ಓದಿ ಪಡೆದಿದ್ದು ಬಿ.ಇ. ಪದವಿ ಬಯಸಿ ಬೆಳೆದಿದ್ದು ರೇಷ್ಮೆ ಕೃಷಿ

ಓದಿ ಪಡೆದಿದ್ದು ಬಿ.ಇ. ಪದವಿ ಬಯಸಿ ಬೆಳೆದಿದ್ದು ರೇಷ್ಮೆ ಕೃಷಿ

ಭಾರತವು ಕೃಷಿ ಪ್ರಧಾನ ರಾಷ್ಟ್ರ ಎಂಬುದು ನಮಗೆಲ್ಲರಿಗೂ ಗೊತ್ತಿರುವ ಸಂಗತಿ. ಕೃಷಿ ರೈತನ ನಾಡಿ ಮಿಡಿತ. ರೈತನ ಬದುಕು  ಹಸನಾಬೇಕಾದರೆ ಅವನು ಬೆಳೆಯುವ ಬೆಳೆ ಆತನನ್ನು ಕೈ ಹಿಡಿಯಬೇಕು. ಹಾಗೆಯೇ ಬೆಳೆಯುವ ಬೆಳೆಯ ಆಯ್ಕೆ ಕೂಡಾ  ಅತ್ಯುತ್ತಮ ವಾಗಿರಬೇಕು, ಸತತ ಪ್ರಯತ್ನದಿಂದ ರೇಷ್ಮೆ ಕೃಷಿಯಿಂದ ಯಶಸ್ಸನ್ನು ಕಂಡು ಸೈ ಎನಿಸಿಕೊಂಡಿದ್ದಾರೆ  ಶಿರಾ ತಾಲ್ಲೂಕಿನ  ಮೇಲ್ಕುಂಟೆ ಗ್ರಾಮ ಪಂಚಾಯತಿ ವ್ಯಾಪ್ತಿಯ  ಹುಚ್ಚಗೀರನಹಳ್ಳಿ ಗ್ರಾಮದ ರೈತ ಹೆಚ್.ಜಗದೀಶ್

ಸರ್ಕಾರದಿಂದ ಹಲವಾರು ಸೌಲಭ್ಯಗಳನ್ನು ರೈತರಿಗಾಗಿಯೇ ಮೀಸಲಿಟ್ಟಿದೆ. ಅವುಗಳನ್ನು ಸದುಪಯೋಗ ಪಡಿಸಿಕೊಳ್ಳುವಲ್ಲಿ ರೈತರು ವಿಫಲರಾಗಿದ್ದಾರೆ. ಅಂತಹ ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಉಪಯೋಗಿಸಿಕೊಂಡು ರೇಷ್ಮೆ ಬೆಳೆಯಲ್ಲಿ ಯಶಸ್ಸು ಕಂಡ ಜಗದೀಶ್ ತಮ್ಮ ಕೃಷಿ ಕಾಯಕವನ್ನು ಆರಂಭ ಮಾಡಿದ್ದು ಹೇಗೆ ಎಂಬುದನ್ನು ತಿಳಿಯೋಣ ಬನ್ನಿ.

ಹೌದು ಓದಿದ್ದು ಬಿ.ಇ. ಮೆಕ್ಯನಿಕಲ್ ಆದರೆ ಬಯಸಿ ಬೆಳೆದಿದ್ದು ಮಾತ್ರಾ ರೇಷ್ಮೆ ಕೃಷಿ. ಪದವಿ ಪಡೆದು ಬೆಂಗಳೂರಿನ ಪ್ರತಿಷ್ಠಿತ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಜಗದೀಶ್ ಜೀವನ ನಿರ್ವಹಣೆ ಮಾಡುವುದು ಕಷ್ಟವಾಗಿ ಹುಟ್ಟೂರಿಗೆ ಬಂದು ತನ್ನ ತಂದೆ ಮತ್ತು ಅಣ್ಣನ ಜೊತೆಗೆ ಕೃಷಿ ಮಾಡಲು ಆರಂಭಿಸಿದ್ದಾರೆ.

ನರೇಗಾ ಯೋಜನೆಯಡಿ ಧನ ಸಹಾಯ: ರೈತನ ಆಸೆ, ಕನಸುಗಳಿಗೆ ನೀರೆರೆಯುವುದು ಸರ್ಕಾರದಿಂದ ಧನ ಸಹಾಯ ಎಂದರೆ ತಪ್ಪಾಗಲಾರದು ಏಕೆಂದರೆ ಒಂದೇ ಬಾರಿಗೆ ಲಕ್ಷಾಂತರ ಬಂಡವಾಳ ಹೂಡಬೆಕಾಗುತ್ತದೆ, ಸರ್ಕಾರದಿಂದ ಸಿಗುವ ಧನ ಸಹಾಯ ಸಾಲದ ಸುಳಿಗೆ ಸಿಗದಂತೆ ಮಾಡಿ ಹಂತ-ಹಂತವಾಗಿ ಬಂಡವಾಳ ಹೂಡಲು ಅನುಕೂಲ ಮಾಡಿಕೊಡುತ್ತದೆ.

