ಮೈದಾನ, ಕೆರೆ ಹಾಗೂ ಉದ್ಯಾನವನಗಳ ವರದಿ ಸಿದ್ದಪಡಿಸಿ: ಬೊಮ್ಮನಹಳ್ಳಿ ವಲಯ ವ್ಯಾಪ್ತಿಯಲ್ಲಿ ಬರುವ ಆಟದ ಮೈದಾನಗಳು, ಕೆರೆಗಳು ಹಾಗೂ ಉದ್ಯಾನವನಗಳನ್ನು ಸರಿಯಾಗಿ ನಿರ್ವಹಣೆ ಮಾಡಬೇಕು. ಈ ಸಂಬಂಧ ಎಲ್ಲಾ ಕಡೆ ಭೇಟಿ ನೀಡಿ ಪರಿಶೀಲನೆ ನಡೆಸಿ ವರದಿ ಸಿದ್ದಪಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬೇಗೂರು ಮುಖ್ಯ ರಸ್ತೆ ಅಗಲೀಕರಣಕ್ಕೆ ಕ್ರಮವಹಿಸಿ: ಬೇಗೂರು ರಸ್ತೆ ಅಗಲೀಕರಕ್ಕೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ, ಬೇಗೂರು ರಸ್ತೆ ಅಗಲೀಕರಣದ ಕುರಿತಂತೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅಗಲೀಕರಣದ ಜಾಗದಲ್ಲಿ ಬರುವ ಆಸ್ತಿ ಮಾಲೀಕರ ಜೊತೆ ಸಭೆ ನಡೆಸಿ ಟಿಡಿಆರ್ ನೀಡುವ ಸಲುವಾಗಿ ಸರಿಯಾದ ಮಾಹಿತಿ ನೀಡಿ ಅಗತ್ಯ ಕ್ರಮ ಕೈಗೊಳ್ಳಲು ಜಂಟಿ ಆಯುಕ್ತರಿಗೆ ಸೂಚನೆ ನೀಡಿದರು.
ತ್ಯಾಜ್ಯ ಸಂಸ್ಕರಣ ಘಟಕ ನಿರ್ಮಾಣಕ್ಕೆ ಜಾಗ ಹಸ್ತಾಂತರ:ಮಡಿವಾಳ ಕೆರೆ ಭಾಗದಲ್ಲಿ ಪಾಲಿಕೆಯ 3 ಎಕರೆ ಜಾಗವಿದ್ದು, ಆ ಸ್ಥಳದಲ್ಲಿ 45 ಎಂ.ಎಲ್.ಡಿ ತ್ಯಾಜ್ಯ ಸಂಸ್ಕರಣಾ ಘಟಕ ನಿರ್ಮಾಣ ಮಾಡಲು ಸ್ಥಳಾವಕಾಶ ಕಲ್ಪಿಸಿಕೊಡಲು ಜಲಮಂಡಳಿ ಅಧಿಕಾರಿಗಳು ಮನವಿ ಮಾಡಿದರು. ಅದಕ್ಕೆ, 3 ಎಕರೆ ಪ್ರದೇಶ ಹಸ್ತಾಂತರ ಮಾಡುವ ಸಲುವಾಗಿ ಪ್ರಸ್ತಾವನೆ ಸಲ್ಲಿಸಲು ಸೂಚನೆ ನೀಡಿದರು.
50 ಕೋಟಿ ರೂ. ಫೆನ್ಸಿಂಗ್ ಗಾಗಿ ಮೀಸಲು: ನಗರದ ಎಲ್ಲಾ ಪಾಲಿಕೆ ಜಾಗಗಳಿಗೆ ಫೆನ್ಸಿಂಗ್ ಅಳವಡಿಸುವುದಕ್ಕಾಗಿ 50 ಕೋಟಿ ರೂ. ಅನುದಾನ ಮೀಸಲಿಡಲಾಗಿದ್ದು, ಆಯಾ ವಲಯ ವ್ಯಾಪ್ತಿಯಲ್ಲಿ ಫೆನ್ಸಿಂಗ್ ಅಳವಡಿಸುವ ಜಾಗದ ಮಾಹಿತಿ ಪಟ್ಟಿ ಮಾಡಿ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಿದರೆ ಕೂಡಲೆ ಅಗತ್ಯವಿರುವ ಹಣ ಬಿಡುಗಡೆ ಮಾಡಲಾಗುವುದೆಂದು ತಿಳಿಸಿದರು.