ರೇಷ್ಮೆ ಬೆಳೆಗೆ ನರೇಗಾ ಯೋಜನೆಯಡಿ ಸಹಾಯಧನ ದೊರೆಯುತ್ತದೆ ಎಂಬ ಮಾಹಿತಿ ಪಡೆದ ರೈತ ಜಗದೀಶ್ ರೇಷ್ಮೆ ಇಲಾಖೆಯ ಸಹಯೋಗದೊಂದಿಗೆ  ತನ್ನ ಐದು ಎಕರೆ ಜಮೀನಿನಲ್ಲಿ ಹಿಪ್ಪು ನೇರಳೆ ನಾಟಿ ಕಾಮಗಾರಿ ಮಾಡಿಕೊಳ್ಳಲು ಮುಂದಾಗಿ  ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಕ್ರಿಯಾ ಯೋಜನೆಗೆ ಸೇರಿಸಿ ಸಹಾಯಧನ  ಪಡೆದು ರೇಷ್ಮೆ ನಾಟಿ ಮಾಡಲು ಮುಂದಾಗುತ್ತಾರೆ.

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ  ಹಿಪ್ಪು ನೇರಳೆ ನಾಟಿ  ಕಾಮಗಾರಿ ಅನುಷ್ಟಾನ ಮಾಡಿಕೊಳ್ಳಲು 6೦ ಸಾವಿರ ರೂ.ಗಳ ಸಹಾಯಧನವನ್ನು ಪಡೆದುಕೊಳ್ಳುತ್ತಾರೆ. ರೇಷ್ಮೆ ತೋಟಕ್ಕೆ ಹನಿ ನೀರಾವರಿ ವ್ಯವಸ್ಥೆ ಮಾಡಿಕೊಂಡು ನೀರನ್ನ ಸದ್ಭಳಕೆ ಮಾಡಿಕೊಂಡಿದ್ದಾರೆ ಹಾಗೂ ಕೊಟ್ಟಿಗೆ ಗೊಬ್ಬರವನ್ನು ಬಳಸಿ ಗುಣಮಟ್ಟದ ರೇಷ್ಮೆ ತೋಟ ಬೆಳೆಸಿದ್ದಾರೆ.

ರೇಷ್ಮೆ ಇಲಾಖೆಯಡಿ ಧನ ಸಹಾಯ: ರೇಷ್ಮೆ ಇಲಾಖೆಯಡಿ ರೇಷ್ಮೆ ಗೂಡು ನಿರ್ಮಾಣಕ್ಕಾಗಿ ಶೆಡ್ ನಿರ್ಮಿಸಿಕೊಳ್ಳಲು ೩.೩೭  ರೂ.ಸಹಾಯಧನ ಪಡದುಕೊಳ್ಳುತ್ತಾರೆ. ಡ್ರಿಪ್, ಚಂದ್ರಿಕೆ, ಮೆಡಿಸಿನ್ ಸೇರಿದಂತೆ ಒಟ್ಟು ಐದು ಲಕ್ಷ ಮಿತಿಯವರೆಗೆ ಸಹಾಯಧನ ಪಡೆದುಕೊಂಡಿದ್ದಾರೆ.

ಪ್ರತಿ ಒಂದು ತಿಂಗಳ ಬೆಳೆಗೆ ಸುಮಾರು 20 ಸಾವಿರ ಬಂಡವಾಳ ಹೂಡಿ ಹಿರಿಯೂರು ತಾಲ್ಲೂಕಿನ ಹಲಗಲದ್ದಿ ಚಾಕಿ ಸಾಕಾಣಿಕಾ ಕೇಂದ್ರದಿಂದ ದ್ವಿತಳಿ ಗೂಡಿನ ಮುನ್ನೂರು  ಎರಡನೇ ಜ್ವರದ ಚಾಕಿ ಹುಳು(ರೇಷ್ಮೆ ಹುಳು) ತೆಗೆದುಕೊಂಡು ಬಂದು ೧೫ ದಿನಗಳ ಕಾಲ ಮೇಯಿಸುತ್ತಾರೆ. ನಂತರ ಚಂದ್ರಿಕೆ ಹೊದ್ದಿಸಿ 23 ನೇ ದಿನಕ್ಕೆ  ರೇಷ್ಮೆ ಗೂಡನ್ನು ರಾಮನಗರ ಮಾರುಕಟ್ಟೆಗೆ  ತೆಗೆದುಕೊಂಡು ಹೋಗಿ ಮಾರಾಟ ಮಾಡುತ್ತಾರೆ. ಪ್ರಸ್ತುತ ಒಂದು ಕೆ.ಜಿ.ಗೆ  ಸುಮಾರು 700 ರೂ.ಗಳಿದ್ದು, ಒಂದು ಬೆಳೆಗೆ ಮೂರುವರೆ ಕ್ವಿಂಟಲ್ ರೇಷ್ಮೆ ಗೂಡು ಮಾರಾಟ ಮಾಡಿ ಸುಮಾರು ಒಂದೂವರೆ ಲಕ್ಷದಿಂದ ಎರಡು ಲಕ್ಷದವರಗೆ ಆದಾಯ ಪಡೆಯುತ್ತಿದ್ದಾರೆ.