ಬಂಡೆಪಾಳ್ಯದಲ್ಲಿ ಒತ್ತುವರಿ ತೆರವು ಕಾರ್ಯಚರಣೆ ನಡೆಸಿ:ಹೊಂಗಸಂದ್ರ ಬಂಡೆಪಾಳ್ಯದಲ್ಲಿ ಸುಮಾರು 9 ಎಕರೆ ಪಾಲಿಕೆ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದು, ಅದನ್ನು ತೆರವುಗೊಳಿಸಲು ಕೇಳಿದ ಪ್ರಶ್ನೆಗೆ, ಈ ಸ್ಥಳಲ್ಲಿ ಎಷ್ಟು ಮಂದಿಗೆ ಹಕ್ಕುಪತ್ರ ವಿತರಣೆ ಮಾಡಲಾಗಿದೆ ಎಂಬುದನ್ನು ಪರಿಶೀಲನೆ ನಡೆಸಿ, ಅದನ್ನು ಹೊರತುಪಡಿಸಿ ಉಳಿದ ಜಾಗದಲ್ಲಿ ಒತ್ತುವರಿ ಮಾಡಿಕೊಂಡಿರುವುದನ್ನು ಸ್ಥಳ ಪರಿಶೀಲಿಸಿ ಗುರುತಿಸಿ ಅದನ್ನು ತೆರವುಗೊಳಿಸಿ ಫೆನ್ಸಿಂಗ್ ಮಾಡಲು ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಜಂಟಿ ಆಯುಕ್ತರಿಗೆ ಸೂಚನೆ ನೀಡಲಾಯಿತು.
80ಕ್ಕೂ ಹೆಚ್ಚು ದೂರುಗಳು ಸ್ವೀಕಾರ:ಬೊಮ್ಮನಹಳ್ಳಿ ವಲಯ ವ್ಯಾಪ್ತಿಯಲ್ಲಿ ಇಂದು ನಡೆದ ಆಯುಕ್ತರ ನಡೆ ವಲಯದ ಕಡೆ ಕಾರ್ಯಕ್ರಮದಲ್ಲಿ 80ಕ್ಕೂ ಹೆಚ್ಚು ದೂರಗಳನ್ನು ಸ್ವೀಕರಿಸಿ, ಶೀಘ್ರ ಬಗೆಹರಿಯುವ ಸಮಸ್ಯೆಗಳನ್ನು ಕೂಡಲೆ ಬಗೆಹರಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಾಗರೀಕರಿಂದ ಬಂದ ಪ್ರಮುಖ ಅಹವಾಲುಗಳ ವಿವರ:1. ಹೆಚ್.ಎಸ್.ಆರ್ ಬಡಾವಣೆಯ 6ನೇ, 7ನೇ ಸೆಕ್ಟರ್ ನಲ್ಲಿ ಮಳೆಗಾಲದಲ್ಲಿ ನೀರು ನಿಂತು ಜಲಾವೃತವಾಗುತ್ತಿದ್ದು, ರಾಜಕಾಲುವೆಗಳಲ್ಲಿ ಹೂಳೆತ್ತಿ ಸರಾಗವಾಗಿ ನೀರು ಹರಿದುಹೋಗುವಂತೆ ಮಾಡಿ.
2. ಅರಕೆರೆ ವಾರ್ಡ್ ನಲ್ಲಿ ರಸ್ತೆಗಳು ಕಿತ್ತು ಹೋಗಿದ್ದು, ಸರಿಪಡಿಸಿಕೊಡಿ.
3. ಬೊಮ್ಮನಹಳ್ಳಿ ವ್ಯಾಪ್ತಿಯಲ್ಲಿ ಕ್ರೀಡಾಂಗಣಕ್ಕೆ ಅನುದಾನ ಇದೆ ಆದರೆ ಬಳಕೆಯಾಗುತ್ತಿಲ್ಲ: ಹೇಗೆ ಪೂರ್ಣಗೊಳಿಸಬೇಕೆಂದು ವರದಿ ಕೊಡಿ, ರಿವೈಸ್ಡ್ ಎಸ್ಟಿಮೇಟ್ ಸಿದ್ದಪಡಿಸಿಕೊಂಡು ಅನುದಾನ ಪಡೆದುಕೊಂಡು ಕೆಲಸ ಪ್ರಾರಂಭಿಸಿ
4. ಅರಕೆರೆ ಹಾಗೂ ಹುಳಿಮಾವು ಕೆರೆಗೆ ಕಾಮಗಾರಿ ಪ್ರಗತಿಯಲ್ಲಿದ್ದು, ಅದನ್ನು ಶೀಘ್ರ ಪೂರ್ಣಗೊಳಿಸಿ ಸರಿಯಾಗಿ ನಿರ್ವಹಣೆ ಮಾಡಲು ಮನವಿ.