ರೇಷ್ಮೆ ಬೆಳೆಯಲ್ಲಿ ಯಶಸ್ಸನ್ನು ಕಂಡ ರೈತ ಜಗದೀಶ್ ತಮ್ಮ ಕಾಯಕದ ಬಗ್ಗೆ ಹೀಗೆಂದು ಹೇಳಿದ್ದಾರೆ : ಕಂಪನಿಗಳಲ್ಲಿ ಎಷ್ಟೇ ಕೆಲಸ ಮಾಡಿದರೂ  ಕೇವಲ ನೌಕರನಗಿಯೇ ಇರಬೇಕು, ಅದೇ ನಮ್ಮ ಜಮೀನಿನಲ್ಲಿ ಕೆಲಸ ಮಾಡಿಕೊಂಡು ಸರ್ಕಾರದಿಂದ ಬರುವ ಸೌಲಭ್ಯಗಳನ್ನು ಸದುಪಯೋಗ ಮಾಡಿಕೊಂಡರೆ ಮಾಲೀಕನಾಗಬಹುದು. ಪ್ರಸ್ತುತ ದಿನದಲ್ಲಿ ಅತೀ ಹೆಚ್ಚು ಲಾಭ ತಂದುಕೊಡುತ್ತಿರುವುದು ರೇಷ್ಮೆ ಕೃಷಿ, ಕೇವಲ 22 ದಿನ ಕೆಲಸ ಮಾಡಿದರೆ 23 ನೇ ದಿನಕ್ಕೆ ನಿರೀಕ್ಷಿತ ಆದಾಯ ಬಂದು ಕೈ ಸೇರುತ್ತದೆ.

ರೇಷ್ಮೆ ತಿಂಗಳಿಗೊಂದು ಬೆಳೆಯಾಗಿದ್ದು, ವರ್ಷದಲ್ಲಿ 11 ರಿಂದ 12 ಬೆಳೆ ತೆಗೆಯಬಹುದಾಗಿದೆ.. ವಾರ್ಷಿಕವಾಗಿ 20 ಲಕ್ಷ ಆದಾಯ ಗಳಿಸುತ್ತಿದ್ದೇವೆ. ನಾನು ರೇಷ್ಮೆ ಬೆಳೆ ಬೆಳೆಯಲು ಸಾಥ್ ನೀಡಿದ್ದು, ಸರ್ಕಾರದಿಂದ ಬರುವ ಸಹಾಯಧನ, ನರೇಗಾ ಯೋಜನೆ ಹಾಗೂ ರೇಷ್ಮೆ ಇಲಾಖೆಯಿಂದ ಧನ ಸಹಾಯ ದೊರೆತಿದ್ದರಿಂದ ಬಂಡವಾಳ ಹೂಡಲು ಅನುಕೂಲವಾಯಿತು. ರೇಷ್ಮೆ ಇಲಾಖೆಯ ಸಹಾಯಕ ನಿರ್ದೆಶಕರಾದ ಬಿ.ರಾಜಗೋಪಾಲ್ ಅವರ ಉತ್ತಮ ಮಾರ್ಗದರ್ಶನದಿಂದ ಪರಿಣಾಮಕಾರಿಯಾಗಿ ರೇಷ್ಮೆ ಕೃಷಿ ಮಾಡಲು ಅನುಕೂಲವಾಯಿತು.  ಹಾಗೆಯೇ ಸರ್ಕಾರದ ಸೌಲಭ್ಯಗಳನ್ನ ಸರಿಯಾದ ರೀತಿಯಲ್ಲಿ ಬಳಸಿಕೊಂಡರೆ ಪ್ರತಿಯೊಬ್ಬ ರೈತನೂ ಮಾದರಿ ರೈತನಾಗಬಹುದು ಎನ್ನುತ್ತಾರೆ ಹೆಚ್.ಜಗದೀಶ್.

Leave a Reply

Your email address will not be published. Required fields are marked *