5. ಬೀದಿ ದೀಪಗಳ ನಿರ್ವಹಣೆ ಮಾಡಲು ಮನವಿ.
6. ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಿ
7. ಕೆರೆ, ಉದ್ಯಾನವನಗಳ ನಿರ್ವಹಣೆ ಸರಿಯಾಗಿ ಮಾಡಲು ಮನವಿ.
8. ರಾಜಕಾಲುವೆಯಲ್ಲಿ ಸ್ಯಾನಿಟರಿ ನೀರು ಬರುತ್ತಿದ್ದು, ಅದನ್ನು ನಿರ್ವಹಣೆ ಮಾಡಲು ಹಾಗೂ ರಾಜಕಾಲುವೆಗೆ ಕಸ ಬಿಸಾಡದಂತೆ ಫೆನ್ಸಿಂಗ್ ಅಳವಡಿಸಿ
9. ಬೇಗೂರು ರಸ್ತೆ ಅಗಲೀಕರಣ ಮಾಡಲು ಮನವಿ.
10. ಅನಧಿಕೃತ ಕಟ್ಟಡ ನಿರ್ಮಾಣ ಮಾಡುತ್ತಿದ್ದು, ಅದನ್ನು ತಡೆಯಲು ಮನವಿ.
11. ಮಂಗಮ್ಮನ ಪಾಳ್ಯದ ಮದಿನಾ ನಗರದಲ್ಲಿ ರಸ್ತೆ, ಸೈಡ್ ಡ್ರೈನ್ ದುರಸ್ತಿ ಕಾರ್ಯ ಮಾಡಿಕೊಡಲು ಮನವಿ.
12. ರಸ್ತೆ ಬದಿ ಹಾಗೂ ಖಾಲಿ ಜಾಗಗಳಲ್ಲಿ ಸ್ವಚ್ಛತೆ ಕಾಪಾಡಲು ಮನವಿ
13. ಮಂಗಮ್ಮನ ಪಾಳ್ಯ ಪಾದಚಾರಿ ಮಾರ್ಗಗಳಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ಹಾಗೂ ಸರಿಯಾಗಿ ನಿರ್ವಹಣೆ ಮಾಡಲು ಮನವಿ
14. ಬಂಡೆಪಾಳ್ಯ ರಾಜಕಾಲುವೆ ಹಾಗೂ ಗಾರೆಬಾವಿ ಪಾಳ್ಯದ ಹೊಂಗಸಂದ್ರ ಕೆರೆ ಒತ್ತುವರಿ ಮಾಡಿದ್ದು, ಅದನ್ನು ತೆರವುಗೊಳಿಸಲು ಮನವಿ.
15. ಅರಕೆರೆ ರಾಘವೇಂದ್ರ ಲೇಔಟ್ ಸೀವೇಜ್ ಪೈಪ್ ಲೈನ್ ಹಾಕಲು ಬಿಡುತ್ತಿಲ್ಲ, ಅದಕ್ಕೆ ಸೂಕ್ತ ಕ್ರಮ ಕೈಗೊಳ್ಳಲು ಮನವಿ.
16. ಬೀದಿ ನಾಯಿಗಳ ಹಾವಳಿಯನ್ನು ನಿಯಂತ್ರಿಸಲು ಮನವಿ.
17. ಒಂಟಿ ಮನೆಗಳಿಗೆ ಅರ್ಜಿ ಸಲ್ಲಿಸಿದ್ದು, ಅನುದಾನ ಒದಗಿಸಲು ಮನವಿ.
ಈ ವೇಳೆ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಸತೀಶ್ ರೆಡ್ಡಿ, ವಲಯ ಜಂಟಿ ಆಯುಕ್ತರಾದ ಅಜಿತ್, ಉಪ ಆಯುಕ್ತರಾದ ಡಿ.ಕೆ ಬಾಬು, ಮಖ್ಯ ಅಭಿಯಂತರರಾದ ಶಶಿ ಕುಮಾರ್, ಪಾಲಿಕೆ, ಜಲಮಂಡಳಿ, ಬೆಸ್ಕಾಂ, ಪೊಲೀಸ್ ಸೇರಿದಂತೆ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.